ದೆಹಲಿ ಹಿಂಸಾಚಾರ ತಡೆಗೆ 'ಜೇಮ್ಸ್ ಬಾಂಡ್' ಅಜಿತ್ ದೋವಲ್
ನವದೆಹಲಿ, ಫೆಬ್ರವರಿ 26: ದೆಹಲಿ ಹಿಂಸಾಚಾರ ಮಿತಿ ಮೀರಿದ್ದು ದೆಹಲಿ ಸ್ಥಿತಿಯನ್ನು ತಹಬದಿಗೆ ತರಲು 'ಜೇಮ್ಸ್ ಬಾಂಡ್' ಎಂದೇ ಕರೆಸಿಕೊಳ್ಳುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆಗಮಿಸಿದ್ದಾರೆ.
ಭಾರಿ ಭದ್ರತೆಯೊಂದಿಗೆ ದೆಹಲಿಯ ಕೆಲವು ಬೀದಿಗಳಲ್ಲಿ ಓಡಾಡಿದ ಅಜಿತ್ ದೋವಲ್, ಕೆಲವು ಸ್ಥಳೀಯರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.
ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು?
ಕೆಲವು ಸ್ಥಳೀಯರೊಂದಿಗೆ ಮಾತನಾಡಿದ ಅಜಿತ್ ದೋವಲ್, 'ಪರಿಸ್ಥಿತಿ ಶಾಂತವಾಗುತ್ತದೆ ಯಾರೂ ಆತಂಕಕ್ಕೆ ಒಳಗಾಗಬೇಡಿ, ನಿಮ್ಮ ಭದ್ರತೆಯೇ ನಮ್ಮ ಆದ್ಯತೆ, ಎಲ್ಲೆಡೆ ಪೊಲೀಸರನ್ನು ನಿಯೋಜಿಸಿದ್ದೇವೆ' ಎಂದರು.
'ಭಾರತ ಎಲ್ಲರದ್ದೂ ನಾವೆಲ್ಲರೂ ಒಟ್ಟಿಗೆ ಇರೋಣ, ಹೇಳುವವರ ಮಾತುಗಳನ್ನು ಕೇಳಬೇಡಿ, ಸುರಕ್ಷಿತವಾಗಿ ಮನೆಯಲ್ಲಿರಿ, ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳಿ' ಎಂದು ಹಿರಿಯ ಮಹಿಳೆಯೊಬ್ಬರಿಗೆ ದೋವಲ್ ಹೇಳಿದರು.
ಮಾಧ್ಯಮಗಳೊಟ್ಟಿಗೆ ಮಾತನಾಡಿದ ದೋವಲ್, ''ಜನರಲ್ಲಿ ಒಗ್ಗಟ್ಟಿನ ಭಾವನೆ ಇದೆ, ಅವರಲ್ಲಿ ದ್ವೇಷದ ಭಾವನೆ ಇಲ್ಲ, ಕೆಲವು ಅಪರಾಧಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ. ಪೊಲೀಸರು ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ, ಅಲ್ಹಾನ ಕೃಪೆಯಿಂದ ಇಲ್ಲೆಲ್ಲಾ ಶಾಂತಿ ನೆಲೆಸುತ್ತಿದೆ'' ಎಂದರು.
ದೆಹಲಿ ಹಿಂಸಾಚಾರ: ಮೂರು ದಿನಗಳ ನಂತರ ಪ್ರಧಾನಮಂತ್ರಿ ಮೋದಿ ಟ್ವೀಟ್
'ಯಾರು ಈ ದೇಶವನ್ನು ಪ್ರೀತಿಸುತ್ತಾರೊ ಅವರು ತಾವಿರುವ ಸಮಾಜವನ್ನು, ನೆರೆ-ಹೊರೆಯವರನ್ನೂ ಪ್ರೀತಿಸಬೇಕು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕಬೇಕು, ಜನರು ಪರಸ್ಪರರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಬೇಕೆ ವಿನಃ ಹೆಚ್ಚು ಮಾಡುವ ಪ್ರಯತ್ನ ಮಾಡಬಾರದು' ಎಂದು ದೋವಲ್ ಹೇಳಿದರು.
ದೆಹಲಿಯ ಕೆಲ ಪ್ರದೇಶಗಳಲ್ಲಿ ಓಡಾಡಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಗೃಹ ಸಚಿವರ ಕಚೇರಿಗೆ ದೋವಲ್ ತೆರಳಿದರು. ಗೃಹ ಕಚೇರಿ ಹಾಗೂ ಪ್ರಧಾನಿ ಕಚೇರಿ ಆದೇಶದ ಮೇರೆಗೆ ದೆಹಲಿ ಪರಿಸ್ಥಿತಿ ನಿಭಾಯಿಸಲು ತಾವು ಬಂದಿದ್ದಾಗಿ ದೋವಲ್ ಮಾಧ್ಯಮಗಳಿಗೆ ಹೇಳಿದರು.