ಸುಪ್ರೀಂ ಕೋರ್ಟಿನಲ್ಲಿ 'ವಂದೇ ಮಾತರಂ' ಕೂಗಿದ ವಕೀಲ!
ನವದೆಹಲಿ, ಫೆಬ್ರವರಿ 17 : ಸುಪ್ರೀಂ ಕೋರ್ಟಿನಲ್ಲಿ ಕಲಾಪ ನಡೆಯುತ್ತಿದ್ದಾಗಲೇ ವಕೀಲರೊಬ್ಬರು 'ವಂದೇ ಮಾತರಂ' ಅಂತ ಕೂಗಿ ಅಚ್ಚರಿ ಮೂಡಿಸಿದರು. ಹೀಗೆ ಮಾಡಿ ಕಲಾಪಕ್ಕೆ ಭಂಗ ತಂದಿದ್ದಕ್ಕೆ ಕ್ಷಮೆಯನ್ನೂ ಕೋರಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
"ಸರ್ವೋಚ್ಚ ನ್ಯಾಯಾಲಯದಲ್ಲಿಯೇ ಹೀಗಾದರೆ ಹೇಗೆ, ನಾವೇನು ಹೇಳಬೇಕು?" ಎಂದು ಪತ್ರಕರ್ತರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲಾದ ಹಲ್ಲೆಗೆ ಸಂಬಂಧಿಸಿದ ಪ್ರಕರಣವನ್ನು ಆಲಿಸುತ್ತಿದ್ದ ನ್ಯಾಯಮೂರ್ತಿಗಳು ಆಘಾತ ವ್ಯಕ್ತಪಡಿಸಿದರು. [ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ]
ಕೋರ್ಟ್ ರೂಂ 5ರಲ್ಲಿ ನಡೆಯುತ್ತಿದ್ದ ವಾದಪ್ರತಿವಾದವನ್ನು ಆಲಿಸುತ್ತಿದ್ದ ವಕೀಲ ರಾಜೀವ್ ಯಾದವ್ ಅವರು ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ 'ವಂದೇ ಮಾತರಂ' ಅಂತ ಕೂಗಲು ಆರಂಭಿಸಿದರು. ಇದರಿಂದ ನ್ಯಾಯಮೂರ್ತಿಗಳು ಮಾತ್ರವಲ್ಲ ಹಾಲ್ನಲ್ಲಿದ್ದ ಇತರ ವಕೀಲರೂ ಚಕಿತಕ್ಕೊಳಗಾದರು. [ಕೋಲ್ಕತಾದಲ್ಲಿಯೂ ಪ್ರತಿಧ್ವನಿಸಿದ ರಾಷ್ಟ್ರವಿರೋಧಿ ಕೂಗು]
"ನೀವು ವಕೀಲರಾಗುವಾಗ ತೆಗೆದುಕೊಂಡ ಪ್ರಮಾಣವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಒಬ್ಬ ವಕೀಲರಾಗಿ ನೀವು ಈ ರೀತಿ ನಡೆದುಕೊಳ್ಳಬಹುದೆ? ನ್ಯಾಯಾಂಗದ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ. ಅದನ್ನು ಸಂಸಕ್ಷಿಸಲು ಕೆಲಸ ಮಾಡಿ" ಎಂದು ನ್ಯಾಯಮೂರ್ತಿ ಚಾಮಲೇಶ್ವರ ಮತ್ತು ನ್ಯಾಯಮೂರ್ತಿ ಅಭಯ್ ಸಪ್ರೆ ಅವರು ಬುದ್ಧಿವಾದ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದಿರುವ 'ವಂದೇ ಮಾತರಂ' ಹಾಡನ್ನು ರಾಷ್ಟ್ರೀಯ ಹಾಡನ್ನಾಗಿ ಪರಿಗಣಿಸಲಾಗಿದ್ದರೂ, ಕೆಲ ಮುಸ್ಲಿಂ ಪಂಗಡಗಳು ಇದನ್ನು ಪರಿಗಣಿಸುವುದಿಲ್ಲ. [ಬೆಂಗಳೂರಿನ ವಕೀಲ-ಪತ್ರಕರ್ತ ಜಟಾಪಟಿ]
ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ, ದೆಹಲಿ ಕೋರ್ಟಿನಲ್ಲಿ ನೆರೆದಿದ್ದ ಪತ್ರಕರ್ತರ ಮೇಲೆ ಕೆಲ ವಕೀಲರು 'ಭಾರತ್ ಮಾತಾಕೀ ಜೈ' ಎಂದು ಘೋಷಣೆ ಕೂಗುತ್ತ ಹಲ್ಲೆ ನಡೆಸಿದ್ದರು.
2001ರ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಬೆಂಬಲಿಸಿ ಜೆಎನ್ಯು ವಿದ್ಯಾರ್ಥಿಗಳು 'ಸ್ವಾತಂತ್ರ್ಯ ಬೇಕು' ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖಂಡ ಕನ್ಹಯ್ಯ ಕುಮಾರ್ನನ್ನು ಬಂಧಿಸಲಾಗಿದೆ. ಮತ್ತು ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡಿದ್ದಾರೆಂದು ಮಾಜಿ ಪ್ರೊಫೆಸರ್ ಗಿಲಾನಿನನ್ನೂ ಬಂಧಿಸಲಾಗಿದೆ. [ದೆಹಲಿಯಲ್ಲಿ ವಕೀಲರು VS ಪತ್ರಕರ್ತರು]