ಕೊರೊನಾ ಲಸಿಕೆ ಕೊರತೆ ನಡುವೆ ಟ್ವಿಟ್ಟರ್ ನೀಲಿ ಗುರುತಿಗಾಗಿ ಕಾದಾಟ!
ನವದೆಹಲಿ, ಜೂನ್ 06: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ ಲಸಿಕೆಗಾಗಿ ಎದುರು ನೋಡುತ್ತಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಟ್ವಿಟ್ಟರ್ ಖಾತೆಯ ಬ್ಲೂಟಿಕ್ ಗಾಗಿ ಹೋರಾಟ ನಡೆಸುತ್ತಿದೆ ಎಂದು ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ವಾಸ್ತವ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಗ್ರೌಂಡಿಗೆ ಇಳಿಯುವಂತೆ ಆಗ್ರಹಿಸಿದೆ. ಅಲ್ಲದೇ, ಕಾಂಗ್ರೆಸ್ ಸರ್ಕಾರಗಳು ಅಸ್ತಿತ್ವದಲ್ಲಿ ಇರುವ ರಾಜ್ಯಗಳಲ್ಲಿ ಕೊವಿಡ್-19 ಲಸಿಕೆ ವಿತರಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದ್ದಾರೆ.
ಮೋಹನ್ ಭಾಗವತ್ ಸೇರಿ ಹಲವು RSS ನಾಯಕರ ಟ್ವಿಟ್ಟರ್ನಲ್ಲೂ ಬ್ಲ್ಯೂಟಿಕ್ ಕಾಣೆ
ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆರ್ಎಸ್ಎಸ್ನ ಪ್ರಮುಖ ನಾಯಕರಾದ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ನೀಡಿದ್ದ ಬ್ಲ್ಯೂಟಿಕ್ಗಳನ್ನು ತೆಗೆದು ಹಾಕಲಾಗಿತ್ತು.
ಸ್ವಾವಲಂಬಿ ಆಗುವಂತೆ ಟ್ವೀಟ್ ಸಂದೇಶ:
"ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಟ್ವಿಟ್ಟರ್ ಖಾತೆಯ ಬ್ಲ್ಯೂಟಿಕ್ಗಾಗಿ ಹೋರಾಟ ನಡೆಸುತ್ತಿದೆ. ನಿಮಗೆ ಕೊವಿಡ್-19 ಲಸಿಕೆ ಬೇಕಿದ್ದಲ್ಲಿ ನೀವೇ ಸ್ವಾವಲಂಬಿಗಳಾಗಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ರಾಹುಲ್ ಗಾಂಧಿಗೆ ತಿರುಗೇಟು:
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಬಿಜೆಪಿ ವಕ್ತಾಯ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ. "ಅವರಿಗೆ ಟ್ವಿಟ್ಟರ್ ಅನ್ನುವುದು ರಾಜಕಾರಣ ಮಾಡುವುದಕ್ಕೆ ಇರುವ ದೊಡ್ಡ ವೇದಿಕೆಯಾಗಿದೆ. ಇಷ್ಟು ದೊಡ್ಡ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಮುನ್ನಡೆಸುವಲ್ಲಿ ಮತ್ತು ಬಡವರಿಗೆ ಉಚಿತ ಪಡಿತರವನ್ನು ನೀಡುವಲ್ಲಿ ಮೋದಿ ಸರ್ಕಾರ ಶ್ಲಾಘನೀಯ ಕೆಲಸ ಮಾಡಿದೆ" ಎಂದು ಪಾತ್ರಾ ಪ್ರತಿಪಾದಿಸಿದರು.