ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ
ನವದೆಹಲಿ, ಡಿಸೆಂಬರ್ 6: ಸಿಬಿಐ ಉನ್ನತ ಅಧಿಕಾರಿಗಳ ಒಳಜಗಳ ವಿವಾದದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ಸುಪ್ರೀಂಕೋರ್ಟ್ ಕಿಡಿಕಾರಿದೆ.
ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳಹಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ಮುಂದುವರಿಸಲಾಯಿತು.
ಬೆಕ್ಕುಗಳಂತೆ ಕಿತ್ತಾಡಿಕೊಂಡ ಸಿಬಿಐ ಅಧಿಕಾರಿಗಳು: ಕೇಂದ್ರದ ಆರೋಪ
ಬುಧವಾರ ಸರ್ಕಾರದ ಪರ ಹೇಳಿಕೆ ನೀಡಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಹಲವು ತಿಂಗಳಿನಿಂದ ಬೆಕ್ಕುಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು.
ಗುರುವಾರ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಆಯ್ಕೆ ಸಮಿತಿಯನ್ನು ಸಂಪರ್ಕಿಸದೆ ಸರ್ಕಾರ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿತು.
ಸಿಬಿಐ ವಿವಾದ: ಸರ್ಕಾರದ ನಡೆ ಸಮರ್ಥಿಸಿಕೊಂಡ ಅಟಾರ್ನಿ ಜನರಲ್
ಇಬ್ಬರೂ ಅಧಿಕಾರಿಗಳ ನಡೆಯನ್ನು ಸರ್ಕಾರ ಗಮನಿಸುತ್ತಾ ಬಂದಿತ್ತು. ಅದು ಮಿತಿ ಮೀರಿದಾಗ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು ಎಂದು ವೇಣುಗೋಪಾಲ್ ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರ ನ್ಯಾಯಸಮ್ಮತವಾಗಿರಬೇಕು
'ಜುಲೈನಿಂದಲೂ ಈ ಪ್ರಕರಣವನ್ನು ಸಹಿಸಿಕೊಂಡು ಬಂದಿದ್ದಿರಿ. ಇಷ್ಟು ದಿನದಿಂದ ಹಾಗೆಯೇ ಉಳಿಸಿಕೊಂಡು ಬಂದ ಸಮಸ್ಯೆ ಬಗ್ಗೆ ಇದ್ದಕ್ಕಿದ್ದಂತೆ ಕ್ರಮ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಹೇಳಿದರು.
'ಸರ್ಕಾರ ನ್ಯಾಯಸಮ್ಮತವಾಗಿರಬೇಕು. ಅಲೋಕ್ ವರ್ಮಾ ಅವರನ್ನು ಅಧಿಕಾರದಿಂದ ತೆಗೆಯುವ ಮುನ್ನ ಆಯ್ಕೆ ಸಮಿತಿಯನ್ನು ಸಂರ್ಪಕಿಸಲು ಕಷ್ಟವೇನಾಗಿತ್ತು?' ಎಂದು ಪ್ರಶ್ನಿಸಿದರು.
ಆಯ್ಕೆ ಸಮಿತಿ ಸಂಪರ್ಕಿಸಲಿಲ್ಲ ಏಕೆ?
ವರ್ಮಾ ಅವರು ಕೆಲವೇ ತಿಂಗಳಿನಲ್ಲಿ ನಿವೃತ್ತರಾಗಲಿರುವಾಗ ಅಲ್ಲಿಯವರೆಗೂ ಏಕೆ ಕಾಯಲಿಲ್ಲ ಮತ್ತು ಆಯ್ಕೆ ಸಮಿತಿಯನ್ನು ಏಕೆ ಸಂಪರ್ಕಿಸಲಿಲ್ಲ? ಅ. 23ರ ರಾತ್ರೋ ರಾತ್ರಿ ಅವರನ್ನು ಅಧಿಕಾರದಿಂದ ತೆಗೆಯಲು ಸರ್ಕಾರವನ್ನು ಪ್ರೇರೇಪಿಸಿದ್ದು ಏನು? ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.
ಕಡ್ಡಾಯ ರಜೆಯ ಮೇಲಿರುವ ಅಲೋಕ್ ಮತ್ತೆ ಆಗುವರೆ ಸಿಬಿಐ ಚೀಫ್?
ಅಸಾಮಾನ್ಯ ಸನ್ನಿವೇಶ
ಅಸಾಮಾನ್ಯ ಸನ್ನಿವೇಶಗಳಿಗೆ ಅಸಾಮಾನ್ಯ ಚಿಕಿತ್ಸೆಗಳು ಬೇಕಾಗುತ್ತದೆ ಎಂದು ಸಿವಿಸಿ ಪ್ರತಿಕ್ರಿಯೆ ನೀಡಿತು.
ಅಸಾಧಾರಣ ಸನ್ನಿವೇಶಗಳು ಎದುರಾಗಿದ್ದರಿಂದ ಸಿವಿಸಿ ಪಕ್ಷಾತೀತವಾಗಿ ಆದೇಶ ಹೊರಡಿಸಿತು. ಇಬ್ಬರು ಅತಿ ಹಿರಿಯ ಅಧಿಕಾರಿಗಳು ಕಿತ್ತಾಡಿಕೊಳ್ಳುತ್ತಾ, ಗಂಭೀರ ಪ್ರಕರಣಗಳ ತನಿಖೆ ನಡೆಸುವುದು ಬಿಟ್ಟು ಪರಸ್ಪರರ ವಿರುದ್ಧ ಪ್ರಕರಣ ತನಿಖೆ ನಡೆಸುತ್ತಿದ್ದರು. ಕರ್ತವ್ಯ ಲೋಪದ ಕಾರಣ ಸಿವಿಸಿ ಕ್ರಮ ತೆಗೆದುಕೊಂಡಿತು ಎಂದು ತುಷಾರ್ ಮೆಹ್ತಾ ಹೇಳಿದರು.
ವರ್ಗಾವಣೆ ಮಾಡಿಲ್ಲ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ವರ್ಗಾವಣೆ ಮಾಡಲಾಗಿಲ್ಲ. ತಮ್ಮನ್ನು ವರ್ಗಾಯಿಸಲಾಗಿದೆ ಎಂಬ ಅಲೋಕ್ ವರ್ಮಾ ಅವರ ವಾದ ಕೃತಕವಾದದ್ದು. ಅದು ವರ್ಗಾವಣೆಯಲ್ಲ. ಇಬ್ಬರು ಅಧಿಕಾರಿಗಳನ್ನು ಅಧಿಕಾರ ಮತ್ತು ಕಾರ್ಯ ಚಟುವಟಿಕೆಗಳಿಂದ ಕೆಳಕ್ಕೆ ಇಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ತಿಳಿಸಿದರು.