SpiceJet ಏರುವ ಹಾಗಿಲ್ಲ ಹಾಸ್ಯನಟ, ಈ ವಿಡಿಯೋ ಹೇಳುತ್ತಾ ಕಾರಣ!
ನವದೆಹಲಿ, ಜನವರಿ.29: ಬಾಲಿವುಡ್ ಖ್ಯಾತ ಹಾಸ್ಯನಟ ಕುನಾಲ್ ಕಮ್ರಾಗೆ ವಿಮಾನ ಸಂಸ್ಥೆಗಳು ಸಾಲು ಸಾಲಾಗಿ ನಿರ್ಬಂಧ ವಿಧಿಸುತ್ತಿದೆ. ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವಂತೆ ನಡೆದು ಕೊಂಡಿದ್ದಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳುತ್ತಿವೆ.
ಹೌದು, ಇತ್ತೀಚಿಗಷ್ಟೇ ಇಂಡಿಗೋ ವಿಮಾನದಲ್ಲಿ ಮುಂಬೈನಿಂದ ಲಕ್ನೋಗೆ ತೆರಳುತ್ತಿದ್ದ ವೇಳೆಯಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಅತಿರೇಕದ ವರ್ತನೆ ತೋರಿದ್ದರು ಎಂದು ಆರೋಪಿಸಲಾಗಿದೆ. ಹಿರಿಯ ಪತ್ರಕರ್ತರ ಜೊತೆ ತೋರಿದ ವರ್ತನೆಗೆ ಈಗ ದಂಡ ತೆರಬೇಕಾಗಿದೆ.
ಅರ್ನಬ್ ವಿಡಿಯೋ ಮಾಡಿದ ಕುನಾಲ್ಗೆ ಇದೆಂಥ ಶಿಕ್ಷೆ!
ಏರ್ ಇಂಡಿಯಾ, ಗೋ ಏರ್ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳು ಹಾಸ್ಯನಟ ಕುನಾಲ್ ಕಮ್ರಾ ಸಂಚಾರಕ್ಕೆ ನಿರ್ಬಂಧ ವಿಧಿಸಿವೆ. ಮುಂದಿನ ಆದೇಶದವರೆಗೂ ತಮ್ಮ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಮಾನ ಸಂಸ್ಥೆಗಳು ತಿಳಿಸಿವೆ.
|
ಹಿರಿಯ ಪತ್ರಕರ್ತರ ಮೇಲೆ ಪ್ರಶ್ನೆಗಳ ಸುರಿಮಳೆ
ಮುಂಬೈ ಟು ಲಕ್ನೋಗೆ ತೆರಳುತ್ತಿದ್ದ 6E 5317 ಇಂಡಿಗೋ ವಿಮಾನದಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಸಹ ಪ್ರಯಾಣಿಕರಾಗಿದ್ದ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೇ ಅರ್ನಬ್ ಗೋಸ್ವಾಮಿ, ಸುಮ್ಮನೆ ಪುಸ್ತಕ ಓದುತ್ತಾ ಕುಳಿತಿದ್ದರು. ನಂತರ ಘಟನೆಯ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು.
ಕುನಾಲ್ ಗೆ ನಿರ್ಬಂಧ ವಿಧಿಸಿದ ಸ್ಪೈಸ್ ಜೆಟ್ ಸಂಸ್ಥೆ
ಹಾಸ್ಯನಟ ಕುನಾಲ್ ಕಮ್ರಾ ಅವರ ಅತಿರೇಕದ ವರ್ತನೆ ಹಿನ್ನೆಲೆಯಲ್ಲಿ ಸಾಲು ಸಾಲು ವಿಮಾನಯಾನ ಸಂಸ್ಥೆಗಳು ನಿರ್ಬಂಧ ವಿಧಿಸುತ್ತಿವೆ. ಈಗಾಗಲೇ ಏರ್ ಇಂಡಿಯಾ, ಗೋ ಏರ್ ವಿಮಾನಯಾನ ಸಂಸ್ಥೆಗಳು ನಿರ್ಬಂಧಿಸಿದ್ದು, ಇದರ ಬೆನ್ನಲ್ಲೇ ಸ್ಪೈಸ್ ಜೆಟ್ ಕೂಡಾ ಕುನಾಲ್ ಕಮ್ರಾ ಪ್ರಯಾಣಕ್ಕೆ ನಿಷೇಧಿಸಿದೆ. ಈ ಸಂಬಂಧ ಸ್ಪೈಸ್ ಜೆಟ್ ಟ್ವೀಟ್ ಮಾಡಿದ್ದು, ಡಿಜಿಸಿಎ, ಸಹಕಾರಿ ವಿಮಾನಯಾನ ಸಚಿವಾಲಯ ಹಾಗೂ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದೆ.
