ಕೊರೊನಾ ಭೀತಿ ನಡುವೆ ಮೌಲಾನಾ ಸಾದ್ ಆಡಿದ್ದು ಅದೆಂಥ ಮಾತು?
ನವದೆಹಲಿ, ಏಪ್ರಿಲ್ 2: ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ತಬ್ಲಿಘಿ-ಇ-ಜಮಾತ್ ನಡೆಸಿದ ಧಾರ್ಮಿಕ ಸಮಾವೇಶವೊಂದು ದೇಶದ ಹಲವು ರಾಜ್ಯಗಳಿಗೆ ಕೊರೊನಾ ವೈರಸ್ ಸೋಂಕು ಹರಡಲು ಕಾರಣವಾಗಿದೆ.
ದೆಹಲಿಯ ನಿಜಾಮುದ್ದೀನ್ ಪ್ರದೇಶ ಅಲಾಮಿ ಮಾರ್ಕಾಜ್ ಬಂಗ್ಲೆವಾಲಿ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವು ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.
ತಬ್ಲಿಘಿ ಜಮಾತ್ ಅಂದರೆ ಏನು? ಅದರ ಸುತ್ತ ಮುತ್ತ
ಈ ನಡುವೆ ಮೌಲಾನಾ ಮೊಹಮ್ಮದ್ ಸಾದ್ ರವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೊಂದು ಲೀಕ್ ಆಗಿದೆ. ಈ ಆಡಿಯೋ ಕ್ಲಿಪ್ ನ ಸತ್ಯಾಸತ್ಯತೆ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
''ನಾವೆಲ್ಲರೂ ಮಸೀದಿಯಲ್ಲಿದ್ದರೆ, ಜಗತ್ತಿನಲ್ಲಿ ಅಲ್ಲಾಹು ಶಾಂತಿ ಸೃಷ್ಟಿಸುತ್ತಾನೆ. ಸರ್ಕಾರದ ಆದೇಶಗಳನ್ನು ಪಾಲಿಸಬೇಡಿ. ಮಸೀದಿಯಲ್ಲಿರಿ.. ಸಾಯುವ ಪರಿಸ್ಥಿತಿ ಉಂಟಾದರೆ, ಸಾವನ್ನಪ್ಪಲು ಮಸೀದಿಗಿಂತ ಉತ್ತಮ ಜಾಗ ಬೇರೊಂದಿಲ್ಲ'' ಎಂದು ತನ್ನ ಅನುಯಾಯಿಗಳಿಗೆ ಮೌಲಾನಾ ಸಾದ್ ಹೇಳಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಲೀಕ್ ಆಗಿದೆ.
ಆಡಿಯೋದಲ್ಲಿ ಏನಿದೆ.?
''ಈ ಸಂದರ್ಭದಲ್ಲಿ ಮಸೀದಿಗೆ ಹೋಗಬೇಡಿ ಮತ್ತು ಪ್ರಾರ್ಥನೆ ಮಾಡಬೇಡಿ ಅಂತ ಹೇಳುವವರ ಬಗ್ಗೆ ನನಗೆ ಬೇಸರ ಉಂಟಾಗುತ್ತದೆ. ಯಾಕಂದ್ರೆ, ನಾವೆಲ್ಲರೂ ಮಸೀದಿಯಲ್ಲಿದ್ದು, ಪ್ರಾರ್ಥನೆ ಮಾಡಬೇಕಾದ ಸಮಯ ಇದು. ಹೀಗೆ ಮಾಡುವುದರಿಂದ ಅಲ್ಲಾಹು ಜಗತ್ತಿನಲ್ಲಿ ಶಾಂತಿ ಸೃಷ್ಟಿಸುತ್ತಾನೆ'' ಅಂತ ಮೌಲಾನಾ ಸಾದ್ ಹೇಳಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದೆ.
ಸಾವಿರಾರು ಮಂದಿ ನೆರೆದಿದ್ದರು.!
