ಮೋದಿ ಟೀಕಿಸಿದ್ದ ಅಮೀರ್ ಹೊಡೆದ್ರು 'ಯೂ ಟರ್ನ್'
ನವದೆಹಲಿ, ಜೂ.24: ಸರಿ ಸುಮಾರು ಎಂಟು ವರ್ಷಗಳ ಹಿಂದೆ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದ ನಟ ಅಮೀರ್ ಖಾನ್ ಅವರು ಈಗ ಪ್ರಧಾನಿಯಾಗಿರುವ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯ 7 ಆರ್ ಸಿಆರ್ ನಿವಾಸದಲ್ಲಿ ಸೋಮವಾರ ಮೋದಿ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ಡಿನ ಖ್ಯಾತ ನಟ ಅಮೀರ್ ಖಾನ್ ಎಂಟು ವರ್ಷಗಳ ಹಿಂದೆ ಮೋದಿ ವಿರುದ್ಧ ಕಿಡಿಕಾರಿದ್ದಲ್ಲದೆ, ಕ್ಷಮೆಯಾಚಿಸಲು ನಿರಾಕರಿಸಿದ್ದರು. ನರ್ಮದಾ ಬಚಾವೋ ಆಂದೋಲನದ ಮುಂದಾಳತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ಬೆಂಬಲ ಸೂಚಿಸಿದ್ದ ಅಮೀರ್ ಇಂದು ಮೆತ್ತಗಾಗಿದ್ದಾರೆ. ಮೇಧಾ ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ನರ್ಮದಾ ಅಣೆಕಟ್ಟು ಎತ್ತರ ಹೆಚ್ಚಿಸಲು ಗುಜರಾತ್ ಸರ್ಕಾರ ಆದೇಶ ನೀಡಿದೆ.[ವಿವರ ಇಲ್ಲಿದೆ ಓದಿ].
ನರ್ಮದಾ ನದಿ ಅಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ಲಕ್ಷಾಂತರ ಮಂದಿ ಸಂತ್ರಸ್ತರಾಗುವುದರ ಬಗ್ಗೆ ಅಮೀರ್ ಖಾನ್ ಅವರು ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಮೋದಿ ಭೇಟಿ ಮಾಡಿದ ಅಮೀರ್ ತಾವು ನಡೆಸಿಕೊಡುತ್ತಿದ್ದ 'ಸತ್ಯಮೇವ ಜಯತೇ' ಕಾರ್ಯಕ್ರಮದ ಡಿವಿಡಿಗಳನ್ನು ಪ್ರಧಾನಿಗೆ ಕಾಣಿಕೆಯಾಗಿ ನೀಡಿದ್ದಾರೆ. ಮೋದಿ ವಿರುದ್ಧ ಅಮೀರ್ ಕಿಡಿಕಾರಿದ್ದು ಏಕೆ? ಏನಿದು ನರ್ಮದಾ ಬಚಾವೋ ಆಂದೋಲನ? ಅಮೀರ್ ಭೇಟಿ ಉದ್ದೇಶವೇನು? ಮುಂದೆ ಓದಿ...
ಗರೀಬರ ದೊರೆ ಬಳಿ ಬಂದ ಅಮೀರ್
ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಮೀರ್, 'ಮೋದಿ ಅವರು ಜನ ಸಾಮಾನ್ಯರ ಅಭ್ಯುದಯದ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ನಾವೆಲ್ಲಾ ಅವರೊಂದಿಗೆ ಕೈಜೋಡಿಸಬೇಕಿದೆ, ಈ ಮೂಲಕ ಅವರು ತಮ್ಮ ಗುರಿಯನ್ನು ಮುಟ್ಟುವಲ್ಲಿ ನೆರವಾಗಬೇಕು. ಜನಸಾಮಾನ್ಯರು ಮತ್ತು ನಾನು ಕೂಡಾ ಮೋದಿ ಅವರಿಂದ ಸಾಕಷ್ಟು ನಿರೀಕ್ಷೆ ಹೊಂದಿದ್ದೇನೆ' ಎಂದು ಹೇಳಿದ್ದರು.
