ಸಂಸದ ಪಶುಪತಿ ಪಾರಸ್ ಮಂತ್ರಿಸ್ಥಾನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ
ನವದೆಹಲಿ, ಜುಲೈ 08: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ತಮ್ಮ ಚಿಕ್ಕಪ್ಪ ಹಾಗೂ ಬಿಹಾರದ ಹಾಜಿಪುರ್ ಸಂಸದ ಪಶುಪತಿ ಕುಮಾರ್ ಪಾರಸ್ ರನ್ನು ಸೇರ್ಪಡೆ ಮಾಡಿಕೊಂಡಿರುವುದನ್ನು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗುವುದಾಗಿ ಚಿರಾಗ್ ಪಾಸ್ವಾನ್ ಎಚ್ಚರಿಕೆ ನೀಡಿದ್ದಾರೆ. ಬಿಹಾರ ರಾಜಕಾರಣದಲ್ಲಿ ನಡೆದ ಇತ್ತೀಚಿನ ಬೆಳವಣಿಗೆ ಪಾಸ್ವಾನ್ ಹಾಗೂ ಪಾರಸ್ ನಡುವಿನ ವೈಮನಸ್ಸಿಗೆ ಕೈಗನ್ನಡಿಯಾಗಿತ್ತು.
ಚಿರಾಗ್ ಪತ್ರದ ಗುಟ್ಟು: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ ಒಡೆಯಲು ಇದೇ ಕಾರಣ?
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷದಿಂದ ಆರು ಸಂಸದರು ಆಯ್ಕೆ ಆಗಿದ್ದರು. ಲೋಕ ಜನಶಕ್ತಿ ಪಕ್ಷದ ಆರು ಸಂಸದರ ಪೈಕಿ ಐದು ಸಂಸದರು ಚಿರಾಗ್ ಪಾಸ್ವಾನ್ ಚಿಕ್ಕಪ್ಪ( ರಾಮ್ ವಿಲಾಸ್ ಪಾಸ್ವಾನ್ ಸಹೋದರ) ಪಶುಪತಿ ಕುಮಾರ್ ಪಾರಸ್ ಅನ್ನು ಬೆಂಬಲಿಸಿದ್ದರು. ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದಿ ಐದು ಸಂಸದರನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ಪಕ್ಷದಿಂದಲೇ ಉಚ್ಛಾಟಿಸಲಾಗಿತ್ತು.
ಪಶುಪತಿ ಕುಮಾರ್ ಪಾರಸ್, ಶ್ರೀಮತಿ ಬೀನಾ ದೇವಿ, ಚೌಧರಿ ಮೆಹಬೂಬ್ ಅಲಿ ಕೈಸೆರ್, ಚಂದನ್ ಸಿಂಗ್, ಪ್ರಿನ್ಸ್ ರಾಜ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಉಚ್ಛಾಟಿಸಲಾಗಿತ್ತು.
ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ:
ಸಂಸದ ಪಶುಪತಿ ಕುಮಾರ್ ಪಾರಸ್ ಅನ್ನು ಲೋಕ ಜನಶಕ್ತಿ ಪಕ್ಷದ ಸದಸ್ಯರು ಎಂದು ಪರಿಗಣಿಸಿರುವ ಲೋಕಸಭಾ ಸಭಾಪತಿ ನಿರ್ಧಾರವನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಸಂಸದ ಚಿರಾಗ್ ಪಾಸ್ವಾನ್ ಸರಣಿ ಟ್ವೀಟ್ ಮಾಡಿದ್ದಾರೆ.
"ಲೋಕಸಭೆಯ ಸ್ಪೀಕರ್ ತೀರ್ಪಿನ ವಿರುದ್ಧ ಲೋಕ ಜನಶಕ್ತಿ ಪಕ್ಷವು ಇಂದು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ, ಇದರಲ್ಲಿ ಉಚ್ಚಾಟಿತ ಸಂಸದ ಪಶುಪತಿ ಪರಸ್ ಜಿ ಅನ್ನು ಸದನದಲ್ಲಿ ಎಲ್ ಜೆಪಿ ನಾಯಕರಾಗಿ ಪರಿಗಣಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದಿದ್ದಕ್ಕಾಗಿ ಪಶುಪತಿಯನ್ನು ಈಗಾಗಲೇ ಲೋಕ ಜನಶಕ್ತಿ ಪಕ್ಷದಿಂದ ಹೊರಹಾಕಲಾಗಿದೆ. ಈಗ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಲು ಪಕ್ಷ ಬಲವಾಗಿ ಆಕ್ಷೇಪಿಸಿದೆ," ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.