''ಸರ್ಕಾರ ಅಥವಾ ವೈದ್ಯಕೀಯ ಮಾರ್ಗಸೂಚಿಗಳನ್ನು ಪಾಲಿಸಬೇಡಿ. ಸಾಯಲು ಮಸೀದಿಗಿಂತ ಉತ್ತಮ ಜಾಗ ಮತ್ತೊಂದಿಲ್ಲ'' ಅಂತ ಆಡಿಯೋದಲ್ಲಿ ಮೌಲಾನಾ ಸಾದ್ ಹೇಳಿದ್ದಾರೆ ಎಂದು ವರದಿ ಆಗಿದೆ. ಮೌಲಾನಾ ಸಾದ್ ಹೀಗೆ ಭಾಷಣ ಮಾಡುವಾಗ, ನಿಜಾಮುದ್ದೀನ್ ಮಾರ್ಕಾಜ್ ನಲ್ಲಿ ಸಾವಿರಾರು ಮಂದಿ ನೆರೆದಿದ್ದರು ಎನ್ನಲಾಗಿದೆ. ಈ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ತಬ್ಲಿಘಿ ಜಮಾತ್ ಮಸೀದಿಗೆ ಹೋಗಿದ್ದ 9 ಸಾವಿರ ಮಂದಿಗೆ ಕೊರೊನಾ ಅಪಾಯ
ಆಡಿಯೋದ ಅಸಲಿಯತ್ತೇನು.?
ಮೌಲಾನಾ ಸಾದ್ ರವರದ್ದು ಎನ್ನಲಾದ ಲೀಕ್ ಆಗಿರುವ ಆಡಿಯೋದ ಅಸಲಿಯತ್ತಿನ ಬಗೆಗೂ ಕೆಲ ಅನುಮಾನ ಸೃಷ್ಟಿಯಾಗಿದೆ. ಧಾರ್ಮಿಕ ವಿಚಾರದ ನೆಲೆಗಟ್ಟಿನಲ್ಲಿ ಈ ವಿಷಯ ಚರ್ಚೆ ಆಗಿರುವ ಹಿನ್ನಲೆಯಲ್ಲಿ ಆಡಿಯೋ ಬಹಳ ಮಹತ್ವ ಪಡೆದುಕೊಂಡಿದೆ. ಇದರ ಸತ್ಯಾಸತ್ಯತೆಯನ್ನು ತಳಿಯಲು ದೆಹಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಒತ್ತಾಯ ಮಾಡಿದ್ದರೂ ಕೇಳಲಿಲ್ಲ.!
ಲಾಕ್ ಡೌನ್ ಸಂದರ್ಭದಲ್ಲಿ ಬಂಗ್ಲೆವಾಲಿ ಮಸೀದಿಯನ್ನು ಖಾಲಿ ಮಾಡುವಂತೆ ದೆಹಲಿ ಪೊಲೀಸರು ಒತ್ತಾಯಿಸಿದ್ದರೂ, ಅದಕ್ಕೆ ಮೌಲಾನಾ ಸಾದ್ ಮನ್ನಣೆ ಕೊಟ್ಟಿರಲಿಲ್ಲ. ಹೀಗಾಗಿ, ಕೇಂದ್ರ ಗೃಹ ಸಚಿವಾಲಯ ಮಧ್ಯ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಮಾರ್ಚ್ 29 ರಂದು ಮಧ್ಯರಾತ್ರಿ 2 ಗಂಟೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ, ಅಜಿತ್ ದೋವಲ್ ಭೇಟಿ ಕೊಟ್ಟು ಮೌಲಾನಾ ಮನವೊಲಿಸಿದರು. ಬಳಿಕ 167 ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮೌಲಾನಾ ವಿರುದ್ಧ ಎಫ್ಐಆರ್
ಬಹುತೇಕರಿಗೆ ಸೋಂಕು
ನಿಜಾಮುದ್ದೀನ್ ಮಾರ್ಕಾಜ್ ನಲ್ಲಿ ನಡೆದ ಧಾರ್ಮಿಕ ಸಮಾರಂಭಕ್ಕೆ ವಿದೇಶಗಳಿಂದ ಬಂದಿದ್ದ 800ಕ್ಕೂ ಅಧಿಕ ಮಂದಿಯನ್ನು ಸರ್ಕಾರ ಗುರುತಿಸಿದೆ. ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ 1203 ಮಂದಿಯನ್ನು ಇಲ್ಲಿಯವರೆಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 303 ಮಂದಿಗೆ ಕೋವಿಡ್-19 ಸೋಂಕು ಲಕ್ಷಣಗಳು ಕಾಣಿಸಿಕೊಂಡಿದೆ.
ನಿರ್ಲಕ್ಷ್ಯ ಯಾಕೆ.?
ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾದ್ಮೇಲೂ, ನಿಜಾಮುದ್ದೀನ್ ಮಸೀದಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ನೆಲೆಸಿದ್ದರು. ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ತಬ್ಲಿಘಿ-ಇ-ಜಮಾತ್ ನ ಮೌಲಾನಾ ಸಾದ್ ಹಾಗೂ ಇನ್ನಿತರ ಸದಸ್ಯರ ವಿರುದ್ಧ ದೆಹಲಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.