ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಬಗ್ಗೆ ಮಾಯಾವತಿ ಏನಂತಾರೆ?
ನವದೆಹಲಿ, ಜುಲೈ 24: ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಬಿಎಸ್ ಪಿ ಮೈತ್ರಿ ಮಾಡಿಕೊಳ್ಳಲಿದೆಯಾ?
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, 'ಕಾಂಗ್ರೆಸ್ ಪಕ್ಷವು ಬಿಎಸ್ಪಿಗೆ ಎಷ್ಟು ಸೀಟು ಹಂಚಿಕೆ ಮಾಡಲಿದೆ ಎಂಬುದರ ಮೇಲೆ ಮೈತ್ರಿ ನಿರ್ಧಾರ ನಿಂತಿದೆ' ಎಂದಿದ್ದಾರೆ.
ಬಿಎಸ್ಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿ
'ಬಿಎಸ್ಪಿ ಬೇಡಿಕೆ ಇಟ್ಟಷ್ಟು ಕ್ಷೇತ್ರಗಳಲ್ಲಿ ನಮಗೆ ಟಿಕೇಟ್ ನೀಡಿದರೆ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆ' ಎಂದು ಅವರು ಹೇಳಿದರು.
ಅಲ್ವಾರ್ ನಲ್ಲಿ ಗೋಕಳ್ಳನೆಂದು ಭಾವಿಸಿ, ರಕ್ಬರ್ ಎಂಬ ವ್ಯಕ್ತಿಯನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಯಾವತಿ, 'ಇದು ಅಪ್ರಬುದ್ಧ ವ್ಯಕ್ತಿಗಳ ಕೃತ್ಯ. ಬಿಜೆಪಿಯ ಮತ್ತು ಅವರ ಬೆಂಬಲಿಗರು ಮಾಡುವ ಕೆಲಸ. ಇದನ್ನೇ ಅವರು ದೇಶಭಕ್ತಿ ಎಂದು ಕರೆಯುತ್ತಾರೆ! ಅಲ್ವಾರ್ ಸಾವಿಗೆ ನಾನು ಸಂತಾಪ ಸೂಚಿಸುತ್ತೇನೆ. ಆದರೆ ಈ ಪ್ರಕರಣದಲ್ಲಿ ಸರಿಯಾದ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ನನಗನ್ನಿಸುತ್ತದೆ. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು' ಎಂದು ಅವರು ಮನವಿ ಮಾಡಿದರು.
'ಬಿಜೆಪಿ ಸರ್ಕಾರ ಸದಾ ಅಪ್ರಬುದ್ಧ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಪರಿಣಿತಿ ಪಡೆದಿದೆ. ಹೊಡೆದು ಸಾಯಿಸುವ ಕೃತ್ಯಗಳೆಲ್ಲ ಅದಕ್ಕೇ ಹೆಚ್ಚಾಗಿದೆ. ಅಮಾಯಕರನ್ನು ಸಾಯಿಸಲು ಸ್ವಾತಂತ್ರ್ಯ ನೀಡಿದಂತಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಜನರ ಪ್ರಾಣವೂ ಅಪಾಯದಲ್ಲಿದೆ' ಎಂದು ಅವರು ಕಳವಳ ವ್ಯಕ್ತಪಡಿಸಿದರು.