ದೆಹಲಿ-ಯುಪಿ ಗಡಿಯಿಂದ ರೈತರನ್ನು ಓಡಿಸುವ ಯತ್ನದಲ್ಲಿ ಪೊಲೀಸರು!
ನವದೆಹಲಿ, ಜನವರಿ.28: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ನಡೆದು ಎರಡು ದಿನಗಳೇ ಕಳೆದಿವೆ. ಇದೀಗ ಉತ್ತರಪ್ರದೇಶ ಮತ್ತು ದೆಹಲಿ ಗಡಿಯಲ್ಲಿ ಕುಳಿತ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವ ನಿಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಕ್ರಮಕ್ಕೆ ಮುಂದಾಗಿದೆ.
ಘಾಜಿಪುರ್ ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರು ಗುರುವಾರ ರಾತ್ರಿ ವೇಳೆಗೆ ಜಾಗ ಖಾಲಿ ಮಾಡುವಂತೆ ಉತ್ತರಪ್ರದೇಶ ಸರ್ಕಾರ ಅಂತಿಮ ಗಡುವು ವಿಧಿಸಿ ಆದೇಶಿಸಿದೆ. ಆದರೆ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಹಿಂಸಾಚಾರ ಪರಿಣಾಮ: ಬಜೆಟ್ ದಿನದ ಸಂಸತ್ ಕಡೆಗೆ ರೈತರ ಮೆರವಣಿಗೆ ರದ್ದು
ನಾನು ಬೇಕಿದ್ದಲ್ಲಿ ಪೊಲೀಸರ ಗುಂಡನ್ನು ಎದುರಿಸುವುದಕ್ಕೆ ಸಿದ್ಧರಿದ್ದೇವೆ. ಆದರೆ ಪ್ರತಿಭಟನೆಯಿಂದ ಹಿಂದೆ ಸರಿದು ವಾಪಸ್ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ತಿಕೈಟ್ ಹೇಳಿದ್ದಾರೆ. ಇನ್ನೊಂದೆಡೆ ಟಿಕ್ರಿ ಮತ್ತು ಸಿಂಘ ಗಡಿಯ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಧಮನಕಾರಿ ನೀತಿ ಅನುಸರಿಸುತ್ತಿದೆಯಾ ಸರ್ಕಾರ?
ಕೃಷಿ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ವತಃ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅದೇ ರೀತಿ ಘಜಿಪುರ್ ಗಡಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೀಗ ರೈತರನ್ನು ಅಲ್ಲಿಂದ ತೆರವುಗೊಳಿಸುವುದಕ್ಕೆ ಸರ್ಕಾರವು ಮುಂದಾಗಿದ್ದು, ಇದು ಉತ್ತರ ಪ್ರದೇಶ ಸರ್ಕಾರದ ಧಮನಕಾರಿ ನೀತಿಯನ್ನು ತೋರಿಸುತ್ತದೆ ಎಂದು ರೈತ ಸಂಘಟನೆ ಮುಖಂಡ ರಾಕೇಶ್ ತಿಕೈಟ್ ಆರೋಪಿಸಿದ್ದಾರೆ.
"ರೈತರ ಹೋರಾಟಕ್ಕೆ ಕೇಂದ್ರದಿಂದ ಅಪಖ್ಯಾತಿ ತರುವ ಕಾರ್ಯ"
ರೈತರು ನಡೆಸುತ್ತಿರುವ ಹೋರಾಟಕ್ಕೆ ಅಪಖ್ಯಾತಿ ತರುವ ಕಾರ್ಯವನ್ನು ಕೇಂದ್ರ ಸರ್ಕಾರವು ಪದೇ ಪದೆ ಮಾಡುತ್ತಿದೆ. ಎಲ್ಲಾ ಗಡಿ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರದಲ್ಲಿನ ಆತಂಕವು ಸ್ಪಷ್ಟವಾಗುತ್ತದೆ. ರೈತರ ಪ್ರತಿಭಟನೆಯನ್ನು ಹಿಂಸಾತ್ಮಕ ರೂಪದಲ್ಲಿ ಎಂದು ತೋರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಶಾಂತಿಯುತವಾಗಿ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
37 ರೈತರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು
ಗಣರಾಜ್ಯೋತ್ಸವದ ದಿನವೇ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 37 ರೈತ ಮುಖಂಡರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಕೇಶ್ ತಿಕೈಟ್, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್, ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಾಂದುನಿ, ಕುಲ್ವಂತ್ ಸಿಂಗ್ ಸಂಧು, ಸತ್ನಾಮ್ ಸಿಂಗ್ ಪನ್ನು, ಜೋಗಿಂದರ್ ಸಿಂಗ್ ಉಗ್ರಹಾ, ಸರ್ಜಿತ್ ಸಿಂಗ್ ಫೂಲ್, ಜಗಜೀತ್ ಸಿಂಗ್ ದಾಲೇವಾಲ್, ಬಲ್ಬೀರ್ ಸಿಂಗ್ ರಾಜೇವಾಲ್, ಹರೀಂದರ್ ಸಿಂಗ್ ಲಖೇವಾಲ್ ಎಂಬ ರೈತ ಮುಖಂಡರ ಹೆಸರು ಸೇರಿಸಲಾಗಿದೆ. ಒಟ್ಟು 37 ರೈತ ಮುಖಂಡರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
394 ಪೊಲೀಸರಿಗೆ ಗಾಯ, ಟ್ರ್ಯಾಕ್ಟರ್ ಪಲ್ಟಿಯಾಗಿ ಒಬ್ಬ ರೈತ ಸಾವು
ದೆಹಲಿಯ ಕೆಂಪುಕೋಟೆಗೆ ನುಗ್ಗಿದ ರೈತರು ತ್ರಿವರ್ಣ ಧ್ವಜದ ಎದುರಿಗೆ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದರು. ಇದಕ್ಕೂ ಮೊದಲು ಪೊಲೀಸರು ಮತ್ತು ಪ್ರತಿಭಟನಾನಿರತ ರೈತರ ನಡುವೆ ಸಂಘರ್ಷ ನಡೆಯಿತು. ಈ ವೇಳೆ 394 ಪೊಲೀಸರು ಗಾಯಗೊಂಡಿದ್ದು, ಟ್ರ್ಯಾಕ್ಟರ್ ಪಲ್ಟಿಯಾಗಿ ಪ್ರತಿಭಟನಾನಿರತ ರೈತರೊಬ್ಬರು ಮೃತಪಟ್ಟಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರೀಯ ಕಿಸಾನ್ ಮಜದೂರ್ ಸಂಘಟನೆ ಮತ್ತು ಭಾರತೀಯ ಕಿಸಾನ್ ಒಕ್ಕೂಟಗಳು ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದವು.