ದೆಹಲಿಯಲ್ಲಿ ಅಡ್ವಾಣಿ ಅವರನ್ನು ಭೇಟಿಯಾದ ಅಮಿತ್ ಶಾ
ನವದೆಹಲಿ, ಏಪ್ರಿಲ್ 09: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಸೋಮವಾರ ಅವರ ನಿವಾಸದಲ್ಲಿ ಭೇಟಿಯಾದರು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದನ್ನು ಎಲ್ ಕೆ ಅಡ್ವಾಣಿ ಅವರಿಗೆ ನೀಡುವ ಸಲುವಾಗಿ ಉಭಯ ನಾಯಕರು ಭೇಟಿಯಾಗಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಣಾಳಿಕೆ ಬಿಡುಗಡೆಗೂ ಮುನ್ನ ಅಡ್ವಾಣಿ, ಜೋಷಿ ಮನವೊಲಿಕೆಗೆ ನಿಂತ ಶಾ!?
ಆದರೆ ಎಲ್ ಕೆ ಅಡ್ವಾಣಿ ಮತ್ತು ಮುರಳೀ ಮನೋಹರ್ ಜೋಷಿ ಅವರಿಗೆ ಈ ಬಾರಿ ಪಕ್ಷ ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಿರದ ಕಾರಣ ಹಿರಿಯ ನಾಯಕರ ಮನವೊಲಿಕೆಗಾಗಿ ಅಮಿತ್ ಶಾ ತೆರಳಿದ್ದಾರೆ ಎಂಬ ವದಂತಿಯೂ ಹಬ್ಬಿದೆ.
ಎಲ್ ಕೆ ಅಡ್ವಾಣಿ ಅವರು ಗುಜರಾತಿನ ಗಾಂಧಿನಗರದಿಂದ ಕಳೆದ ಹಲವು ವರ್ಷಗಳಿಂದ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡದೆ, ಅಮಿತ್ ಶಾ ಅವರೇ ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾನ್ಪುರ ಸಂಸದ ಮುರಳೀ ಮನೋಹರ್ ಜೋಷಿ ಅವರಿಗೂ ಈ ಬಾರಿ ಟಿಕೆಟ್ ನೀಡಲಾಗಿಲ್ಲ.
ಇದರಿಂದಾಗಿ ಉಭಯ ನಾಯಕರಲ್ಲೂ ಮೂಡಿರುವ ಅಸಮಾಧಾನ ಶಮನಕ್ಕೆ ಶಾ ಮುಂದಾಗಿದ್ದು, ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.