ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣ: ನಿನ್ನೆ 'ಸತ್ತಿದ್ದ' ವ್ಯಕ್ತಿ ನಾಳೆ ಕೋರ್ಟ್ನಲ್ಲಿ ಸಾಕ್ಷಿ ಹೇಳಲಿದ್ದಾರೆ!
ನವದೆಹಲಿ, ಜುಲೈ 31: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದೊಡ್ಡ ಯಡವಟ್ಟು ಮಾಡಿಕೊಂಡು ಪೇಚಿಗೀಡಾಗಿದೆ.
ಪ್ರಕರಣದಲ್ಲಿ ಸಾಕ್ಷಿ ಹೇಳಬೇಕಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಂಗಳವಾರವಷ್ಟೇ ಘೋಷಿಸಿದ್ದ ಇ.ಡಿ., ಈಗ ಅವರು ಗುರುವಾರ ಸಾಕ್ಷಿ ಹೇಳಲು ಹಾಜರಾಗಲಿದ್ದಾರೆ ಎಂದು ತಿಳಿಸಿದೆ.
ಜೈಲಿನಲ್ಲೇ ಈಸ್ಟರ್: ಅಗಸ್ಟಾ ಆರೋಪಿ ಮೈಕಲ್ಗೆ ಜಾಮೀನು ನಿರಾಕರಣೆ
ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಹೊಂದಿದ್ದಾರೆ ಎನ್ನಲಾದ ಕೆಕೆ ಖೋಸ್ಲಾ ಅವರು ಮೃತಪಟ್ಟಿರುವುದಾಗಿ ಇ.ಡಿ ಹೇಳಿತ್ತು. ಹಗರಣದಲ್ಲಿ ಲಂಚ ಪಡೆದ ವ್ಯಕ್ತಿಗಳ ಹೆಸರು ಮತ್ತು ಅವುಗಳ ಮೊತ್ತದ ವಿವರವುಳ್ಳ ಕೆಲವು ಕಾಗದಪತ್ರಗಳು ಅವರ ಬಳಿ ಇದ್ದವು ಎಂದು ತಿಳಿಸಿತ್ತು.
ಬಳಿಕ ಬುಧವಾರ ತಮ್ಮ ಹೇಳಿಕೆ ಬದಲಿಸಿದ ಇ.ಡಿ. ಅಧಿಕಾರಿಗಳು, ಅವರು ಜೀವಂತವಿದ್ದಾರೆ. ಅಗತ್ಯಬಿದ್ದಾಗ ಕೋರ್ಟ್ಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ತಾವು ಖೋಸ್ಲಾ ಅವರ ಮನೆಗೆ ಹೋದ ಸಂದರ್ಭದಲ್ಲೆಲ್ಲ ಅವರು ಸಿಗುತ್ತಿರಲಿಲ್ಲ. ಹೀಗಾಗಿ ಅವರು ಮೃತಪಟ್ಟಿರಬಹುದು ಎಂದು ಕೋರ್ಟ್ಗೆ ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕನ ಹೆಸರು ಉಲ್ಲೇಖಿಸಿದ ಅಗಸ್ಟಾ ಆರೋಪಿ ಮೈಕಲ್
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಅವರು ಕೆಕೆ ಖೋಸ್ಲಾ ಅವರನ್ನು ಕೊಲೆ ಮಾಡಿರಬಹುದು ಎಂದು ಇ.ಡಿಯ ವಕೀಲರು ಹೇಳಿಕೆ ನೀಡಿದ್ದರು.