35 ದಿನದ ನಂತರ ಘಾಜಿಪುರ್ ಗಡಿಯಲ್ಲಿ ವಾಹನ ಸಂಚಾರಕ್ಕೆ ಅನುಮತಿ
ನವದೆಹಲಿ, ಮಾರ್ಚ್ 2: ದೆಹಲಿ ಹಿಂಸಾಚಾರ ಹಿನ್ನೆಲೆ ಬಂದ್ ಆಗಿದ್ದ ಘಾಜಿಪುರ್ ಗಡಿಯಲ್ಲಿ ವಾಹನ ಸಂಚಾರ ಮಂಗಳವಾರದಿಂದ ಪುನಾರಂಭಗೊಂಡಿದೆ. ನವದೆಹಲಿಯಿಂದ ಉತ್ತರ ಪ್ರದೇಶಕ್ಕೆ ತೆರಳುವ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಈ ಮೊದಲು ಉತ್ತರ ಪ್ರದೇಶಕ್ಕೆ ತೆರಳಬೇಕಾದರೆ ನೋಯ್ಡಾ ಫೈಓವರ್ ಮೂಲಕ ಅಥವಾ ಬೇರೆ ಮಾರ್ಗದಲ್ಲಿ ಸಂಚರಿಸಬೇಕಿತ್ತು. ಘಾಜಿಪುರ್ ಗಡಿಯಲ್ಲಿ ಸಂಚಾರ ಮುಕ್ತಗೊಳಿಸಿರುವುದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ರೈತರ ಪ್ರತಿಭಟನೆ: ದೆಹಲಿ ಗಡಿಗಳಲ್ಲಿ ವಾಹನ ಸಂಚಾರ ಮಾರ್ಗ ಬದಲು
ಸದ್ಯದ ಮಟ್ಟಿಗೆ ದಹಲಿಯಿಂದ ಉತ್ತರ ಪ್ರದೇಶಕ್ಕೆ ತೆರಳುವ ವಾಹನಗಳಿಗೆ ಮಾತ್ರ ಗಡಿಯಲ್ಲಿ ಅನುಮತಿ ನೀಡಲಾಗಿದೆ. ಉತ್ತರ ಪ್ರದೇಶದಿಂದ ದೆಹಲಿ ಆಗಮಿಸುವ ವಾಹನಗಳಿಗೆ ನಿರ್ಬಂಧವನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರದ ನಂತರ ಗಡಿ ಭದ್ರತೆ:
ಕಳೆದ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನವೇ ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರ ರೂಪಕ್ಕೆ ತಿರುಗಿತ್ತು. ಅಂದಿನಿಂದ ದೆಹಲಿ ಮತ್ತು ಉತ್ತರ ಪ್ರದೇಶದ ಘಾಜಿಪುರ್ ಗಡಿ ಮತ್ತು ಹರಿಯಾಣ ದೆಹಲಿಯ ಟಿಕ್ರಿ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ದೆಹಲಿ ಮೂರು ಗಡಿಯಲ್ಲಿ ಪ್ರತಿಭಟನೆ:
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವೆಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 98 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.