ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆಹಿಡಿಯಲು ಅರವಿಂದ್ ಕೇಜ್ರಿವಾಲ್ ನಿರ್ಧಾರ
ನವದೆಹಲಿ, ಏಪ್ರಿಲ್ 30: ಕೊರೊನಾ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆ ತಗ್ಗಿದೆ. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು 2021ರ ಜುಲೈ 30ರವರೆಗೂ ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆ ಹಿಡಿಯಲು ತೀರ್ಮಾನಿಸಿದೆ.
ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸುಮಾರು 2.2 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.ಈ ನಿರ್ಧಾರ ಮೂಲಕ ಕೇಂದ್ರ ಸರ್ಕಾರದ ನಡೆಯನ್ನೇ ಅನುಸರಿಸಲು ದೆಹಲಿ ಸರ್ಕಾರ ಮುಂದಾಗಿದೆ.
ತುಟ್ಟಿಭತ್ಯೆ ವಿಚಾರದಲ್ಲಿ ಕೇಂದ್ರದ ಆದೇಶವನ್ನು ದೆಹಲಿ ಸರ್ಕಾರವು ಅನುಮೋದಿಸಿದೆ. ಇದು ದೆಹಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯಿಸಲಿದೆ ಎಂದು ದೆಹಲಿ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಜುಲೈ 2021ರವರೆಗೆ ತುಟ್ಟಿಭತ್ಯೆ ಹೆಚ್ಚಳವನ್ನು ತಡೆಹಿಡಿಯಲು ಕೇಂದ್ರ ಸರ್ಕಾರದ ಆದೇಶವನ್ನು ಅನುಮೋದಿಸಿ ದೆಹಲಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಉಳಿಸಿದ ಹಣವನ್ನು ಕೊರೊನಾ ಬಿಕ್ಕಟ್ಟು ಎದುರಿಸಲು ಬಳಕೆ ಮಾಡುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ 24 ಗಂಟೆಗಳಲ್ಲಿ 1718 ಮಂದಿಗೆ ಕೊರೊನಾ ಸೋಂಕು ಹರಡಿದೆ. 67 ಮಂದಿ ಮೃತಪಟ್ಟಿದ್ದಾರೆ, 33050 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.