ಅಪಾಯಕಾರಿ ಹಂತಕ್ಕೆ ತಲುಪಿದ ದೆಹಲಿಯ ವಾಯು ಗುಣಮಟ್ಟ
ನವದೆಹಲಿ, ನವೆಂಬರ್ 06: ದೀಪಾವಳಿ ಬೆನ್ನಲ್ಲೇ ದೆಹಲಿಯ ವಾಯುಗುಣಮಟ್ಟ ಅಪಾಯಕಾರಿ ಹಂತವನ್ನು ತಲುಪಿದೆ.
ಈ ಮೊದಲೇ ದೆಹಲಿಯ ವಾಯುಗುಣಮಟ್ಟ ತುಂಬಾ ಕಳಪೆಯಾಗಿತ್ತು, ಇದೀಗ ದೀಪಾವಳಿ ಪಟಾಕಿಗಳ ಹೊಗೆಯೂ ಸೇರಿಕೊಂಡು ಗಾಳಿಯನ್ನು ಮತ್ತಷ್ಟು ಕಲುಷಿತಗೊಳಿಸಿದೆ.
ದೀಪಾವಳಿಗೆ ದೆಹಲಿ ವಾಯುಮಾಲಿನ್ಯ ಹೆಚ್ಚಳ: SAFAR ಕಳವಳ
ದೆಹಲಿ ಸೇರಿದಂತೆ ಉತ್ತರ ಹಾಗೂ ಮಧ್ಯ ಭಾರತದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಜನರು ಪಟಾಕಿ ನಿಷೇಧವನ್ನು ಧಿಕ್ಕರಿಸಲು ಬಿಜೆಪಿಯೇ ಕಾರಣ, ಕೇಸರಿ ಪಕ್ಷವು ಉದ್ದೇಶಪೂರ್ವಕವಾಗಿಯೇ ಪಟಾಕಿ ಸಿಡಿಸುವಂತೆ ಮಾಡಿವೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಆರೋಪಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲೇ ದೀಪಾವಳಿ ನಂತರದ ಅತ್ಯಂತ ಕಳಪೆ ಗಾಳಿ ಗುಣಮಟ್ಟ ಕಂಡುಬಂದಿದ್ದು, ಈ ಮಾಲಿನ್ಯಕ್ಕೆ ದೆಹಲಿ ಸುತ್ತಲಿನ ಕೃಷಿ ತ್ಯಾಜ್ಯದ ಸುಡುವಿಕೆಯ ಹೊಗೆಯೂ ಸೇರಿಕೊಂಡಿದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಗುರುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆ ಎಕ್ಯೂಐ 462ಕ್ಕೆ ತಲುಪಿತ್ತು. ಇಂದು ಬೆಳಗ್ಗೆ 470ರಷ್ಟಿದೆ.
ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸೂರ್ಯನನ್ನು ಮರೆಮಾಚುವಂತೆ ಇಡೀ ದಿನ ದಟ್ಟವಾದ ಹೊಗೆ ಆವರಿಸಿತ್ತು. ಅಕ್ಕಪಕ್ಕದ ನಗರಳಾದ ಫರೀದಾಬಾದ್(460), ಗ್ರೇಟರ್ ನೋಯ್ಡಾ(423), ಘಾಜಿಯಾಬಾದ್(450), ಗುರುಗ್ರಾಮ(478), ನೋಯ್ಡಾ(466)ದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ದಾಖಲಾಗಿತ್ತು.
ಎಎಪಿಗೆ ತಿರುಗೇಟು ನೀಡಿರುವ ದೆಹಲಿಯ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್, ದೀಪಾವಳಿ ಹಿಂದೂಗಳ ಹಬ್ಬವೇ ಹೊರತು ರಾಜಕೀಯ ಪಕ್ಷಗಳದ್ದಲ್ಲ, ರಾಯ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಇರುವ ಹಿಂದೂಗಳಿಗೆ ಅವರ ಹಬ್ಬವನ್ನು ಆಚರಿಸಲು ಬಿಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುವ ಪ್ರಕಾರ, ದೇಶದ ಹಲವಾರು ಇತರೆ ನಗರಗಳು ಹಾಗೂ ಜಿಲ್ಲೆಗಳಲ್ಲಿ ವಾಯುಗುಣಮಟ್ಟ ಹದಗೆಟ್ಟಿದೆ. ಬಾಗ್ಪತ್, ಆಗ್ರಾ, ಉತ್ತರ ಪ್ರದೇಶದ ಬೃಂದಾವನ, ಹಿಸಾರ್, ಜಿಂದ್, ಪಾಣಿಪತ್, ಹರ್ಯಾಣ, ರೋಹ್ಟಕ್ ಹಾಗೂ ರಾಜಸ್ಥಾನದಲ್ಲೂ ವಾಯುಗುಣಮಟ್ಟ ಕುಸಿತಗೊಂಡಿದೆ.
