ಗಾಂಧಿ ಕುಟುಂಬಕ್ಕೆ ಜಾಣ ಕಿವುಡು: ನಿರ್ಮಲಾ ಸೀತಾರಾಮನ್ ತಪರಾಕಿ
ಮುಂಬೈ, ಡಿಸೆಂಬರ್ 17: ರಫೇಲ್ ಡೀಲ್ ನ ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ನಿಟ್ಟುಸಿರು ಬಿಟ್ಟಿದೆ. ಆದರೆ ಕಾಂಗ್ರೆಸ್ ರಫೇಲ್ ಡೀಲ್ ವಿಷಯವನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಈಗಾಗಲೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, 'ಗಾಂಧಿ ಕುಟುಂಬಕ್ಕೆ ಜಾಣ ಕಿವುಡುತನದ ಸಮಸ್ಯೆ ಇದೆ. ಗೊತ್ತಿದ್ದು ಗೊತ್ತಿದ್ದೂ ದೇಶದ ಜನತೆಯ ಹಾದಿ ತಪ್ಪಿಸುವ ಕೆಲಸವನ್ನು ಗಾಂಧಿ ಕುಟುಂಬ ಮಾಡುತ್ತಿದೆ. ರಫೇಲ್ ಡೀಲ್ ಕುರಿತು ಜನರ ಮನಸ್ಸಿನಲ್ಲಿ ಸುಳ್ಳಿನ ಬೀಜ ಬಿತ್ತುತ್ತಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ?
ರಫೇಲ್ ಡೀಲ್ ಗೆ ಸಂಬಂಧಿಸಿದ ಬೆಲೆಯ ಮಾಹಿತಿ ಮತ್ತು ಇನ್ನಿತರ ಎಲ್ಲಾ ವಿವರಗಳನ್ನು ನಾವು ನೀಡಿದ್ದೇವೆ. ಎಲ್ಲವೂ ಪಾರ್ದರ್ಶಕವಾಗಿಯೇ ಇದೆ ಎಂಡು ಅವರು ಸಮಜಾಯಿಷಿ ನೀಡಿದರು.
ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಸರ್ಕಾರ ಮಾಡಿಕೊಂಡಿದ್ದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಅದರ ತನಿಖೆಗೆ ಆದೇಶಿಸಬೇಕೆಂದು ಕೋರಲಾಗಿದ್ದ ಎಲ್ಲಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಡಿ.14 ರಂದು ನೀಡಿದ ತೀರ್ಪಿನಲ್ಲಿ ವಜಾಗೊಳಿಸಿತ್ತು. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿತ್ತು.
ರಾಹುಲ್ ಸುಳ್ಳಿಗೆ ಸುಪ್ರೀಂ ಛೀಮಾರಿ: ಅಮಿತ್ ಶಾ ಲೇವಡಿ
ಸುಮಾರು 58,000 ಕೋಟಿ ರೂಪಾಯಿಯ ಈ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.