ಕರ್ನಾಟಕವಾಯ್ತು ಈಗ ಬಿಜೆಪಿ ಕಣ್ಣು ಈ ಮೂರು ರಾಜ್ಯಗಳ ಮೇಲೆ
ನವದೆಹಲಿ, ಮೇ 29: ಕರ್ನಾಟಕ ಚುನಾವಣೆಯ ನಂತರ ಈ ವರ್ಷದ ಬಹುನಿರೀಕ್ಷಿತ ಚುನಾವಣೆಗಳಾದ ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ಬಿಜೆಪಿ ದೃಷ್ಟಿ ಹರಿಸಿದೆ.
ಈ ವರ್ಷ ಡಿಸೆಂಬರ್ ಅಂತ್ಯದಲ್ಲಿ ಈ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, 2019 ರ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಬಣ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಕಾಂಗ್ರೆಸ್ಸಿಗೆ ಅಳಿವು-ಉಳಿವಿನ ಪ್ರಶ್ನೆ.
ಸಮ್ಮಿಶ್ರ ಸರ್ಕಾರ: ಕರ್ನಾಟಕ ರಾಜಕೀಯ ಕಲಸುಮೇಲೋಗರ
ಈಗಾಗಲೇ ಈ ರಾಜ್ಯಗಳಲ್ಲಿ ಬಿಜೆಪಿ ವರುದ್ಧ ಆಡಳಿತವಿರೋಧಿ ಅಲೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿಗೆ ತೆರಳಿರುವ ಬಿಜೆಪಿ, ಆರ್ ಎಸ್ ಎಸ್ ಸಹಕಾರದ ಮೂಲಕ ಈ ರಾಜ್ಯಗಳಲ್ಲಿ ತಳಮಟ್ಟದ ಸಂಘಟನೆಗೆ ತೊಡಗಿದೆ. ಚುನಾವಣೆಯನ್ನು ಸಮರ್ಥರೀತಿಯಲ್ಲಿ ಎದುರಿಸಲು ಎಲ್ಲಾ ಸಾಧ್ಯತೆಗಳನ್ನೂ ಪ್ರಯೋಗಿಸಲು ನಿರ್ಧರಿಸಲಾಗಿದೆ.
ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಬಿಜೆಪಿ ಸುತಾರಾಂ ಸಿದ್ಧವಿಲ್ಲ. ಆದರೆ ತನ್ನ ಮೇಲಿನ ಆಡಳಿತವಿರೋಧಿ ಅಲೆಯನ್ನು ಹತ್ತಿಕ್ಕಿ, ಮತದಾರರ ಒಲವು ಗಳಿಸಿಕೊಳ್ಳುವುದು ಹೇಗೆ ಎಂಬುದೇ ಬಿಜೆಪಿಗೆ ಈಗ ಬಹುದೊಡ್ಡ ತಲೆನೋವಾಗಿದೆ.