ವಾಯು ಮಾಲಿನ್ಯ: ನವದೆಹಲಿಯಲ್ಲಿ ಮುಂದಿನ ಆದೇಶದವರೆಗೂ ಶಾಲೆಗಳು ಬಂದ್
ನವದೆಹಲಿ, ಡಿಸೆಂಬರ್ 2: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಏರಿಕೆ ಆಗುತ್ತಿರುವುದರ ಹಿನ್ನೆಲೆ ಶುಕ್ರವಾರದಿಂದ ಮುಂದಿನ ಆದೇಶದವರೆಗೂ ಶಾಲೆಗಳನ್ನು ಮುಚ್ಚಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ನವದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಹೆಚ್ಚುತ್ತಿರುವುದರ ನಡುವೆಯೂ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಆರಂಭಿಸಿದ್ದಕ್ಕೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ಗುರುವಾರ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡ ನಂತರ ಈ ನಿರ್ಧಾರವನ್ನು ಘೋಷಿಸಲಾಗಿದೆ.
ವಾಯುಮಾಲಿನ್ಯ: ದೆಹಲಿಯಲ್ಲಿ ಡಿ.7ರವರೆಗೆ ಕಟ್ಟಡ ನಿರ್ಮಾಣ, ಟ್ರಕ್ ಓಡಾಟಕ್ಕೆ ನಿರ್ಬಂಧ
"ವಾಯು ಗುಣಮಟ್ಟ ಸುಧಾರಿಸುವ ಮುನ್ಸೂಚನೆಯನ್ನು ಪರಿಗಣಿಸಿ ನಾವು ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ನಿರ್ಧರಿಸಿದ್ದೆವು. ಆದರೆ ತದನಂತರದಲ್ಲಿ ವಾಯು ಮಾಲಿನ್ಯದ ಮಟ್ಟವು ಮತ್ತೆ ಹೆಚ್ಚಿದೆ. ಹೀಗಾಗಿ ಶುಕ್ರವಾರದಿಂದ ಮುಂದಿನ ಆದೇಶದವರೆಗೆ ನಾವು ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ" ಎಂದು ಗೋಪಾಲ್ ರೈ ಹೇಳಿದ್ದಾರೆ. ಇದಕ್ಕೂ ಮೊದಲು ನವೆಂಬರ್ 13 ರಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ನವೆಂಬರ್ 29ರಿಂದ ಪುನರಾರಂಭಗೊಳಿಸಲಾಗಿತ್ತು.
ನವದೆಹಲಿ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ:
ವಾಯುಮಾಲಿನ್ಯದ ಮಟ್ಟ ಹೆಚ್ಚುತ್ತಿದ್ದರೂ ಏನೂ ಆಗುತ್ತಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ದೆಹಲಿ ಮತ್ತು ಎನ್ಸಿಆರ್ ವಲಯದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದರ ನಡುವೆಯೂ ಶಾಲೆಗಳನ್ನು ಏಕೆ ಆರಂಭಿಸಿದ್ದೀರಿ. ವಯಸ್ಕರಿಗೆ ಮನೆಯಿಂದಲೇ ನೌಕರಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ, ಇಂಥ ಸಂದರ್ಭದಲ್ಲಿ ಮಕ್ಕಳನ್ನು ಮಾತ್ರ ಏಕೆ ಒತ್ತಾಯಪೂರ್ವಕವಾಗಿ ಶಾಲೆಗಳಿಗೆ ಬರುವಂತೆ ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ಸುಪ್ರೀಂಕೋರ್ಟ್ ಗುರುವಾರ ತರಾಟೆ ತೆಗೆದುಕೊಂಡಿತು.
ನವದೆಹಲಿಯಲ್ಲಿ ಕೈಗಾರಿಕೆಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ಗೆ ತಿಳಿಸಿದರು. ಅಲ್ಲದೇ, ಶರವೇಗದಲ್ಲಿ ಕೆಲಸಗಳು ನಡೆಯುತ್ತಿದ್ದು, ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆ ತೆರೆದಿರುವುದರ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನೆ:
"ಕೈಗಾರಿಕಾ ಮತ್ತು ವಾಹನಗಳು ಉಂಟು ಮಾಡುತ್ತಿರುವ ವಾಯು ಮಾಲಿನ್ಯವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನೀವು ನಮ್ಮ ಬೆನ್ನಿಗೆ ಗುಂಡು ಹಾರಿಸುವ ಕೆಲಸ ಮಾಡುವಂತಿಲ್ಲ, ಸರಿಯಾದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಾಲೆಗಳನ್ನು ಏಕೆ ತೆರೆದಿದ್ದೀರಿ," ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತು.
ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವುದಕ್ಕೆ ಮುಂದಿನ 24 ಗಂಟೆಗಳಲ್ಲಿ ಯೋಜನೆಯನ್ನು ರೂಪಿಸಿ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗಡುವು ವಿಧಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ವಿಫಲವಾದರೆ ನ್ಯಾಯಾಲಯವೇ ಆದೇಶ ನೀಡಲಿದೆ ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಯನ್ನು ಮುಂದೂಡಲಾಗಿದೆ.
ದೆಹಲಿಯಲ್ಲಿ ಗಾಳಿ ಗುಣಮಟ್ಟದಲ್ಲಿ ತೀವ್ರ ಕುಸಿತ:
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಐಕ್ಯೂ) 419ಕ್ಕೆ ಇಳಿದಿದ್ದು, ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಕನಿಷ್ಠ ಈ ಋತುವಿನ ತಾಪಮಾನ ಸರಾಸರಿಗಿಂತ 13.4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಎನ್ಸಿಆರ್ ವಲಯದ ಫರೀದಾಬಾದ್ 441, ನೋಯ್ಡಾ-404 ಗುರುವಾರ ಬೆಳಗ್ಗೆ ವಾಯು ಗುಣಮಟ್ಟ ಅಪಾಯಕಾರಿ ಹಂತದಲ್ಲೇ ಇತ್ತು. ಘಾಜಿಯಾಬಾದ್ 359, ಗ್ರೇಟರ್ ನೋಯ್ಡಾ 381, ಗುರುಗ್ರಾಮ 361 ನಗರಗಳ ವಾಯುಗುಣಮಟ್ಟವೂ ಅತ್ಯಂತ ಕಳಪೆಯಾಗಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.