ಅಗಸ್ಟಾ ವೆಸ್ಟ್ ಲ್ಯಾಂಡ್: ಮೈಕಲ್ ಬಂಧನ ಕಾಂಗ್ರೆಸ್ಗೆ ಉರುಳಾಗಲಿದೆಯೇ? 10 ಅಂಶಗಳು
ನವದೆಹಲಿ, ಡಿಸೆಂಬರ್ 5: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಸ್ಟಿಯನ್ ಮೈಕಲ್ ಕೊನೆಗೂ ಸಿಬಿಐ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತಾಗಿದೆ.
ಐದು ದಿನಗಳ ವಶಕ್ಕೆ ಪಡೆದುಕೊಂಡಿರುವ ಸಿಬಿಐ, ಆತನಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕುವ ವಿಶ್ವಾಸದಲ್ಲಿದೆ.
ದುಬೈನಿಂದ ಗಡಿಪಾರುಗೊಂಡಿದ್ದ ಕ್ರಿಸ್ಟಿಯನ್ ಮೈಕಲ್ ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ಬರುತ್ತಿದ್ದಂತೆಯೇ ಸಿಬಿಐ ತನ್ನ ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಮಧ್ಯಾಹ್ನದ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಆಗಸ್ಟಾ ಹಗರಣ : 5 ದಿನಗಳ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್
ಮೈಕಲ್ನ ಸುದೀರ್ಘ ವಿಚಾರಣೆಗಾಗಿ 14 ದಿನ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ, ಕೋರ್ಟ್ಗೆ ಮನವಿ ಮಾಡಿತ್ತು.
ಬ್ರಿಟಿಷ್ ಪ್ರಜೆಯಾದ ಮೈಕಲ್, ದೇಶದ ಅತಿಗಣ್ಯರಿಗಾಗಿ ಹೆಲಿಕಾಪ್ಟರ್ ಖರೀದಿಸುವ 3,600 ಕೋಟಿ ರೂ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಅವ್ಯವಹಾರ ನಡೆಸಿದ್ದ ಆರೋಪ ಹೊತ್ತಿದ್ದಾನೆ. ಮೂವರು ಮಧ್ಯವರ್ತಿಗಳ ಪೈಕಿ ಮೈಕಲ್ ಪ್ರಮುಖನಾಗಿದ್ದು, ಆತನ ವಿರುದ್ಧ ಸಿಬಿಐ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.
ಮೈಕಲ್ನ ಬಂಧನ ಹಗರಣದ ಮಹತ್ವದ ಸಂಗತಿಗಳನ್ನು ಹೊರಹಾಕುವ ಸಾಧ್ಯತೆ ಇದ್ದು, ಕಾಂಗ್ರೆಸ್ಗೆ ಉರುಳಾಗಲಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ಹತ್ತು ಪ್ರಮುಖ ಅಂಶಗಳು ಇಲ್ಲಿವೆ...
14 ದಿನಗಳ ಬಂಧನಕ್ಕೆ ಕೋರಿಕೆ
ಹಗರಣದಲ್ಲಿನ ಹಣವು ದುಬೈ ಮೂಲದ ಎರಡು ಖಾತೆಗಳಿಗೆ ವರ್ಗಾವಣೆಯಾಗಿದೆ. ಆತನನ್ನು ಕೆಲವು ಬಹುಮುಖ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ 14 ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಸಿಬಿಐ ಪರ ವಕೀಲರು ಪಟಿಯಾಲ ಕೋರ್ಟ್ಗೆ ಮನವಿ ಮಾಡಿದರು.
ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ ಮೈಕಲ್ ಪರ ವಕೀಲರು, ಜಾಮೀನಿಗಾಗಿ ಮನವಿ ಮಾಡಿದರು.
