ನವದೆಹಲಿಯಲ್ಲಿ ಅಲ್ ಖೈದಾ ಉಗ್ರನ ಬಂಧನ
ದೆಹಲಿಯಲ್ಲಿಶಮಿ-ಉರ್-ರಹಮಾನ್ ಎಂಬ ಅಲ್ ಖೈದಾ ಉಗ್ರನ ಸೆರೆ. ಈಶಾನ್ಯ ರಾಜ್ಯದ ಜನರನ್ನು ಸಂಘಟನೆಗೆ ಸೇರಿಸಲು ಭಾರತಕ್ಕೆ ಬಂದಿದ್ದ ಉಗ್ರ.
ನವದೆಹಲಿ, ಸೆಪ್ಟೆಂಬರ್ 18: ಭಾರತದ ಈಶಾನ್ಯ ರಾಜ್ಯಗಳಲ್ಲಿರುವ ಕೆಲವು ಜನರನ್ನು ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿಸುವ ಪ್ರಯತ್ನದಲ್ಲಿ ನಿರತನಾಗಿದ್ದ ಅದೇ ಉಗ್ರ ಸಂಘಟನೆಯ ಏಜೆಂಟ್ ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಶಮಿ-ಉರ್-ರಹಮಾನ್ ಎಂದು ಗುರುತಿಸಲಾಗಿದೆ.
ಉಗ್ರನ ಬಂಧನದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ ಪಿ. ಕುಶ್ವಾಹಾ, '' ಶಮಿಯನ್ನು ಪೂರ್ವ ದೆಹಲಿಯಲ್ಲಿನ ವಿಕಾಸ್ ಮಾರ್ಗ್ ನಲ್ಲಿರುವ ಶಂಕರಪುರ ಬಸ್ ಸ್ಟಾಂಡ್ ನಲ್ಲಿ ಬಂಧಿಸಲಾಗಿದೆ'' ಎಂದು ತಿಳಿಸಿದರು.
ಬಂಧಿತನಿಂದ ಒಂದು ಪಿಸ್ತೂಲು, 9 ಎಂಎಂ ಗುಂಡುಗಳು, ಲ್ಯಾಪ್ ಟಾಪ್, ಮೊಬೈಲ್ ಫೋನ್, ಒಂದು ಬಾಂಗ್ಲಾದೇಶಿ ಸಿಮ್ ಕಾರ್ಡ್ ಹಾಗೂ ಬಾಂಗ್ಲಾದೇಶದ ಕರೆನ್ಸಿ ಹಾಗೂ ಅಮೆರಿಕದ ಡಾಲರ್ ಗಳು ಪತ್ತೆಯಾಗಿವೆ ಎಂದು ಕುಶ್ವಾಹಾ ತಿಳಿಸಿದ್ದಾರೆ.
ಶಮಿಯು ಬಾಂಗ್ಲಾದ ಮೂಲದವನೇ ಆಗಿದ್ದು, ಬ್ರಿಟನ್ ಪೌರತ್ವ ಹೊಂದಿದ್ದಾನೆ ಎಂದ ಕುಶ್ವಾಹಾ, ಈತ ಈಶಾನ್ಯ ರಾಜ್ಯಗಳ ಪ್ರಜೆಗಳನ್ನು ಅದರಲ್ಲೂ ಮುಖ್ಯವಾಗಿ ಭಾರತದೊಳಗೆ ನಿರಾಶ್ರಿತರಾಗಿ ಬಂದು ನೆಲೆಸಿರುವ ರೋಹಿಂಗ್ಯ ಮುಸ್ಲಿಮರನ್ನು ತನ್ನ ಸಂಘಟನೆಗೆ ಸೇರಿಸಲು ಭಾರತಕ್ಕೆ ಬಂದಿದ್ದ ಎಂದು ಹೇಳಿದ್ದಾರೆ.