ಲಂಡನ್ ಫ್ಲ್ಯಾಟ್ ಖರೀದಿ ಆದ ಮೇಲೆ ದುಬೈ ವಿಲ್ಲಾ ಬಗ್ಗೆ ವಾದ್ರಾಗೆ ಪ್ರಶ್ನೆ
ನವದೆಹಲಿ, ಫೆಬ್ರವರಿ 12: ಬೇನಾಮಿ ವ್ಯವಹಾರ ಮೂಲಕ ರಾಬರ್ಟ್ ವಾದ್ರಾ ವಿದೇಶಗಳಲ್ಲಿ ಖರೀದಿಸಿದ ಆಸ್ತಿಗಳ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಗಮನ ಕೇಂದ್ರೀಕರಿಸಿದೆ. ಲಂಡನ್ ನಲ್ಲಿನ ಆಸ್ತಿಯ ಹೊರತಾಗಿ ದುಬೈನಲ್ಲಿನ ವಿಲ್ಲಾ ಬಗ್ಗೆ ಕೂಡ ತನಿಖೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ವಾದ್ರಾರನ್ನು ಲಂಡನ್ ನಲ್ಲಿನ ಇಪ್ಪತ್ತಾರು ಕೋಟಿ ರುಪಾಯಿಯ ಫ್ಲ್ಯಾಟ್ ಗೆ ಇರುವ ನಂಟಿನ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವಂತೆ ಕೇಳಿದ್ದಾರೆ. ದುಬೈನಲ್ಲಿ ಹದಿನಾಲ್ಕು ಕೋಟಿ ಮೌಲ್ಯದ ವಿಲ್ಲಾದ ಖರೀದಿಗೆ ಏನಾದರೂ ನಂಟಿದೆಯಾ ಎಂದು ವಾದ್ರಾರನ್ನು ಕೇಳಿದ್ದಾರೆ.
ಸತ್ಯಕ್ಕೆ ಯಾವಾಗಲೂ ಗೆಲುವು, ರಾಬರ್ಟ್ ವಾದ್ರಾ ಫೇಸ್ಬುಕ್ ಪೋಸ್ಟ್
ಇದರ ಜತೆಗೆ ದುಬೈ ಮೂಲದ ಸ್ಕೈಲೈಟ್ ಇನ್ವೆಸ್ಟ್ ಮೆಂಟ್ಸ್ ನಲ್ಲಿ ಮಾಡಿರುವ ದೊಡ್ಡ ಮಟ್ಟದ ನಗದು ಹೂಡಿಕೆ ಬಗ್ಗೆ ಕೇಳಲಾಗಿದೆ. ಇದೇ ಹೆಸರಿನ ಜತೆಗೆ ಹೋಲಿಕೆ ಆಗುವಂತೆ ಭಾರತದಲ್ಲಿ ವಾದ್ರಾ ಅವರ ಕಂಪನಿಯಿದೆ. ಅದರ ಹೆಸರು ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈ ಲಿ. ಗುರ್ ಗಾಂವ್, ಬಿಕನೇರ್ ನಲ್ಲಿ ಆ ಕಂಪನಿ ನಡೆಸಿದ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ವಿವಿಧ ತನಿಖೆ ನಡೆಯುತ್ತಿದೆ.