ಎರಡು ವರ್ಷಗಳ ನಂತರ ನಿರ್ಬಂಧ ಕ್ರಮ
2018ರಲ್ಲಿ ಮೊದಲ ಬಾರಿಗೆ ಮುಂಬೈ ಮೂಲದ ಚಿನ್ನದ ವ್ಯಾಪಾರಿ ಬಿರ್ಜು ಕಿಶೋರ್ ಸಲ್ಲಾ ಮೇಲೆ ನಿರ್ಬಂಧ ವಿಧಿಸಲಾಗಿತ್ತು. 2017, ಅಕ್ಟೋಬರ್.30ರಂದು ಮುಂಬೈನಿಂದ ದೆಹಲಿಗೆ ಹೊರಟಿದ್ದ ವಿಮಾನ ಹೈಜಾಕ್ ಆಗಿರುವ ಬಗ್ಗೆ ಸುಳ್ಳು ಸಂದೇಶವನ್ನು ನೀಡಿದ್ದನು. ಇದರಿಂದ ದೆಹಲಿಗೆ ಹೊರಟಿದ್ದ ವಿಮಾನ ಅಹ್ಮದಾಬಾದ್ನಲ್ಲಿ ಲ್ಯಾಂಡ್ ಆಯಿತು. ಪ್ರಾಧಿಕಾರದ ಪರಿಶೀಲನೆ ವೇಳೆ ಬಿರ್ಜು ಸಲ್ಲಾ ಕುಚೇಷ್ಟೆ ಬಯಲಾಗಿದ್ದು, ಆತನಿಗೆ 5 ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗಿತ್ತು.
ವಿಮಾನದಲ್ಲಿ ಈ ಅಪರಾಧಗಳಿಗೆ ನಿರ್ಬಂಧ
ಭಾರತೀಯ ವಿಮಾನಯಾನ ಪ್ರಾಧಿಕಾರವು ಮೂರು ವಿಭಾಗಗಳಲ್ಲಿ ಅಪರಾಧವನ್ನು ವಿಂಗಡಿಸಿದೆ. ಮೊದಲ ವಿಭಾಗದಲ್ಲಿ ಮೌಖಿಕ ನಿಂದನೆಗೈದ ಪ್ರಯಾಣಿಕರಿಗೆ 3 ತಿಂಗಳವರೆಗೂ ನಿರ್ಬಂಧಿಸಲಾಗುತ್ತದೆ. ಎರಡನೇ ವಿಭಾಗದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ ಅಪರಾಧಕ್ಕೆ 6 ತಿಂಗಳವರೆಗೂ ನಿರ್ಬಂಧ ವಿಧಿಸಲಾಗುತ್ತದೆ. ಪ್ರಾಣ ಬೆದರಿಕೆ ಹಾಗೂ ವಿಮಾನದ ಸುರಕ್ಷತೆಗೆ ಧಕ್ಕೆ ಉಂಟು ಮಾಡುವಂತಾ ನಡುವಳಿಕೆಯನ್ನು ಮೂರನೇ ವಿಭಾಗದಲ್ಲಿ ಸೇರಿಸಿದ್ದು, ಈ ಅಪರಾಧಕ್ಕೆ ಕನಿಷ್ಠ 2 ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗುತ್ತದೆ.
ಪ್ರಯಾಣಿಕರಿಗೆ ನಿರ್ಬಂಧ ವಿಧಿಸುವುದು ಹೇಗೆ?
ವಿಮಾನದ ಕಮಾಂಡರ್ ಆಪಾದಿತನ ಕುರಿತು ವಿಮಾನಯಾನ ಸಂಸ್ಥೆಗೆ ವರದಿ ನೀಡುತ್ತಾರೆ. ಈ ಬಳಿಕ ವಿಮಾನಯಾನ ಸಂಸ್ಥೆಯು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುತ್ತದೆ. ಈ ಸಮಿತಿ ಅಪರಾಧಕ್ಕೆ ಎಷ್ಟು ಅವಧಿ ನಿರ್ಬಂಧ ವಿಧಿಸಬೇಕು ಎಂಬುದನ್ನು ತೀರ್ಮಾನಿಸುತ್ತದೆ. ವಿಮಾನಯಾನ ಸಂಸ್ಥೆ ರಚಿಸಿದ ಸಮಿತಿಯು 30 ದಿನಗಳಲ್ಲೇ ನಿರ್ಬಂಧದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಮಿತಿ ನಿರ್ಬಂಧದ ಅವಧಿಯನ್ನು ತೀರ್ಮಾನಿಸಿದ ನಂತರ ಈ ವೇಳೆಯಲ್ಲಿ ಆಪಾದಿತನು ವಿಮಾನಗಳಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ 30 ದಿನಗಳಲ್ಲಿ ಸಮಿತಿ ತೀರ್ಮಾನ ಕೈಗೊಳ್ಳದಿದ್ದರೆ, ಆಪಾದಿತನ ವಿಮಾನ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ.