ಬೆಕ್ಕುಗಳಂತೆ ಕಿತ್ತಾಡಿಕೊಂಡ ಸಿಬಿಐ ಅಧಿಕಾರಿಗಳು: ಕೇಂದ್ರದ ಆರೋಪ
ನವದೆಹಲಿ, ಡಿಸೆಂಬರ್ 5: ಲಂಚ ಪ್ರಕರಣದ ಆರೋಪಿಯಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಸಿಬಿಐ ವಿವಾದ: ಸರ್ಕಾರದ ನಡೆ ಸಮರ್ಥಿಸಿಕೊಂಡ ಅಟಾರ್ನಿ ಜನರಲ್
ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳಾದ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಇಬ್ಬರೂ ಜಗಳವಾಡುವ ಮೂಲಕ ತನಿಖಾ ಸಂಸ್ಥೆಯ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿದೆ.
ಕಡ್ಡಾಯ ರಜೆಯ ಮೇಲಿರುವ ಅಲೋಕ್ ಮತ್ತೆ ಆಗುವರೆ ಸಿಬಿಐ ಚೀಫ್?
ಅಲೋಕ್ ವರ್ಮಾ ಅವರ ಅರ್ಜಿಯನ್ನು ಬುಧವಾರ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಬೆಕ್ಕುಗಳಂತೆ ಕಿತ್ತಾಡಿಕೊಳ್ಳುತ್ತಿದ್ದ ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದು ಅಗತ್ಯವಾಗಿತ್ತು ಎಂದು ಹೇಳಿದರು.
'ಹಿರಿಯ ಅಧಿಕಾರಿಗಳಿಬ್ಬರೂ ಏನು ಮಾಡುತ್ತಿದ್ದಾರೆ ಎಂದು ಭಾರತ ಸರ್ಕಾರ ಆಶ್ಚರ್ಯಚಕಿತಗೊಂಡು ನೋಡುತ್ತಿತ್ತು. ಅವರಿಬ್ಬರೂ ಬೆಕ್ಕುಗಳಂತೆ ಜಗಳವಾಡುತ್ತಿದ್ದರು' ಎಂದು ವೇಣುಗೋಪಾಲ್ ವಿವರಿಸಿದರು.
ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರ ನಡುವಣ ವಿವಾದವು ತನಿಖಾ ಸಂಸ್ಥೆಯ ಸಮಗ್ರತೆ ಮತ್ತು ಗೌರವವನ್ನು ಬೀದಿಪಾಲು ಮಾಡುತ್ತಿತ್ತು. ಸಂಸ್ಥೆಯ ಕುರಿತಾದ ಜನರ ಆತ್ಮವಿಶ್ವಾಸವನ್ನು ಮರಳಿ ತರುವುದು ನಮ್ಮ ಮೂಲ ಉದ್ದೇಶವಾಗಿತ್ತು ಎಂದು ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಸುಪ್ರೀಂ ನಿರ್ದೇಶನ ಉಲ್ಲಂಘನೆ, ಹಂಗಾಮಿ ಸಿಬಿಐ ಚೀಫ್ ಸಂಕಷ್ಟದಲ್ಲಿ?
ನವೆಂಬರ್ 29ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕರನ್ನು ಯಾವುದೇ ಸಂದರ್ಭದಲ್ಲಿ ರಜೆಯ ಮೇಲೆ ಕಳುಹಿಸುವ ಅಧಿಕಾರ ಹೊಂದಿದೆಯೇ ಅಥವಾ ಇದಕ್ಕೂ ಮುನ್ನ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯನ್ನು ಸಂಪರ್ಕಿಸಬೇಕಿತ್ತೇ ಎಂಬುದನ್ನು ಮೊದಲು ಪರಿಗಣಿಸುವುದಾಗಿ ಹೇಳಿತ್ತು.