ಉತ್ತರಾಖಂಡ ಬಿಜೆಪಿಗೆ ಹಿನ್ನಡೆ, ಕಾಂಗ್ರೆಸ್ ಸೇರ್ಪಡೆಗೊಂಡ ಹಾಲಿ ಸಚಿವ, ಶಾಸಕ
ಡೆಹ್ರಾಡೂನ್, ಅಕ್ಟೋಬರ್ 11: 2022 ರ ವಿಧಾನ ಸಭೆ ಚುನಾವಣೆಗೆ ಪಂಚ ರಾಜ್ಯಗಳು ಸಜ್ಜಾಗುತ್ತಿವೆ. ಉತ್ತರ ಪ್ರದೇಶ, ಗೋವಾ ಮಣಿಪುರ, ಪಂಜಾಬ್ ಮಾತ್ರವಲ್ಲದೇ ಉತ್ತರಾಖಂಡ ರಾಜ್ಯದಲ್ಲೂ ಚುನಾವಣೆ ನಡೆಯಲಿದೆ. ಈ ನಡುವೆ ಉತ್ತರಾಖಂಡದಲ್ಲಿ ರಾಜಕೀಯ ಬೆಳವಣಿಗೆಯೊಂದು ಸಂಭವಿಸಿದೆ.
ಉತ್ತರಾಖಂಡ ರಾಜ್ಯ ಸಚಿವ ಯಶ್ಪಾಲ್ ಆರ್ಯ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದು ಉತ್ತರಾಖಂಡದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ. ಇನ್ನು ಉತ್ತರಾಖಂಡದ ಬಿಜೆಪಿ ಸರ್ಕಾರದ ಸಚಿವ ಯಶ್ಪಾಲ್ ಆರ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಅವರ ಪುತ್ರನೂ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
2022 ರ ವಿಧಾನಸಭೆ ಚುನಾವಣೆ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?
ಸೋಮವಾರ ಸಚಿವ ಯಶ್ಪಾಲ್ ಆರ್ಯ ಹಾಗೂ ಉತ್ತರಾಖಂಡ ಶಾಸಕ ಹಾಗೂ ಯಶ್ಪಾಲ್ ಆರ್ಯರ ಪುತ್ರ ಸಂಜೀವ ಆರ್ಯ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಯಶ್ಪಾಲ್ ಆರ್ಯ ಹಾಗೂ ಸಂಜೀವ ಆರ್ಯ ಕಾಂಗ್ರೆಸ್ನ ಹಿರಿಯ ಮುಖಂಡರುಗಳಾದ ಹರೀಶ್ ರಾವತ್, ರಣ್ದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್ ಸಮ್ಮುಖದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ, "ಇದು ಮನೆಗೆ ಹಿಂದುರಿಗಿ ಬಂದಿದ್ದು," ಎಂದು ಹೇಳಿದ್ದಾರೆ. "ಇಬ್ಬರು ಕೂಡಾ ಕಾಂಗ್ರೆಸ್ಗೆ ಸೇರ್ಪಡೆ ಆಗಿರುವುದು ಉತ್ತರಾಖಂಡದಲ್ಲಿ ಕಾಂಗ್ರೆಸ್ನ ಗಾಳಿ ಮತ್ತೆ ಬೀಸುತ್ತಿದೆ ಎಂಬುವುದರ ಸೂಚನೆ," ಎಂದು ತಿಳಿಸಿದ್ದಾರೆ.
ಯಶ್ಪಾಲ್ ಆರ್ಯ ಆರು ಬಾರಿ ಶಾಸಕರಾಗಿದ್ದರು. ಹಾಗೆಯೇ ಪ್ರಮುಖ ದಲಿತ ನಾಯಕರು ಆಗಿರುವ ಯಶ್ಪಾಲ್ ಆರ್ಯ, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯಶ್ಪಾಲ್ ಆರ್ಯ ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದರು. ಉತ್ತರಾಖಂಡ ಕಾಂಗ್ರೆಸ್ನ ಮಾಜಿ ಅಧ್ಯಕ್ಷರು ಆಗಿದ್ದ ಯಶ್ಪಾಲ್ ಆರ್ಯ 2017 ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಹರೀಶ್ ಜೊತೆ ಮನಸ್ತಾಪ ಇದ್ದ ಕಾರಣದಿಂದಾಗಿ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದರು ಎಂದು ಹೇಳಲಾಗಿದೆ.