ಬದಲಾವಣೆಗಾಗಿ ಮತ ಎಂದ ಅಮೀರ ಬದಲಾಗಿಬಿಟ್ರು
ನಾನು ಈಗಷ್ಟೇ ಮೋದಿಯವರನ್ನು ಭೇಟಿಯಾಗಿ ಬಂದಿದ್ದೇನೆ ಸಾಮಾಜಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ 'ಸತ್ಯಮೇವ ಜಯತೆ' ಕಾರ್ಯಕ್ರಮದ ಮೂಲಕ 'ಬದಲಾವಣೆಗಾಗಿ ಮತ(Vote For Change)' ಎಂಬ ನಮ್ಮ ಅಭಿಯಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು ಎಂಬುದನ್ನು ಪ್ರಧಾನಿ ಅವರ ಗಮನಕ್ಕೆ ತಂದಿದ್ದೇನೆ. ಈ ಎಲ್ಲ ಸಮಸ್ಯೆಗಳ ಕುರಿತು ತಾವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ವಾಗ್ದಾನ ಮಾಡಿದ್ದಾರೆ ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಇತಿಹಾಸದ ಪುಟ ತಿರುವಿ ನೋಡಿದಾಗ
2006ರಲ್ಲಿ ಮೋದಿ ಅವರನ್ನು ಟೀಕಿಸಿ ಗುಜರಾತ್ ಸರ್ಕಾರ ನರ್ಮದಾ ನದಿ ಯೋಜನೆ ಬಗ್ಗೆ ತೆಗೆದುಕೊಂಡ ನಿರ್ಣಯ ಮಾರಣಾಂತಿಕ ಎಂದು ಅಮೀರ್ ಖಾನ್ ಹೇಳಿದ್ದರು. ಅಮಾಯಕರ ಪ್ರಾಣಕ್ಕೆ ಕುತ್ತುಂಟು ಮಾಡುತ್ತಿದೆ ಮೋದಿ ಸರ್ಕಾರ ಎಂದಿದ್ದರು.[ಈ ಬಗ್ಗೆ ಪಿಟಿಐ ಸುದ್ದಿ ಇಲ್ಲಿ ಓದಿ]
ಪ್ರತಿಭಟನೆ ಎದುರಿಸಿದ್ದ ಅಮೀರ್ ಖಾನ್
ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಮಾತನಾಡುತ್ತಾ 'ಸಂತ್ರಸ್ತರು ಯಾವ ಮತ ಧರ್ಮದವರು ಎಂಬುದು ಮುಖ್ಯವಲ್ಲ. ಎಲ್ಲರೂ ಮನುಷ್ಯರೇ, ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಕಳಪೆಯಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿದ್ದರೆ ದುರಂತ' ಎಂದು ಮೋದಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು.
ಇದಾದ ಮೇಲೆ ಅವರ 'ಫನಾ' ಹಾಗೂ 'ತಾರೆ ಜಮೀನ್ ಪರ್' ಚಿತ್ರಗಳ ಪ್ರದರ್ಶನಕ್ಕೆ ಗುಜರಾತಿನಲ್ಲಿ ಭಾರಿ ವಿರೋಧ ಹಾಗೂ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ವಿವರ ಇಲ್ಲಿ ಓದಿ
|
ಗರೀಬರ ದೊರೆ ಬಳಿ ಬಂದ ಅಮೀರ್ ಟ್ವೀಟ್
ಪ್ರಧಾನಿ ಮೋದಿ ಅವರು ತಮ್ಮ ಅತ್ಯಮೂಲ್ಯ ಸಮಯವನ್ನು ನನಗಾಗಿ ನೀಡಿದ್ದು ಸಂತಸ ತಂದಿದೆ ಎಂದು ಅಮೀರ್ ಟ್ವೀಟ್
|
ವೋಟ್ ಫಾರ್ ಚೇಂಜ್ ಬಗ್ಗೆ ಮಾತಾಡಿದೆ : ಅಮೀರ್
ವೋಟ್ ಫಾರ್ ಚೇಂಜ್ ಬಗ್ಗೆ ಮಾತಾಡಿದೆ ಅಭಿಯಾನದ ಬಗ್ಗೆ ಮೋದಿ ಅವರಿಗೆ ವಿವರಿಸಿದೆ ಎಂದು ಅಮೀರ್ ಟ್ವೀಟ್
ನರ್ಮದಾ ಬಚಾವೋ ಆಂದೋಲನದ ಬಗ್ಗೆ
ಆದಿವಾಸಿಗಳು, ರೈತರು, ಪರಿಸರವಾದಿಗಳು, ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ಅನೇಕ ಮಂದಿ ನರ್ಮದಾ ಬಚಾವೋ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಬಾಬಾ ಆಪ್ಟೆ ಮುಂತಾದವರು ಗುಜರಾತಿನ ಸರ್ದಾರ್ ಸರೋವರ್ ಯೋಜನೆಯನ್ನು ವಿರೋಧಿಸಿದರು. ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಹರಿಯುವ ನರ್ಮದಾ ನದಿ ಮೇಲೆ ಅಣೆಕಟ್ಟು ಕಟ್ಟುವ ಮೂಲಕ ಲಕ್ಷಾಂತರ ಜನರು ನೆಲೆ ಇಲ್ಲದೆ ಪರದಾಡುವಂತಾಗಿದೆ.