ಪಿ ಚಿದಂಬರಂಗೆ ಬಂಧನ ಭೀತಿಯಿಂದ ತಾತ್ಕಾಲಿಕ ನೆಮ್ಮದಿ
ನವದೆಹಲಿ, ಮೇ 06: ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಮೇ 30ರ ತನಕ ಇಬ್ಬರನ್ನು ಬಂಧಿಸದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಸೂಚಿಸಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತಂಡವು ಈಗಾಗಲೇ ಪಿ ಚಿದಂಬರಂ ಹಾಗೂ ಕುಟುಂಬದ ವಿರುದ್ಧ ತನಿಖೆ ನಡೆಸುತ್ತಿವೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಕೋರಿ ತನಿಖಾ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ವಿಶೇಷ ಜಡ್ಜ್ ಓ.ಪಿ ಸೈನಿ ಅವರು ಬಂಧನ ವಿನಾಯಿತಿಯನ್ನು ಮೇ 30ರ ತನಕ ವಿಸ್ತರಿಸಿದರು.
ಚಿದಂಬರಂ ಜೈಲಿಗೆ ಕಳುಹಿಸುವುದೇ 'ಇಡಿ' ನಿರ್ದೇಶಕರ ಗುರಿ!
ಸಿಬಿಐ ಪ್ರಕಾರ, ಮಾರಿಷಿಯಸ್ ಮೂಲದ- ಮ್ಯಾಕ್ಸಿಸ್ ನ ಸಹವರ್ತಿ ಗ್ಲೋಬಲ್ ಕಮ್ಯೂನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್ ನಿಂದ ಏರ್ ಸೆಲ್ ಟೆಲಿಕಾಂನಲ್ಲಿ ಎಂಟುನೂರು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಲು ಅನುಮತಿ ಕೇಳಲಾಗಿತ್ತು. ಅದಕ್ಕೆ ಅನುಮತಿ ಪ್ರಧಾನಿ ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಸದನ ಸಮಿತಿಯಿಂದ ಬರಬೇಕಿತ್ತು. ಆದರೆ ಹಣಕಾಸು ಸಚಿವಾಲಯವು ಅನುಮತಿ ಕೊಟ್ಟಿತ್ತು. ಆಗ ಅದರ ನೇತೃತ್ವ ವಹಿಸಿದ್ದವರು ಚಿದಂಬರಂ.
ಹಣಕಾಸು ಸಚಿವಾಲಯಕ್ಕೆ ಆರು ನೂರು ಕೋಟಿವರೆಗಿನ ಹೂಡಿಕೆಗೆ ಅನುಮತಿ ನೀಡುವ ಅಧಿಕಾರ ಮಾತ್ರ ಇರುತ್ತದೆ. ಸಿಬಿಐ ಆರೋಪಿಸುವಂತೆ, ಅನುಮತಿ ಸಿಕ್ಕ ನಂತರ ಏರ್ ಸೆಲ್ ಟೆಲಿವೆಂಚರ್ಸ್ ನಿಂದ ಕಾರ್ತಿ ಚಿದಂಬರಂಗೆ ನಂಟಿರುವ ಕಂಪೆನಿಗೆ ಇಪ್ಪತ್ತಾರು ಲಕ್ಷ ಪಾವತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಧಿಸಿದಂತೆ ಕಾರ್ತಿ ಹಾಗೂ ಅವರ ಸಂಸ್ಥೆಗೆ ಸಂಬಂಧಿಸಿದ 1.16 ಕೋಟಿ ರುಪಾಯಿಯನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು.
ಪೀಟರ್ -ಇಂದ್ರಾಣಿಗೂ ಲಿಂಕ್ ಇದೆ
ಐಎನ್ಎಕ್ಸ್ ಮೀಡಿಯಾ ಮಾಲಿಕರಾದ, ಈಗ ಜೈಲಿನಲ್ಲಿರುವ ಪೀಟರ್ ಮತ್ತು ಇಂದ್ರಾಣಿಯವರಿಂದ 10 ಲಕ್ಷ ರುಪಾಯಿ ಲಂಚ ಪಡೆದ ಆರೋಪ ಕಾರ್ತಿ ಮೇಲಿದೆ. ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣದಿಂದ ತಮ್ಮ ಪ್ರಭಾವ ಬಳಸಿ ಪಾರು ಮಾಡಲು ಪೀಟರ್ ಮತ್ತು ಇಂದ್ರಾಣಿ ಅವರು ಕಾರ್ತಿ ಚಿದಂಬರಂ ಅವರನ್ನು ಬಳಸಿಕೊಂಡಿದ್ದರು ಎಂಬ ಆರೋಪವೂ ಇದೆ.
ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ
2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು. ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು.
ಕಾರ್ತಿ ಚಿದಂಬರಂ ಸ್ಪರ್ಧೆಗೆ ಅಡ್ಡಿಯಾಗಲಿಲ್ಲ
ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಕೇಂದ್ರ ಸಚಿವ ಇ.ಎಂ. ಸುದರ್ಶನ ನಚಿಯಪ್ಪನ್, ಕಾರ್ತಿ ಉಮೇದುವಾರಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. 1999ರಲ್ಲಿ ತಮಿಳ್ ಮಾನಿಲಾ ಕಾಂಗ್ರೆಸ್ನಲ್ಲಿದ್ದ ನಾಚಿಯಪ್ಪನ್, ಆಗ ಕಾರ್ತಿಯ ತಂದೆ, ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸೋಲಿಸಿದ್ದರು. 2014ರ ಚುನಾವಣೆಯಲ್ಲಿ ಕಾರ್ತಿ ಚಿದಂಬರಂ ಸೋಲು ಅನುಭವಿಸಿದ್ದರು. ಐಎನ್ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳು ಅವರ ಮೇಲಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾರ್ತಿ ಅವರು ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಕಳಂಕಿತ ಕಾರ್ತಿ ಚಿದಂಬರಂ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದಲ್ಲೇ ವಿರೋಧ
ಹೆಚ್ಚಿನ ವಿಚಾರಣೆಗಾಗಿ ಮನವಿ
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಪ್ರಕರಣದಲ್ಲಿ ಚಿದಂಬರಂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಂದ ದೊರೆತ ಅನುಮತಿಯನ್ನು ಕೋರ್ಟ್ಗೆ ಸಲ್ಲಿಸಿದರು.
ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದು, ಅವರಲ್ಲಿ ಆರು ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಉಳಿದ ಐದು ಮಂದಿ ವಿರುದ್ಧವೂ ವಿಚಾರಣೆಗೆ ಈ ಸಂಬಂಧ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಕೋರ್ಟೀಗೆ ವಿವರಿಸಿದರು.