ಶೂನ್ಯದಿಂದ 50ರ ನಡುವಿನ ಎಕ್ಯೂಐ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಹಾಗೂ 401 ರಿಂದ 500ವರೆಗಿನ ಗುಣಮಟ್ಟ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ದೆಹಲಿಯ ಸುತ್ತ ಮುತ್ತಲೂ ವಾಯು ಮಾಲಿನ್ಯ ವಿಪರೀತವಾಗಿದೆ. ಫರಿದಾಬಾದ್ ನಗರದಲ್ಲಿ AQI 469 ದಾಖಲಾಗಿದೆ. ಇನ್ನು ಗ್ರೇಟರ್ ನೋಯ್ಡಾದಲ್ಲಿ AQI 470 ದಾಖಲಾಗಿದೆ. ಇನ್ನು ಗುರ್ಗಾಂವ್ನಲ್ಲಿ 472 ಹಾಗೂ ನೋಯ್ಡಾಗಲ್ಲಿ 475 AQI ದಾಖಲಾಗಿದೆ.
ದೆಹಲಿಯಲ್ಲಿ ದಿಢೀರ್ ವಾಯುಮಾಲಿನ್ಯ ಹೆಚ್ಚಳಕ್ಕೆ ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಜನವರಿ 2022ರ ವರೆಗೆ ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಹಲವರು ನಿರ್ಬಂಧದ ನಡುವೆಯೂ ಪಟಾಕಿ ಸಿಡಿಸಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲಿ ವಾಯು ಮಾಲಿನ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ.
ದೆಹಲಿ ಮಾತ್ರವಲ್ಲ, ಭಾರತದ ಪ್ರಮುಖ ನಗರಗಳಲ್ಲೂ ವಾಯು ಗುಣಮಟ್ಟ ಕುಸಿದಿದೆ. ದೀಪಾವಳಿ ಹಬ್ಬದ ಆಚರಣೆಯಿಂದ ದೇಶದ ಬಹುತೇಕ ಕಡೆ ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಪಟಾಕಿ ಮಾರಾಟ ಕೂಡ ನಿಷೇಧ ಮಾಡಲಾಗಿದೆ. ಆದರೆ ಎಲ್ಲಾ ಕಡೆ ಪಟಾಕಿ ಲಭ್ಯವಿದೆ. ಹೀಗಾಗಿ ಜನರು ಪಟಾಕಿ ಖರೀದಿಸಿ ದೀಪಾವಳಿ ಆಚರಿಸಿದ್ದಾರೆ.
ದೀಪಾವಳಿ ಹಬ್ಬಕ್ಕೂ ಮೊದಲು ಪಟಾಕಿ ನಿರ್ಬಂಧಕ್ಕೆ ಪರ ವಿರೋಧ ವ್ಯಕ್ತವಾಗಿತ್ತು. ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಹಾಕಿ, ಕ್ರಿಸ್ಮಸ್, ಹೊಸ ವರ್ಷ ಆಚರಣೆಗೆ ಪಟಾಕಿಗೆ ಅವಕಾಶ ನೀಡುವುದೇಕೆ ಎಂದು ಹಲವರು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ ಪಟಾಕಿ ನಿಷೇಧ ಅಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಆದರೆ ಸರ್ಕಾರ ವಾಯ ಮಾಲಿನ್ಯ ತಗ್ಗಿಸಲು ಪಟಾಕಿ ನಿಷೇಧ ಹೇರಿತ್ತು. ಇದು ಹಲವು ಕಡೆಗಳಲ್ಲಿ ಪಾಲನೆಯಾಗಿಲ್ಲ. ದೆಹಲಿಯಲ್ಲಿ ಮಾಲಿನ್ಯ ವಿಪರೀತಗೊಂಡಿರುವ ಕಾರಣ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೆಹಲಿ ಸೇರಿದಂತೆ ಎಲ್ಲಾ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಮುಗಿದ ಬಳಿಕ ಹೊಸ ವರ್ಷ ಆಚರಣೆ ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗಲಿದೆ.