'ಆಂದೋಲನ ನಿಲ್ಲದು, ಜು. 22 ರಂದು ದೆಹಲಿ ಸಂಸತ್ತಿನ ಹೊರಗೆ ರೈತರ ಪ್ರತಿಭಟನೆ': ಟಿಕಾಯತ್
ನವದೆಹಲಿ, ಜು.13: ಕೇಂದ್ರ ಸರ್ಕಾರದ ಮೂರು ವಿವಾದಾದ್ಮಕ ಕೃಷಿ ಕಾಯ್ದೆಗಳ ವಿರುದ್ದ ಪಟ್ಟು ಬಿಡದೆ ಪ್ರತಿಭಟಿಸುತ್ತಿರುವ ರೈತರು ಜುಲೈ 22 ರಂದು ಸಂಸತ್ತಿನ ಹೊರಗೆ ಮತ್ತೊಂದು ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್, ''ಕೇಂದ್ರವು ಮಾತುಕತೆಗೆ ಸಿದ್ಧರಿಲ್ಲದ ಕಾರಣ ರೈತರ ಪ್ರತಿಭಟನೆ ಮುಂದುವರಿಯುತ್ತದೆ. ನಾವು ಜುಲೈ 22 ರಂದು ದೆಹಲಿಗೆ ಹೋಗಿ ಸಂಸತ್ತಿನ ಹೊರಗೆ ಕುಳಿತುಕೊಳ್ಳುತ್ತೇವೆ. ಪ್ರತಿದಿನ 200 ಜನರು ಹೋಗುತ್ತೇವೆ,'' ಎಂದು ತಿಳಿಸಿದ್ದಾರೆ.
'ಬಿಜೆಪಿ ನಾಯಕರು ಬರಲು ಬಿಡಲಾರೆವು': ಪೊಲೀಸರು, ರೈತರ ನಡುವೆ ಘರ್ಷಣೆ
ಮತ್ತೊಂದೆಡೆ, ''ಮಾನ್ಸೂನ್ ಅಧಿವೇಶನದಲ್ಲಿ ಸಂಸತ್ ಭವನದ ಹೊರಗೆ ಯೋಜಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್ನ ವಿವಿಧ ಭಾಗಗಳ ರೈತರು ದೆಹಲಿಯತ್ತ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ,'' ಎಂದು ಸೋಮಿಯುಕ್ತ್ ಕಿಸಾನ್ ಮೋರ್ಚಾ (ಎಸ್ಕೆಎಂ) ಸೋಮವಾರ ಹೇಳಿದೆ.
''ಜುಲೈ 22 ರಿಂದ ಪ್ರಾರಂಭವಾಗುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವ ಯೋಜನೆಯನ್ನು ನಾವು ಈಗಾಗಲೇ ಘೋಷಿಸಿದ್ದೇವೆ. ಲುಧಿಯಾನ, ಸಂಗ್ರೂರ್, ಮಾನ್ಸಾ, ಭಟಿಂಡಾ, ರೋಪರ್, ಫಝಿಲ್ಕಾ ಮತ್ತು ಫರೀದ್ಕೋಟ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಡಜನ್ಗಟ್ಟಲೆ ರೈತರು ಈಗಾಗಲೇ ಸಿಂಗು ಮತ್ತು ಟಿಕ್ರಿ ಗಡಿಗಳಿಗೆ ಆಗಮಿಸಲು ಪ್ರಾರಂಭಿಸಿದ್ದಾರೆ,'' ಎಂದು ತಿಳಿಸಿತ್ತು.
ರೈತರ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಜುಲೈ 17 ರೊಳಗೆ ವಿರೋಧ ಪಕ್ಷಗಳಿಗೆ ಎಚ್ಚರಿಕೆ ಪತ್ರವನ್ನು ಕಳುಹಿಸುವ ಉದ್ದೇಶವನ್ನು ಕೂಡಾ ಪುನರುಚ್ಚರಿಸಿತ್ತು.
'ಕೃಷಿ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತರಬಹುದು' ಎಂದ ಪವಾರ್ ಹೇಳಿಕೆಗೆ ಕೇಂದ್ರ ಸ್ವಾಗತ
"ನಂತರ, ಜುಲೈ 22 ರಿಂದ ಅಧಿವೇಶನ ಮುಗಿಯುವವರೆಗೆ ಪ್ರತಿದಿನ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ, ಪ್ರತಿ ರೈತ ಸಂಘಟನೆಯ ಐದು ಸದಸ್ಯರು ಸೇರಿದಂತೆ ಕನಿಷ್ಠ 200 ರೈತರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ," ಎಂದು ಹೇಳಿತ್ತು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಹಲವಾರು ಹಂತಗಳಲ್ಲಿ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿದೆ. ಸದ್ಯ ಈ ಕಾನೂನುಗಳನ್ನು ಪ್ರಮುಖ ಕೃಷಿ ಸುಧಾರಣೆಗಳೆಂದು ಹೇಳಿಕೊಂಡಿರುವ ಕೇಂದ್ರ ಸರ್ಕಾರ ಕಾನೂನಿನಲ್ಲಿ ಕೆಲವು ತಿದ್ದುಪಡಿ ಮಾಡಲು ಸಿದ್ದವಾಗಿದೆ. ಆದರೆ ರೈತ ಸಂಘಟನೆಗಳು ಈ ''ಕಾಯ್ದೆಯನ್ನೇ ರದ್ದು ಮಾಡಬೇಕು'' ಎಂದು ಆಗ್ರಹಿಸಿದೆ.
(ಒನ್ಇಂಡಿಯಾ ಸುದ್ದಿ)