ಅಗಸ್ಟಾ ವೆಸ್ಟ್ ಲ್ಯಾಂಡ್ ಮೈಖೆಲ್ ಹಸ್ತಾಂತರದ ಹಿಂದೆ ಅಜಿತ್ ದೋವಲ್
Array |
ದಿನಕ್ಕೆ ಎರಡು ಗಂಟೆ ಭೇಟಿ
54 ವರ್ಷದ ಮೈಕಲ್ಗೆ ಪ್ರತಿದಿನ ಎರಡು ಗಂಟೆ ತನ್ನ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಒಂದು ಗಂಟೆ ಬೆಳಿಗ್ಗೆ ಮತ್ತು ಒಂದು ಗಂಟೆ ಮಧ್ಯಾಹ್ನ ಇಬ್ಬರೂ ಭೇಟಿ ಮಾಡಬಹುದಾಗಿದೆ.
ಇಂಟರ್ಪೋಲ್ ನೋಟಿಸ್ ಆಧಾರದಲ್ಲಿ ಮೈಕಲ್ನಲ್ಲಿ ಕಳೆದ ವರ್ಷ ಯುಎಇಯಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಮಾರ್ಗದರ್ಶನದಡಿಯಲ್ಲಿ ಮೈಕಲ್ ಗಡಿಪಾರು ಪ್ರಕ್ರಿಯೆ ನಡೆದಿದೆ ಎಂದು ಸಿಬಿಐ ತಿಳಿಸಿದೆ.
ಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿ
ಭಾರತಕ್ಕೆ ಮೊದಲ ಜಯ
ಭಾರತದ ಪಾಲಿಗೆ ಗಡಿಪಾರು ಮನವಿಗಳಲ್ಲಿ ಇದು ಮೊದಲ ಯಶಸ್ಸಾಗಿದೆ. ಇದೇ ರೀತಿ ಆರ್ಥಿಕ ಅಪರಾಧದ ಪ್ರಕರಣ ಎದುರಿಸುತ್ತಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರನ್ನು ಕೂಡ ಗಡಿಪಾರು ಮಾಡುವಂತೆ ಭಾರತ ಪ್ರಯತ್ನ ಮಾಡುತ್ತಿದೆ.
|
ನರೇಂದ್ರ ಮೋದಿ ಹೇಳಿದ್ದು...
ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ಮೈಕಲ್ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಯನ್ನು ಹೇಗೆ ಹಿಡಿದು ದುಬೈನಿಂದ ದೆಹಲಿಗೆ ತಂದಿದ್ದೇವೆ ಎನ್ನುವುದನ್ನು ನೀವು ನೋಡಬೇಕು. ಕಾಂಗ್ರೆಸ್ನ ಆಪ್ತ ವಲಯದಿಂದ ಏನೇನು ಹೊರಬೀಳಲಿದೆ ನೋಡೋಣ ಎಂದಿದ್ದರು.
|
12 ಐಷಾರಾಮಿ ಹೆಲಿಕಾಪ್ಟರ್
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವು 12 ಐಷಾರಾಮಿ ಹೆಲಿಕಾಪ್ಟರ್ಗಳ ಖರೀದಿಗೆ ಸಂಬಂಧಿಸಿದ್ದಾಗಿದೆ. ಈ ಹೆಲಿಕಾಪ್ಟರ್ಗಳನ್ನು ರಾಷ್ಟ್ರಪತಿ, ಪ್ರಧಾನಿ, ಮಾಜಿ ಪ್ರಧಾನಿಗಳು ಮತ್ತು ಇತರೆ ಗಣ್ಯರ ಓಡಾಟಕ್ಕಾಗಿ ಬಳಸಲು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಖರೀದಿ ಒಪ್ಪಂದ ನಡೆದಿತ್ತು.
ಕಿಕ್ ಬ್ಯಾಕ್ ಪಡೆದ ಆರೋಪ
ಭಾರಿ ವಿವಾದ ಕೆರಳಿಸಿದ ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದವನ್ನು 2014ರಲ್ಲಿ ರದ್ದುಗೊಳಿಸಲಾಯಿತು. ಫಿನ್ಮೆಕ್ಕಾನಿಕಾ ಕಂಪೆನಿಯು ಇಟಲಿಯಲ್ಲಿ ಲಂಚ ಆರೋಪದಲ್ಲಿ ಸಿಲುಕಿತು. ಭಾರತದಲ್ಲಿ ಅದು ಒಪ್ಪಂದಕ್ಕಾಗಿ ಕಿಕ್ ಬ್ಯಾಕ್ ಪಡೆದ ಆರೋಪ ಮಾಡಲಾಗಿತ್ತು.
225 ಕೋಟಿ ರೂ ಕಿಕ್ ಬ್ಯಾಕ್
ಅಗಸ್ಟಾ ವೆಸ್ಟ್ ಲ್ಯಾಂಡ್ ಜತೆ ಕಿಕ್ ಬ್ಯಾಕ್ ರೂಪದಲ್ಲಿ ಮೈಕಲ್ 30 ಮಿಲಿಯನ್ ಯುರೋಗಳನ್ನು (225 ಕೋಟಿ ರೂ) ಪಡೆದುಕೊಂಡಿದ್ದಾನೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳ ನಿಗಾದಲ್ಲಿ ಇರುವ ಮೂವರು ಮಧ್ಯವರ್ತಿಗಳಲ್ಲಿ ಮೈಕಲ್ ಕೂಡ ಒಬ್ಬ. ಗಿಡೊ ಹಸ್ಕೆ ಮತ್ತು ಕಾರ್ಲೊ ಗೆರೊಸಾ ಇನ್ನಿಬ್ಬರು ಮಧ್ಯವರ್ತಿಗಳಾಗಿದ್ದಾರೆ.
|
ಸೋನಿಯಾ ಗಾಂಧಿ ಹೆಸರು
ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಆರೋಪಿಯನ್ನಾಗಿ ಮಾಡಲು ಭಾರತದ ತನಿಖಾ ಸಂಸ್ಥೆಗಳು ಮೈಕಲ್ ಮೇಲೆ ಒತ್ತಡ ಹೇರುತ್ತಿದೆ ಎಂದು ಆತನ ಪರ ವಕೀಲರು ಜುಲೈನಲ್ಲಿ ಆರೋಪಿಸಿದ್ದರು.
ಗಡಿಪಾರಿಗೆ ನ್ಯಾಯಾಲಯ ಆದೇಶ
ಆಗಸ್ಟ್ 26ರಂದು ಬ್ರಿಟಿಷ್ ಪ್ರಜೆಯನ್ನು ಮೂರನೇ ದೇಶಕ್ಕೆ ಗಡಿಪಾರು ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಯುಎಇ ನ್ಯಾಯಾಲಯದ ಮೊರೆ ಹೊಕ್ಕಿತ್ತು. ಕೆಲವು ದಿನಗಳ ಬಳಿಕ ನ್ಯಾಯಾಲಯವು ಗಡಿಪಾರು ಸಾಧ್ಯವಿದೆ ಎಂದು ಹೇಳಿತ್ತು. ನವೆಂಬರ್ನಲ್ಲಿ ಆತನ ಗಡಿಪಾರಿಗೆ ಅವಕಾಶ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಸೋಮವಾರ ದುಬೈ ಸರ್ಕಾರ ಮೈಕಲ್ನ ಗಡಿಪಾರಿಗೆ ಅನುವು ಮಾಡಿಕೊಡುವ ಆಡಳಿತಾತ್ಮಕ ಆದೇಶವನ್ನು ಹೊರಡಿಸಿತ್ತು. ಇಂಟರ್ಪೋಲ್ ಮತ್ತು ದುಬೈ ಸಿಐಡಿ ಜೊತೆ ಸಂವಹನ ನಡೆಸಿ ಆತನನ್ನು ಗಡಿಪಾರು ಮಾಡಲಾಯಿತು.