ಮೋದಿ ಸರ್ಕಾರದಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆ: ಮನಮೋಹನ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 1: ದೇಶದ ಇಂದಿನ ಆರ್ಥಿಕ ಸ್ಥಿತಿಯು ತೀವ್ರ ಆತಂಕವನ್ನುಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಆರ್ಥಿಕತೆಕೆಟ್ಟ ನಿರ್ವಹಣೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.
ಆರು ವರ್ಷಗಳಲ್ಲಿ ಕನಿಷ್ಠ ಆರ್ಥಿಕತೆಯನ್ನು ದೇಶ ಕಂಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದ ಎರಡು ದಿನಗಳ ಬಳಿಕ ಇವರು ಹೇಳಿಕೆ ನೀಡಿದ್ದಾರೆ.
ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ 5%; ಆರು ವರ್ಷದಲ್ಲೇ ಕನಿಷ್ಠ
ಭಾರತದ ಆರ್ಥಿಕ ಬೆಳವಣಿಗೆ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ.5ಕ್ಕೆ ಇಳಿಕೆಯಾಗಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿ ದರ ಅಥವಾ ರೆಪೊದರದಲ್ಲಿ ಶೇ.25-40 ಮೂಲಾಂಕ ಅಥವಾ ಶೇ.0.25-ಶೇ.0.40ಯಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಜಿಡಿಪಿ ಬೆಳವಣಿಗೆ ಕನಿಷ್ಠ ಶೇ.7.5ರ ಸರಾಸರಿಯಲ್ಲಿ ಇರಬೇಕಿತ್ತು ಎಂದು ಆರ್ಥಿಕ ತಜ್ಞ ಸುಜಾನ್ ಹಜ್ರಾ ತಿಳಿಸಿದ್ದಾರೆ. ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆ ಶುಕ್ರವಾರ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಉತ್ಪಾದನಾ ವಲಯದ ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಶೇ.12.1ರಿಂದ ಶೇ.0.6ಕ್ಕೆ ಕುಸಿದಿದೆ. ಇದೇ ರೀತಿ ಕೃಷಿ ವಲಯದ ಜಿವಿಎ ಶೇ.5.1ರಿಂದ ಶೇ.2ಕ್ಕೆ ಇಳಿದಿದೆ.
ನಿರ್ಮಾಣ ವಲಯದಲ್ಲಿ ಜಿವಿಎ ಶೇ.9.6ರಿಂದ ಶೇ.5.7ಕ್ಕೆ ಕುಸಿದಿದೆ. ಹೀಗಿದ್ದರೂ, ಗಣಿಗಾರಿಕೆ ವಲಯದ ಬೆಳವಣಿಗೆ ಶೇ.0.4ರಿಂದ ಶೇ.2.7ಕ್ಕೆ ಏರಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2019-20ರ ಸಾಲಿಗೆ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ.7ರಿಂದ ಶೇ.6.9ಕ್ಕೆ ಇತ್ತೀಚೆಗೆ ತಗ್ಗಿಸಿದೆ. ಹಾಗೂ ಬೇಡಿಕೆಯನ್ನು ಹೆಚ್ಚಿಸಲು ಕ್ರಮ ಅಗತ್ಯ ಎಂದಿದೆ. ಚೀನಾದ ಆರ್ಥಿಕ ಬೆಳವಣಿಗೆ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.6.2 ಆಗಿತ್ತು. ಕಳೆದ 27 ವರ್ಷಗಳಲ್ಲಿಯೇ ಕನಿಷ್ಠ ದರ ಇದಾಗಿದೆ.
ಈ ಸಂದರ್ಭದಲ್ಲಿ ಮೌನ ಮುರಿದಿರುವ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೋದಿ ಸರ್ಕಾರ ದ್ವೇಷದ ರಾಜಕಾರಣವನ್ನು ಬಿಟ್ಟು ಬುದ್ದಿವಂತ ಮನಸ್ಸುಗಳನ್ನು ತಲುಪುವ ಮೂಲಕ ಈ ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
"ಇಂದು ಆರ್ಥಿಕತೆಯ ಸ್ಥಿತಿ ತೀವ್ರ ಕಳವಳ ಸೃಷ್ಟಿಸಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವು 5% ದೀರ್ಘಕಾಲದ ನಿಧಾನಗತಿಯ ಮಧ್ಯದಲ್ಲಿತ್ತು ಎನ್ನುವುದನ್ನು ತೋರಿಸುತ್ತದೆ. ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಈ ಮಂದಗತಿಗೆ ಕಾರಣವಾಗಿದೆ' ಎಂದು ಸಿಂಗ್ ಹೇಳಿದರು.
ಈ ಹಾದಿಯಲ್ಲಿ ಮುಂದುವರಿಯಲು ಭಾರತಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಮಾನವ ನಿರ್ಮಿತ ಈ ಬಿಕ್ಕಟ್ಟಿನಿಂದ ನಮ್ಮ ಆರ್ಥಿಕತೆಯನ್ನು ಹೊರಹಾಕಲು ವೆಂಡೆಟ್ಟಾ ರಾಜಕೀಯವನ್ನು ಬದಿಗಿಟ್ಟು ಕೆಲಸ ಮಾಡಬೇಕು ಎಂದರು.
ಸರ್ಕಾರಿ ಬ್ಯಾಂಕುಗಳ ನಾಲ್ಕು ಮೆಗಾ ವಿಲೀನ ಯೋಜನೆಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಸರ್ಕಾರವು ಬಲವಾದ ಹಣಕಾಸು ವ್ಯವಸ್ಥೆಯನ್ನು ಬಯಸುತ್ತಿದೆ, ಮತ್ತು ಬ್ಯಾಂಕಿಂಗ್ ಸುಧಾರಣೆಗಳು ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಹಾದಿಯನ್ನು ಹೊಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.