ಅಮರ್ ಜವಾನ್ ಜ್ಯೋತಿಯನ್ನು ಆರಿಸುತ್ತಿಲ್ಲ, ವಿಲೀನವಷ್ಟೇ: ಸರ್ಕಾರ ಸ್ಪಷ್ಟನೆ
ನವದೆಹಲಿ, ಜನವರಿ 21: ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜ್ಯೋತಿಯನ್ನು ಆರಿಸುತ್ತಿಲ್ಲ ವಿಲೀನ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಭಾವನೆಗೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಸೃಷ್ಟಿಯಾಗಿದೆ, ಆ ವಿವಾದ ರಾಜಕೀಯಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ವಿವಾದದ ತೀವ್ರತೆ ಕಡಿಮೆಯಾದಂತೆ ಕಾಣುತ್ತಿಲ್ಲ.
ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆ ಜೊತೆ ಅಮರ್ ಜವಾನ್ ಜ್ಯೋತಿ ವಿಲೀನ
ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಅಮರ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತದೆ ಎಂಬ ಊಹಾಪೋಹಗಳಿಂದಾಗಿ ಮತ್ತು ವರದಿಗಳಿಂದಾಗಿ ಸಣ್ಣ ಮಟ್ಟದ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದ ರಾಜಕೀಯವಾಗಿಯೂ ಕೆಲವೊಂದು ಟೀಕಾಪ್ರಹಾರಗಳಿಗೆ ಕಾರಣವಾಗಿದೆ.
ಅಮರ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತದೆ ಎಂಬ ವರದಿಗಳಿಗೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಸರ್ಕಾರದ ಮೂಲಗಳು, ಅಮರ ಜವಾನ್ ಜ್ಯೋತಿಯನ್ನು ಆರಿಸುತ್ತಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯಲ್ಲಿ ವಿಲೀನ ಮಾಡಲಾಗುತ್ತದೆ. ಯುದ್ಧ ಸ್ಮಾರಕದ ಬಳಿ ಇರುವ ಜ್ಯೋತಿಯಲ್ಲೇ ಅಮರ ಜವಾನ್ ಜ್ಯೋತಿಯು ಉರಿಯಲಿದೆ ಎಂದು ಸ್ಪಷ್ಟಪಡಿಸಿವೆ.
ವಿವಾದಕ್ಕೆ ಕಾರಣ: ಇಂಡಿಯಾ ಗೇಟ್ ಬಳಿಯಿರುವ ಅಮರ ಜವಾನ್ ಸ್ಮಾರಕದ ಇತಿಹಾಸವನ್ನು ಅರಿತುಕೊಳ್ಳಬೇಕಾಗುತ್ತದೆ. ಅಮರ ಜವಾನ್ ಸ್ಮಾರಕವನ್ನು ಬ್ರಿಟಿಷ್ ಸರ್ಕಾರವು 1914-1921ರ ನಡುವೆ ಪ್ರಾಣ ಕಳೆದುಕೊಂಡ ಬ್ರಿಟಿಷ್ ಆಡಳಿತದ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ನಿರ್ಮಿಸಿತ್ತು.
ಆದಾದ ಬಳಿಕ 1970ರ ದಶಕದಲ್ಲಿ ಪಾಕ್ ಸೇನೆಯ ವಿರುದ್ಧ ಭಾರತ ವಿಜಯದ ನೆನಪಿಗಾಗಿ ಅಮರ ಜವಾನ್ ಸ್ಮಾರಕದಲ್ಲಿ ಅಮರ ಜವಾನ್ ಜ್ಯೋತಿಯನ್ನು ಸ್ಥಾಪನೆ ಮಾಡಲಾಯಿತು.
ಮೊದಲ ಮಹಾಯುದ್ಧದಲ್ಲಿ ಮೃತಪಟ್ಟ 84 ಸಾವಿರ ಸೈನಿಕರು ಮತ್ತು ಬಾಂಗ್ಲಾ ವಿಮೋಚನೆಯ ವೇಳೆಯಲ್ಲಿ ಮೃತಪಟ್ಟ 3,843 ಸೈನಿಕರ ಸ್ಮರಣಾರ್ಥವಾಗಿ ಈ ಜ್ಯೋತಿಯನ್ನು ಬೆಳಗಿಸಲಾಗಿತ್ತು.
ಕೆಲವು ವರ್ಷಗಳ ಹಿಂದೆ, ಅಂದರೆ 2019ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಿದ್ದು, ಫೆಬ್ರವರಿ 25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಅಂದರೆ ಗಾಲ್ವನ್ ಕಣಿವೆಯಲ್ಲಿ ಚೀನಾ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರುಗಳನ್ನು ಈ ಸ್ಮಾರಕದಲ್ಲಿ ಕೆತ್ತಿಸಲಾಗಿದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಹೆಸರುಗಳನ್ನು ಸ್ಮಾರಕದ ಗೋಡೆಗಳ ಮೇಲೆ ಸೇರಿಸಲಾಗಿದೆ. ಈಗ ಇತ್ತೀಚೆಗೆ ನಿರ್ಮಾಣವಾದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅತ್ಯಂತ ಹಳೆಯ ಅಮರ ಜವಾನ್ ಜ್ಯೋತಿಯನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅದರ ಅವಶ್ಯಕತೆ ಇಲ್ಲ ಎಂಬುದು ಕಾಂಗ್ರೆಸ್ ಸೇರಿದಂತೆ ಕೆಲವರ ವಾದ.
ಅಮರ ಜವಾನ್ ಜ್ಯೋತಿಯನ್ನು ನಂದಿಸುವ ವರದಿಗಳನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಮ್ಮ ವೀರ ಸೈನಿಕರ ಪ್ರತೀಕವಾಗಿ ಉರಿಯುತ್ತಿದ್ದ ಅಮರ ಜ್ವಾಲೆಯನ್ನು ಇಂದು ನಂದಿಸುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರಿಗೆ ದೇಶ ಪ್ರೇಮ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೂ ಪರವಾಗಿಲ್ಲ, ನಾವು ನಮ್ಮ ಸೈನಿಕರಿಗಾಗಿ ಅಮರ್ ಜವಾನ್ ಜ್ಯೋತಿಯನ್ನು ಮತ್ತೆ ಬೆಳಗಿಸುತ್ತೇವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು ನಂದಿಸುವುದು ಇತಿಹಾಸವನ್ನು ಅಳಿಸುತ್ತಿರುವುದಕ್ಕೆ ಸಮನಾಗಿದೆ. ಅಮರ್ ಜವಾನ್ ಜ್ಯೋತಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುತ್ತಿದೆ. ನೂರು ಕೋಟಿ ಜನರು ಅದನ್ನು ಪೂಜಿಸುತ್ತಾ ಬೆಳೆದಿದ್ದಾರೆ. ಇತಿಹಾಸವನ್ನು ಕೇಂದ್ರ ಸರ್ಕಾರ ಅಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.