ಆಗಸ್ಟಾದಲ್ಲಿ ಮೋದಿಯೇ ಲಾಭ ಪಡೆದಿದ್ದಾರೆ : ಕಾಂಗ್ರೆಸ್ ಪ್ರತ್ಯಾರೋಪ
ನವದೆಹಲಿ, ಡಿಸೆಂಬರ್ 05 : ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ವಿರುದ್ಧ ಕಾಂಗ್ರೆಸ್ ಪಕ್ಷವೇ ಮೊದಲು ತನಿಖೆ ನಡೆಸಿ, ಕಂಪನಿಯನ್ನು ಕಪ್ಪುಪಟ್ಟಿಯಲ್ಲಿಟ್ಟಿತ್ತು ಮತ್ತು ಒಪ್ಪಂದದ ಹಣವನ್ನು ವಾಪಸ್ ಪಡೆದುಕೊಂಡಿತ್ತು ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಆದರೆ, ನರೇಂದ್ರ ಮೋದಿಯೇ ಕಂಪನಿಯನ್ನು ರಕ್ಷಿಸುತ್ತಿದ್ದಾರೆ, ಅದರಿಂದ ಲಾಭ ಪಡೆದಿದ್ದಾರೆ ಮತ್ತು ಕಪ್ಪುಪಟ್ಟಿಯಿಂದ ಹೊರತಂದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ನರೇಂದ್ರ ಮೋದಿ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿನ ದಲ್ಲಾಳಿ, 3600 ಕೋಟಿ ರುಪಾಯಿ ಡೀಲ್ ಕುದುರಿಸುವಾಗ ಭಾರತದ ರಾಜಕಾರಣಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪ ಹೊತ್ತಿರುವ ಕ್ರಿಶ್ಚಿಯನ್ ಮೈಕೆಲ್ ನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ.
ಅಗಸ್ಟಾ ವೆಸ್ಟ್ ಲ್ಯಾಂಡ್: ಮೈಕಲ್ ಬಂಧನ ಕಾಂಗ್ರೆಸ್ಗೆ ಉರುಳಾಗಲಿದೆಯೇ? 10 ಅಂಶಗಳು
ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ 225 ಕೋಟಿ ರುಪಾಯಿ ಲಂಚ ಪಡೆದಿದ್ದಾನೆ ಎಂಬ ಆರೋಪ ಹೊತ್ತಿರುವ ಕ್ರಿಶ್ಚಿಯನ್ ಮೈಕೆಲ್ ನನ್ನು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕೂಡ ತನ್ನ ಕಸ್ಟಡಿಗೆ ನೀಡಬೇಕೆಂದು ಪ್ರತ್ಯೇಕ ಅರ್ಜಿ ಸಲ್ಲಿಸಲಿದೆ.
ಎಲ್ಲ ರಹಸ್ಯ ಬಯಲು ಮಾಡಲಿದ್ದಾನೆ ಮೈಕೆಲ್
ಕ್ರಿಶ್ಚಿಯನ್ ಮೈಕೆಲ್ ನನ್ನು ಬಂಧಿಸಿದ ನಂತರ ಮೊದಲ ವಾಗ್ದಾಳಿ ಮಾಡಿದ್ದ ನರೇಂದ್ರ ಮೋದಿಯವರು, ಈ ಹಗರಣದ ಎಲ್ಲ ವಿಷಯವನ್ನು ಬಲ್ಲ ಕ್ರಿಶ್ಚಿಯನ್ ಮೈಕೆಲ್ ಹಲವಾರು ರಹಸ್ಯಗಳನ್ನು ಬಯಲು ಮಾಡಲಿದ್ದಾನೆ, ಸ್ವಲ್ಪ ದಿನ ಕಾಯಿರಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ರಾಜಸ್ಥಾನದಲ್ಲಿ ಕಾಂಗ್ರೆಸ್ಸನ್ನು ಕೆಣಕಿದ್ದರು. ರಾಫೇಲ್ ಡೀಲ್ ಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಮೇಲೆ ಮುಗಿಬಿದ್ದಿರುವ ಬಿಜೆಪಿಗೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಿಂದಾಗಿ ಪ್ರಬಲ ಅಸ್ತ್ರ ಸಿಕ್ಕಿದಂತಾಗಿದೆ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ಸನ್ನು ಬಗ್ಗುಬಡಿಯಲು ಈ ಅಸ್ತ್ರವನ್ನು ಬಳಸು ಬಿಜೆಪಿ ಪ್ರಾರಂಭಿಸಿದೆ.
ಆಗಸ್ಟಾ ಹಗರಣ : 5 ದಿನಗಳ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್
ರಾಹುಲ್ ಗಾಂಧಿ ಹಾರಿಕೆಯ ಉತ್ತರ
ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಈಗಾಗಲೆ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಇದಕ್ಕೂ ಮೊದಲು, ರಫೇಲ್ ಡೀಲ್ ಮಾಡಿಕೊಳ್ಳುವಾಗ ಉದ್ಯಮಿ ಅನಿಲ್ ಅಂಬಾನಿಗೆ ನರೇಂದ್ರ ಮೋದಿಯವರು 30,000 ಕೋಟಿ ಹಣವನ್ನು ಏಕೆ ನೀಡಿದರೆಂದು ಮೊದಲು ಸ್ಪಷ್ಟಪಡಿಸಲಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಆಗಸ್ಟಾ ವೆಸ್ಟ್ ಲ್ಯಾಂಡ್ ಬಗ್ಗೆ ಹೈದರಾಬಾದ್ ನಲ್ಲಿ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗರೆದಾಗ, ರಾಹುಲ್ ಗಾಂಧಿಯವರು ಮತ್ತೆ ರಫೇಲ್ ಹಗರಣದ ಗುರಾಣಿ ಹಿಡಿದರು.
ಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿ
ದೂದ್ ಕಾ ದೂದ್, ಪಾನಿ ಕಾ ಪಾನಿ
ಬ್ರಿಟನ್ನಿನ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ನನ್ನು ಬಂಧಿಸಿರುವುದರಿಂದ ಒಳ್ಳೆಯದೇ ಆಯಿತು. ಏಕೆಂದರೆ, ದೂದ್ ಕಾ ದೂದ್, ಪಾನಿ ಕಾ ಪಾನಿ ಹೋ ಜಾಯೇಗಾ (ಎಲ್ಲ ಸತ್ಯಾಂಶ ಹೊರಬೀಳಲಿದೆ). ಕಾನೂನು ತನ್ನ ಕರ್ತವ್ಯವನ್ನು ತಾನು ಮಾಡುತ್ತದೆ ಎಂದು ಸೋನಿಯಾ ಗಾಂಧಿಯವರ ಅತ್ಯಾಪ್ತರಾಗಿರುವ ಅಹ್ಮದ್ ಪಟೇಲ್ ಅವರು ಪ್ರತಿಕ್ರಿಯಿಸಿದ್ದಾರೆ. ಮೈಕೆಲ್ ಬಂಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಸು ಬಿಸಿ ಹತ್ತಿರುವುದಂತೂ ಸತ್ಯ. ಏಕೆಂದರೆ, ಮೈಕೆಲ್ ಅವರ ತಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಹತ್ತಿರವಾಗಿದ್ದರು ಮತ್ತು ಈ ಪ್ರಕರಣದಲ್ಲಿ ಇಟಲಿ ಮೂಲದ ರಾಜಕಾರಣಿಯೊಬ್ಬರು ಹೆಸರು ಕೂಡ ಕೇಳಿಬಂದಿದೆ. ಸತ್ಯ ಏನಿದೆ, ಯಾವ ರಾಜಕಾರಣಿಯ ಕೈವಾಡವಿದೆ ಎಂಬುದು ಪಾರದರ್ಶಕ ತನಿಖೆ ನಡೆಸಿದ ನಂತರವಷ್ಟೇ ತಿಳಿದುಬರಲಿದೆ. ದೂದ್ ಕಾ ದೂದ್, ಪಾನಿ ಕಾ ಪಾನಿ ಆಗಿಬಿಡಲಿ ಬಿಡಿ.
ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ
ಕಾಂಗ್ರೆಸ್ ಯುವ ನಾಯಕನೇ ಮೈಕೆಲ್ ವಕೀಲ
ಈ ಪ್ರಕರಣದಿಂದಾಗಿ ಕಾಂಗ್ರೆಸ್ ಕಳವಳಕ್ಕೀಡಾಗಿರುವುದು ಸ್ಪಷ್ಟವಾಗಿದೆ. ಏಕೆಂದರೆ, ಕ್ರಿಶ್ಚಿಯನ್ ಮೈಕೆಲ್ ನನ್ನು ಭಾರತೀಯ ಯುವ ಕಾಂಗ್ರೆಸ್ಸಿನ ಕಾನೂನು ಘಟಕದ ರಾಷ್ಟ್ರೀಯ ಇನ್ಚಾರ್ಜ್ ಆಗಿರುವ ಆಲ್ಜೋ ಕೆ ಜೋಸೆಫ್ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಹಗರಣಕ್ಕೂ ಕಾಂಗ್ರೆಸ್ಸಿಗೂ ಮತ್ತು ನಾನು ಪ್ರತಿನಿಧಿಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕೇವಲ ಒಬ್ಬ ವೃತ್ತಿಪರ ವಕೀಲನಾಗಿ, ಇಟಲಿಯ ವಕೀಲರೊಬ್ಬರು ನನಗೆ ಮನವಿ ಮಾಡಿಕೊಂಡಿದ್ದರಿಂದ ಮೈಕೆಲ್ ರನ್ನು ಪ್ರತಿನಿಧಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ನನ್ನು ಜೋಸೆಫ್ ಅವರು ಭೇಟಿಯಾಗಿರುವುದು ಈ ಸಂಶಯಕ್ಕೆ ಕಾರಣವಾಗಿದೆ.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್
ಮೋದಿ ಮೇಲೆಯೇ ಆರೋಪ ಹೊರಿಸಿದ ಕಾಂಗ್ರೆಸ್
ಕಾಂಗ್ರೆಸ್ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷ ದೇಶದ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ. ನರೇಂದ್ರ ಮೋದಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲೆಂದು ಅನಗತ್ಯ ಕೆಸರೆರಚುವ ಕ್ರಿಯೆಯಲ್ಲಿ ತೊಡಗಿದ್ದಾರೆ. ಅವರು ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ರಕ್ಷಿಸುತ್ತಿರುವುದಲ್ಲದೆ, ಅವರು ಈ ಹಗರಣದಲ್ಲಿ ಲಾಭವನ್ನೂ ಪಡೆದಿದ್ದಾರೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಕುರಿತು ಸತ್ಯವನ್ನು ಹುಡುಕುವದರ ಬದಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವಲ್ಲಿ ನಿರತವಾಗಿದೆ ಎಂದು ಬಿಜೆಪಿ ಮೇಲೆ ಆರೋಪ ಹೊರಿಸಿದೆ.