ವಿವಾದಾತ್ಮಕ ಹೇಳಿಕೆ ವಾಪಾಸ್ ಪಡೆದು 25 ಪ್ರಶ್ನೆ IMA ಮುಂದಿಟ್ಟ ರಾಮ್ದೇವ್
ನವದೆಹಲಿ, ಮೇ 25: ಬಾಬಾ ರಾಮ್ದೇವ್ ಅಲೋಪತಿ ಚಿಕಿತ್ಸೆಯ ಬಗ್ಗೆ ಆಡಿದ ಮಾತು ಸಾಕಷ್ಟು ವಿವಾದ ಮತ್ತು ಟೀಕೆಗೆ ಗುರಿಯಾದ ನಂತರ ಆ ಹೇಳಿಕೆಯನ್ನು ವಾಪಾಸ್ ಪಡೆದುಕೊಂಡಿದ್ದರು. ಆಡಿದ ಮಾತಿಗೆ ಕ್ಷಮೆಯಾಚನೆಯನ್ನು ಕೂಡ ಮಾಡಿದ್ದಾರೆ. ಆದರೆ ಈಗ ಭಾರತೀಯ ವೈದ್ಯಕೀಯ ಸಂಘದ ಮುಂದೆ 25 ಪ್ರಶ್ನೆಗಳನ್ನು ಇಟ್ಟಿದ್ದಾರೆ. ಟ್ವೀಟ್ನಲ್ಲಿ ಬಹಿರಂಗಪತ್ರವೊಂದನ್ನು ಬರೆದು ಈ ಪ್ರಶ್ನೆಗಳನ್ನು ಬಾಬಾ ರಾಮ್ದೇವ್ ಕೇಳಿದ್ದಾರೆ.
ಬಾಬಾ ರಾಮ್ದೇವ್ ಅಲೋಪತಿ ಚಿಕಿತ್ಸೆಯ ಬಗ್ಗೆ 25 ಪ್ರಶ್ನೆಗಳನ್ನು ಬಹಿರಂಗವಾಗಿ ಕೇಳಿದ್ದಾರೆ. ಅಲೋಪತಿ ಚಿಕಿತ್ಸೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂಥ ಸಮಸ್ಯೆಗಳಿಗೆ ಅಲೋಪತಿ ಶಾಶ್ವತ ಪರಿಹಾರಗಳನ್ನು ನೀಡುತ್ತದೆಯೇ? ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ಗೆ ಪ್ರಶ್ನಿಸಿದ್ದಾರೆ.
"ಥೈರಾಯ್ಡ್, ಸಂಧಿವಾತ, ಕೊಲೈಟಿಸ್ ಮತ್ತು ಆಸ್ತಮಾ ರೋಗಗಳಿಗೆ ಶಾಶ್ವತ ಚಿಕಿತ್ಸೆ ಅಲೋಪತಿ ಔಷಧ ಪದ್ದತಿ ಹೊಂದಿದೆಯೇ?" ಎಂದು ಬಾಬಾ ರಾಮ್ದೇವ್ ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮುಂದುವರಿದು ಅಲೋಪತಿಯಲ್ಲಿ ಕೊಬ್ಬಿನ ಪಿತ್ತಜನಕಾಂಗ ಮತ್ತು ಪಿತ್ತಜನಕಾಂಗದ ಸಿರೋಸಿಸ್ಗೆ ಔಷಧಿಗಳಿವೆಯೇ ಎಂದು ರಾಮದೇವ್ ಕೇಳಿದ್ದಾರೆ.
"ನೀವು ಕ್ಷಯ ರೋಗ ಮತ್ತು ಸಿಡುಬು ರೋಗಕ್ಕೆ ಪರಿಹಾರವನ್ನು ಕಂಡುಕೊಂಡಂತೆ, ಪಿತ್ತಜನಕಾಂಗದ ಕಾಯಿಲೆಗಳ ಚಿಕಿತ್ಸೆ ಗಮನ ಹರಿಸಿ. ಅಷ್ಟಕ್ಕೂ ಅಲೋಪತಿ ಕೇವಲ 200 ವರ್ಷ ಹಳೆಯ ಪದ್ಧತಿ" ಎಂದು ಬಾಬಾ ರಾಮ್ದೇವ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಹಾರ್ಟ್ ಬ್ಲಾಕೇಜ್ಗೆ ಶಸ್ತ್ರಚಿಕಿತ್ಸೆಯಿಲ್ಲದ ಯಾವ ಚಿಕಿತ್ಸೆಯನ್ನು ಫಾರ್ಮಾ ಇಂಡಸ್ಟ್ರಿ ಹೊಂದಿದೆ? ಕೊಲೆಸ್ಟ್ರಾಲ್ಗೆ ಯಾವ ಚಿಕಿತ್ಸೆಯಿದೆ? ಫಾರ್ಮಾ ಉದ್ಯಮ ಮೈಗ್ರೇನ್ಗೆ ಚಿಕಿತ್ಸೆ ನೀಡುತ್ತದೆಯೇ? ಮಲಬದ್ಧತೆ ಮತ್ತು ಮರೆವಿನ ಕಾಯಿಲೆಗೆ ಅಡ್ಡಪರಿಣಾಮಗಳು ಇಲ್ಲದೆಯೆ ಚಿಕಿತ್ಸೆಗಳು ಇವೆಯೇ ಎಂದು ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯಂತಹ ಆಧುನಿಕ ಕಾಯಿಲೆಗಳ ಚಿಕಿತ್ಸೆ ಬಗ್ಗೆ ಮತ್ತು ಬಂಜೆತನಕ್ಕೆ ನೋವು ರಹಿತವಾದ ಯಾವುದೇ ಚಿಕಿತ್ಸೆ ಇದೆಯೇ? ವಯಸ್ಸಾಗುವುದನ್ನು ತಡೆಯಲು, ಹಿಮೋಗ್ಲೋಬಿನ್ ಹೆಚ್ಚಿಸಲು ಚಿಕಿತ್ಸೆ ಯಾವುದಿದೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.