ಸ್ಕೈಲೈಟ್ ಇನ್ವೆಸ್ಟ್ ಮೆಂಟ್ ಷೇರುದಾರ ಸಿ.ಸಿ.ಥಂಪಿ ಜತೆಗೆ ಇರುವ ನಂಟು ಏನು ಎಂದು ವಾದ್ರಾರನ್ನು ಪ್ರಶ್ನಿಸಲಾಗಿದೆ. ಇನ್ನು ಇದು ಶೆಲ್ ಕಂಪನಿಯಾಗಿದ್ದು, ಯಾವುದೇ ವ್ಯವಹಾರ ನಡೆಸುತ್ತಿರಲಿಲ್ಲ. ಆದರೆ ಲಂಡನ್ ಬ್ರಿನ್ ಸ್ಟೋನ್ ಸ್ಕ್ವೇರ್ ನಲ್ಲಿ ಶಸ್ತ್ರಾಸ್ತ್ರಗಳ ವ್ಯವಹಾರ ಮಾಡುವ, ದೇಶದಿಂದ ತಲೆತಪ್ಪಿಸಿಕೊಂಡಿರುವ ಸಂಜಯ್ ಭಂಡಾರಿಯಿಂದ ಆಸ್ತಿ ಖರೀದಿ ಮಾಡಲಾಗಿದೆ. ಭಂಡಾರಿ ಸಂಸ್ಥೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಭಾರತದ ಹಲವಾರು ತನಿಖಾ ಸಂಸ್ಥೆಗಳು ಕಳೆದ ಎರಡು ವರ್ಷಗಳಿಂದ ಸ್ಕೈಲೈಟ್ ಇನ್ವೆಸ್ಟ್ ಮೆಂಟ್ ಎಫ್ ಜೆಡ್ ಇ ಬಗ್ಗೆ ತನಿಖೆ ನಡೆಸಿದೆ. ಅದೇ ಸಂಸ್ಥೆ ಈಗ ಮೇಫೇರ್ ಇನ್ವೆಸ್ಟ್ ಮೆಂಟ್ ಎಫ್ ಜೆಡ್ ಇ ಎಂದು ಬದಲಾಗಿದೆ. ಆ ಸಂಸ್ಥೆ ಯಾವುದೆ ವ್ಯವಹಾರ ಚಟುವಟಿಕೆ ನಡೆಸುತ್ತಿಲ್ಲ. ಆದರೂ ದೊಡ್ಡ ಮಟ್ಟದಲ್ಲಿ ನಗದು ಜಮೆ ಮಾಡಲಾಗಿದೆ. ಅದು ಲಂಡನ್ ನಲ್ಲಿ ಫ್ಲ್ಯಾಟ್ ಹಾಗೂ ದುಬೈನಲ್ಲಿ ವಿಲ್ಲಾ ಖರೀದಿ ಮಾಡುವ ಮುಂಚೆ ಮಾಡಿರುವ ಜಮೆ.
ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ?
2010ರ ಡಿಸೆಂಬರ್ ನಲ್ಲಿ ಘೋಷಣೆ ಮಾಡಿದಂತೆ ಹೂಡಿಕೆ ಎಂದು 94,83,893 ದಿರ್ಹಾಮ್ (12 ಕೋಟಿ) ತೋರಿಸಲಾಗಿದೆ. ದುಬೈನಲ್ಲಿ ವಿಲ್ಲಾ 107,41,996 ದಿರ್ಹಾಮ್ (14 ಕೋಟಿ) ಮತ್ತು ಲಂಡನ್ ನಲ್ಲಿ 202,25,889 ದಿರ್ಹಾಮ್ (26 ಕೋಟಿ) ಫ್ಲ್ಯಾಟ್ ತೋರಿಸಲಾಗಿತ್ತು.
ಮೇಫೇರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಖಾತೆಯನ್ನು 31ನೇ ಮಾರ್ಚ್ 2009ರಲ್ಲಿ ಬ್ಯಾಂಕ್ ಖಾತೆ ತೆರೆದ ಮೇಲೆ ಯಾವುದೇ ಚಟುವಟಿಕೆ ನಡೆಸಿಲ್ಲ. ಆಗ 1,50,000 ದಿರ್ಹಾಮ್ (19 ಲಕ್ಷ) ಠೇವಣಿ ಇಟ್ಟು ಖಾತೆ ತೆರೆದಿತ್ತು. ತನಗೂ ಸ್ಕೈಲೈಟ್ ಇನ್ವೆಸ್ಟ್ ಮೆಂಟ್ ಗೂ ಸಂಬಂಧವಿಲ್ಲ ಎಂದು ವಾದ್ರಾ ಹೇಳಿದ್ದು, ಅದು ಒಪ್ಪತಕ್ಕದ್ದಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ ಎಂದು ಮೂಲಗಳು ಹೇಳಿವೆ.