ಮುರಳಿ ಮನೋಹರ್ ಜೋಶಿಯನ್ನು ಭೇಟಿ ಮಾಡಿದ ಅಮಿತ್ ಶಾ
ನವದೆಹಲಿ, ಏಪ್ರಿಲ್ 8: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರ ಸಂಜೆ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಭೇಟಿ ಆಗಿದ್ದಾರೆ. ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಇಬ್ಬರೂ ನಾಯಕರಿಗೆ ಈ ಬಾರಿ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಹಲವು ವರ್ಷಗಳಿಂದ ಗುಜರಾತ್ ನ ಗಾಂಧೀನಗರ್ ನಿಂದ ಅಡ್ವಾಣಿ ಸ್ಪರ್ಧಿಸುತ್ತಿದ್ದರು. ಅಲ್ಲಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಇನ್ನು ಕಾನ್ಪುರ್ ನಿಂದ ಮುರಳಿ ಮನೋಹರ್ ಜೋಶಿ ಸ್ಪರ್ಧಿಸುತ್ತಿದ್ದರು. ಅಲ್ಲಿಂದ ಸತ್ಯದೇವ್ ಪಚೌರಿ ಅಖಾಡಕ್ಕೆ ಇಳಿದಿದ್ದಾರೆ.
ಯಾವಾಗ ಟಿಕೆಟ್ ಸಿಗಲಿಲ್ಲವೋ ಆಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಮುರಳಿ ಮನೋಹರ್ ಜೋಶಿ, ಕಾನ್ಪುರ್ ನಿಂದ ನನಗೆ ಟಿಕೆಟ್ ನೀಡುವುದಿಲ್ಲ ಎಂದು ಪಕ್ಷ ತಿಳಿಸಿದ್ದಾಗಿ ಹೇಳಿದ್ದರು. ಆದರೆ ಅಡ್ವಾಣಿ ಅವರು ಬ್ಲಾಗ್ ನಲ್ಲಿ ಬರೆದರು. ಯಾರು ತನ್ನ ನಿಲುವಿಗೆ ವಿರೋಧ ಆಗಿದ್ದರೋ ರಾಜಕೀಯವಾಗಿ ವಿರುದ್ಧ ಇದ್ದಾರೋ ಅಂಥವರನ್ನು ಬಿಜೆಪಿಯು 'ದೇಶವಿರೋಧಿ' ಎಂದು ಪರಿಗಣಿಸಿಲ್ಲ ಎಂದಿದ್ದರು.
ಕಳೆದ ಲೋಕಸಭಾ ಚುನಾವಣೆ ನಂತರ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮೂಲೆಗುಂಪಾಗಿದ್ದರು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು, ಅಧಿಕಾರ ಹಿಡಿದಿತ್ತು. ಇನ್ನು ಈ ಬಾರಿಯಂತೂ ಇಬ್ಬರೂ ನಾಯಕರಿಗೆ (ಅಡ್ವಾಣಿ, ಜೋಶಿ) ಲೋಕಸಭಾ ಟಿಕೆಟ್ ನೀಡಿಲ್ಲ. ಈ ಹಿಂದೆ ಬಿಜೆಪಿ ಘೋಷಣೆ ಮಾಡಿದ ಪ್ರಕಾರ, ಎಪ್ಪತ್ತೈದು ವರ್ಷ ಮೇಲ್ಪಟ್ಟವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ.