ಮೂರು ವರ್ಷದಲ್ಲಿ ಕೃಷಿ ಉತ್ಪಾದನೆ ಹೆಚ್ಚಳ: ನರೇಂದ್ರ ಮೋದಿ
ನವದೆಹಲಿ, ಜೂನ್ 20: ಕಳೆದ ಮೂರು ವರ್ಷಗಳಲ್ಲಿ ದೇಶದ ಕೃಷಿ ಉತ್ಪಾದನೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮೋ ಆಪ್ ಮೂಲಕ ಬುಧವಾರ ದೇಶದಾದ್ಯಂತ ಸುಮಾರು 600 ಜಿಲ್ಲೆಗಳ ರೈತರ ಜತೆ ಸಂವಾದ ನಡೆಸಿದ ಅವರು, ದೇಶದ ಉಳಿವಿಗೆ ರೈತರು ಅತಿ ಅಗತ್ಯ ಎಂದು ಹೇಳಿದರು.
ವೈರಲ್ ವಿಡಿಯೋ: ಮೋದಿ ಫಿಟ್ನೆಸ್ ಆಡಿಕೊಂಡು ನಕ್ಕ ರಾಹುಲ್ ಗಾಂಧಿ
ರೈತರ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳು ನಡೆಯುತ್ತಿಲ್ಲ. ರೈತರಿಗೆ ನೆರವಾಗಲು ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಅಗತ್ಯವಿದೆ.
ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಸರ್ಕಾರವು ಅವರ ಅಭಿವೃದ್ಧಿಗೆ ಪ್ರಯತ್ನಗಳನ್ನು ಮಾಡುತ್ತಿದೆ. ರೈತರಿಗೆ ತಮ್ಮ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರವು ವ್ಯವಸ್ಥೆಯಲ್ಲಿನ ಮಧ್ಯವರ್ತಿಗಳನ್ನು ತೆಗೆದುಹಾಕಲು ಪ್ರಯತ್ನಿಸಿದೆ. ಈ ಮೂಲಕ ಉತ್ಪನ್ನಗಳನ್ನು ನೇರವಾಗಿ ರೈತರನ್ನು ತಲುಪಿಸಬಹುದು ಎಂದು ಹೇಳಿದರು.
ತಮ್ಮ ಸರ್ಕಾರವು 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಮಾಡುವ ಗುರಿಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಇದಕ್ಕಾಗಿ ರೈತರಿಗೆ ಎಲ್ಲ ರೀತಿಯ ನೆರವುಗಳನ್ನು ನೀಡಲಾಗುತ್ತಿದೆ ಎಂದರು.
ಮೋದಿ ಅನ್ಯಗ್ರಹಕ್ಕೂ ಹೋಗ್ತಾರೆ: ಶಿವಸೇನೆ ವ್ಯಂಗ್ಯ
ರೈತರ ಪ್ರಗತಿಗಾಗಿ ಸರ್ಕಾರ ಕೆಲದ ಮಾಡುತ್ತಿರುವ ಪ್ರಮುಖ ವಲಯಗಳು ಕುರಿತ ಪಟ್ಟಿ ನೀಡಿದ ಮೋದಿ, ಬೆಳೆದ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗಬೇಕು. ಬೆಳೆಗಳು ಹಾಳಾಗದಂತೆ ನೋಡಿಕೊಳ್ಳಬೇಕು ಮತ್ತು ಆದಾಯದ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಬಜೆಟ್ನಲ್ಲಿ ಕೃಷಿಗಾಗಿ 2 ಲಕ್ಷ ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಇಂದು ದಾಖಲೆ ಪ್ರಮಾಣದಲ್ಲಿ ಬೇಳೆ ಕಾಳುಗಳು, ಹಣ್ಣು, ಹಾಲು ಮತ್ತು ತರಕಾರಿ ಉತ್ಪಾದನೆಯಾಗುತ್ತಿದೆ.
ನೀಲಿ ಕ್ರಾಂತಿಯ ಮೂಲಕ ಮೀನುಗಾರಿಕೆ ಕ್ಷೇತ್ರವು ಶೇ 26ರಷ್ಟು ಏರಿಕೆ ಕಂಡಿದೆ. ಪಶುಸಂಗೋಪನಾ ಇಲಾಖೆ ಕೂಡ ಶೇ 24ರಷ್ಟು ಹೆಚ್ಚಳ ಕಂಡಿದೆ ಎಂದು ತಿಳಿಸಿದರು.
ದೇಶದ ರೈತರಿಗೆ ಉತ್ಪನ್ನಕ್ಕೆ ತಕ್ಕ ಬೆಲೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರವು ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿನ ಮೊತ್ತದ ದರ ನೀಡಿ ಉತ್ಪನ್ನಗಳನ್ನು ಖರೀದಿಸುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಜಾರಿಗೆ ತರಲು ಘೋಷಿಸಲಾಗಿದೆ.
2017-18ರ ಅವಧಿಯಲ್ಲಿ ಆಹಾರ ಬೆಳೆಗಳ ಉತ್ಪಾದನೆ 280 ಮಿಲಿಯನ್ ಟನ್ಅನ್ನೂ ಮೀರಿದೆ. 2010-2014ರ ಅವಧಿಯಲ್ಲಿ ಸರಾಸರಿ ಉತ್ಪಾದನೆಯು 250 ಮಿಲಿಯನ್ ಟನ್ನಷ್ಟಿತ್ತು.
ಇದೇ ರೀತಿ ಧಾನ್ಯಗಳ ಸರಾಸರಿ ಉತ್ಪಾದನೆ ಶೇ 10.5ರಷ್ಟು ಏರಿಕೆಯಾಗಿದ್ದರೆ, ತೋಟಗಾರಿಕಾ ಬೆಳೆಗಳಲ್ಲಿ ಶೇ 15ರ ಏರಿಕೆಯಾಗಿದೆ.
ಬಿತ್ತನೆಗೆ ಮುನ್ನ, ಬಿತ್ತನೆ ಬಳಿಕ ಮತ್ತು ಕಟಾವಿನ ನಂತರ ಹೀಗೆ ಕೃಷಿಯ ಸಂಪೂರ್ಣ ಪ್ರಕ್ರಿಯೆಯಲ್ಲಿ ರೈತರಿಗೆ ಸಹಾಯ ಮಾಡಲು ಬದ್ಧರಾಗಿರುವುದಾಗಿ ಹೇಳಿದರು.
ಕರ್ನಾಟಕ, ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಜನರೊಂದಿಗೆ ಅವರು ಸಂವಾದ ನಡೆಸಿದರು.