ರಾಷ್ಟ್ರಪತಿ ಕೋವಿಂದ್ ಐಸಿಯುದಿಂದ ವಿಶೇಷ ಕೊಠಡಿಗೆ ವರ್ಗಾವಣೆ
ನವದೆಹಲಿ, ಏಪ್ರಿಲ್ 3: ಕಳೆದ ಮಂಗಳವಾರ ಏಮ್ಸ್ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ಕೊಠಡಿಗೆ ವರ್ಗಾಯಿಸಲಾಗಿದೆ.
ರಾಮನಾಥ್ ಕೋವಿಂದ್ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ರಾಷ್ಟ್ರಪತಿ ಭವನ, ಕೋವಿಂದ್ ಅವರ ಆರೋಗ್ಯ ನಿರಂತರವಾಗಿ ಸುಧಾರಿಸುತ್ತಿದೆ. ಅವರ ಸ್ಥಿತಿಯನ್ನು ವೈದ್ಯರು ಸತತವಾಗಿ ಗಮನಿಸುತ್ತಿದ್ದಾರೆ. ಅವರು ಹೆಚ್ಚಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದೆ. ಕೋವಿಂದ್ ಅವರ ಹೃದಯದ ಬೈಪಾಸ್ ಸರ್ಜರಿ ಯಶಸ್ವಿಯಾಗಿ ನಡೆದಿದ್ದು, ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ.
President Kovind was shifted from the ICU to a special room in the AIIMS today. His health has been improving continuously. Doctors are constantly monitoring his condition and have advised him to take rest.
— President of India (@rashtrapatibhvn) April 3, 2021
ತಮ್ಮ ಆರೋಗ್ಯದ ಬಗ್ಗೆ ರಾಷ್ಟ್ರಪತಿ ಕೋವಿಂದ್ ಅವರು ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. 'ಬೈಪಾಸ್ ಸರ್ಜರಿ ಬಳಿಕ ನಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು ಹಾಗೂ ಆರೈಕೆದಾರರ ಅಮೋಘ ಬದ್ಧತೆಗೆ ಧನ್ಯವಾದಗಳು. ಶೀಘ್ರವೇ ಚೇತರಿಸಿಕೊಳ್ಳುವಮತೆ ನಾಗರಿಕರು, ಭಾರತದ ಹಾಗು ವಿದೇಶದ ನಾಯಕರು ರವಾನಿಸಿದ ಸಂದೇಶಗಳಿಂದ ನಾನು ಮುದಗೊಂಡಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವಾಗುತ್ತದೆ' ಎಂದು ತಿಳಿಸಿದ್ದರು.
ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 26ರಂದು ಕೋವಿಂದ್ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಹೃದಯದಲ್ಲಿ ಸಮಸ್ಯೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಮರುದಿನ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.