2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..
ಈಗ ಐದು ವರ್ಷಗಳ ಬಳಿಕ ಅಂದರೆ ಮುಂದಿನ ವರ್ಷ 2022 ರ ವಿಧಾನ ಸಭೆ ಚುನಾವಣೆಗೂ ಮುನ್ನ ಬಿಜೆಪಿಯನ್ನು ತೊರೆದು ಈ ಪ್ರಮುಖ ದಲಿತ ನಾಯಕ ಯಶ್ಪಾಲ್ ಆರ್ಯ ಕಾಂಗ್ರೆಸ್ಗೆ ತೆಕ್ಕೆಗೆ ಸೇರಿದ್ದಾರೆ. ಇನ್ನು ಈ ಹಿಂದೆ 2017 ರಲ್ಲಿ ಕಾಂಗ್ರೆಸ್ ಅನ್ನು ತೊರೆದು ಯಶ್ಪಾಲ್ ಆರ್ಯ ಬಿಜೆಪಿಗೆ ಸೇರಲು ತನ್ನ ಪುತ್ರನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡದ್ದು ಕಾರಣ ಎಂದು ಕೂಡಾ ಹೇಳಲಾಗಿದೆ.
2017 ರಲ್ಲಿ ಕಾಂಗ್ರೆಸ್ ಅನ್ನು ತೊರೆದು ಯಶ್ಪಾಲ್ ಆರ್ಯ ಬಿಜೆಪಿಗೆ ಸೇರ್ಪಡೆ ಆದ ಬಳಿಕ ಬಿಜೆಪಿಯು ಯಶ್ಪಾಲ್ ಆರ್ಯರ ಪುತ್ರ ಸಂಜೀವ ಆರ್ಯಗೆ ಚುನಾವಣೆಗೆ ಟಿಕೆಟ್ ಅನ್ನು ನೀಡಿತ್ತು. ಇಬ್ಬರು ಕೂಡಾ ಚುನಾವಣೆಯಲ್ಲಿ ಜಯ ಗಳಿಸಿದ್ದರು.
ಈಗ ಬಿಜೆಪಿ ಸರ್ಕಾರದಲ್ಲಿ ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿ ಆಗಿರುವ ವಿಚಾರದಲ್ಲಿ ಯಶ್ಪಾಲ್ ಆರ್ಯ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿದೆ. ಬಿಜೆಪಿ ಈ ಕಾರಣದಿಂದಾಗಿ ಯಶ್ಪಾಲ್ ಆರ್ಯರನ್ನು ಸಮಾಧಾನ ಪಡಿಸುವ ಯತ್ನವನ್ನು ಮಾಡಿದ್ದವು. ಈ ಅತೃಪ್ತಿಗಳ ಬಗ್ಗೆ ವರದಿ ಆಗುತ್ತಿದ್ದಂತೆ ಸೆಪ್ಟೆಂಬರ್ 25 ರಂದು ಬೆಳಗಿನ ಉಪಾಹಾರ ಸಭೆಗಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯಶ್ಪಾಲ್ ಆರ್ಯ ಮನೆಗೆ ಭೇಟಿ ನೀಡಿದ್ದರು. ಬಿಜೆಪಿಯ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈಗ ಯಶ್ಪಾಲ್ ಆರ್ಯ ಹಾಗೂ ಅವರ ಪುತ್ರ, ಶಾಸಕರಾದ ಸಂಜೀವ ಆರ್ಯ ಕಾಂಗ್ರೆಸ್ಗೆ ಮತ್ತೆ ಸೇರ್ಪಡೆ ಆಗಿದ್ದಾರೆ.
(ಒನ್ಇಂಡಿಯಾ ಸುದ್ದಿ)