ನ್ಯಾಯಾಂಗ ನಿಂದನೆ ಆರೋಪ; ಗೊಗೊಯ್ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಣೆ
ನವದೆಹಲಿ, ಫೆಬ್ರವರಿ 27: ನ್ಯಾಯಾಂಗ ವ್ಯವಸ್ಥೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದರೆಂಬ ಆರೋಪದ ಮೇಲೆ ನಿವೃತ್ತ ಸಿಜೆಐ ಹಾಗೂ ರಾಜ್ಯ ಸಭಾ ಸದಸ್ಯ ರಂಜನ್ ಗೊಗೊಯ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂಬ ಅರ್ಜಿಯನ್ನು ನಿರಾಕರಿಸಲಾಗಿದೆ.
ಗೊಗೊಯ್ ವಿರುದ್ಧ ಪ್ರಕರಣ ದಾಖಲಿಸುವ ಸಂಬಂಧ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅನುಮತಿ ನಿರಾಕರಿಸಿದ್ದಾರೆ.
ಮೊದಲು ವಾಸ್ತವ ತಿಳಿದುಕೊಳ್ಳಿ: ಸಂಸದೆ ಮೊಯಿತ್ರಾಗೆ ಮಾಜಿ ಸಿಜೆಐ ರಂಜನ್ ಗೊಗೊಯ್ ತಿರುಗೇಟು
ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗೊಗೊಯ್, "ದೇಶದ ನ್ಯಾಯಾಂಗ ವ್ಯವಸ್ಥೆ ಕುಸಿಯುತ್ತಿದೆ. ನ್ಯಾಯಕ್ಕಾಗಿ ವ್ಯಕ್ತಿಯೊಬ್ಬ ನ್ಯಾಯಾಲಯದ ಮುಂದೆ ಬಂದು ನಿಂತರೆ ಅವನಿಗೆ ಸಕಾಲದಲ್ಲಿ ತೀರ್ಪು ಬರುವ ಸಾಧ್ಯತೆಯೇ ಕಡಿಮೆಯಿದೆ" ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರೋಧಿಸಿದ್ದ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ, "ಗೊಗೊಯ್ ಅವರು ಈ ಹೇಳಿಕೆಯಿಂದ ಜನರ ದೃಷ್ಟಿಯಲ್ಲಿ ನ್ಯಾಯಾಲಯದ ಘನತೆಯನ್ನು ಕುಂದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು" ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಸಂಬಂಧ ಗೋಖಲೆ ಅವರಿಗೆ ಪತ್ರ ಬರೆದಿರುವ ವೇಣುಗೋಪಾಲ್ ಅವರು, "ನಾನು ಗೊಗೊಯ್ ಅವರ ಸಂದರ್ಶನ ವೀಕ್ಷಿಸಿದೆ. ಅವರ ಆ ಹೇಳಿಕೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕುರಿತು ತೀವ್ರ ಹತಾಶೆ ಬಿಂಬಿಸಿದೆ. ಅವರ ಅಭಿಪ್ರಾಯಗಳು ನ್ಯಾಯಾಲಯದ ಘನತೆ ಕಡಿಮೆ ಮಾಡುವ ರೀತಿಯಲ್ಲಿರಲಿಲ್ಲ. ಹೀಗಾಗಿ ಗೊಗೊಯ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಲಾಗಿದೆ" ಎಂದು ತಿಳಿಸಿದ್ದಾರೆ.