ಆತ್ಮೀಯ ಗೆಳೆಯನ ಅಗಲಿಕೆಗೆ ಭಾವುಕ ಪತ್ರ ಬರೆದ ಅಡ್ವಾಣಿ
ನವದೆಹಲಿ, ಆಗಸ್ಟ್ 16: ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ನಿಧನರಾಗಿದ್ದಾರೆ. ದೇಶದ ಎಲ್ಲ ಪ್ರಮುಖ ರಾಜಕಾರಣಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅಟಲ್ ಜೀ ಅವರ ಬಲಗೈ ಎಂದೇ ಎನಿಸಿಕೊಂಡಿದ್ದ ಅಡ್ವಾಣಿ ಅವರು ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರದ್ದು ಬರೋಬ್ಬರಿ 65 ವರ್ಷದ ಗೆಳೆತನ, ಇಂದು ತಮ್ಮ ಬಹು ಕಾಳದ ಗೆಳೆಯನನ್ನು ಅಡ್ವಾಣಿ ಅವರು ಕಳೆದುಕೊಂಡಿದ್ದಾರೆ.
ಅಗಲಿದ ನಾಯಕನಿಗೆ ಕಂಬನಿ ಸುರಿಸಿದ ರಾಜಕೀಯ ದಿಗ್ಗಜರು
'ನಿಮ್ಮ ಅಗಲಿಕೆ ನನಗೆ ತಂದಿರುವ ನೋವನ್ನು ಹೇಳಲು ನನ್ನಲ್ಲಿ ಪದಗಳೇ ಇಲ್ಲ, ನೀವು ನನ್ನ ಹಿರಿಯ ರಾಜಕೀಯ ಸಹೋದ್ಯೋಗಿ ಮಾತ್ರವಾಗಿರಲಿಲ್ಲ, ನೀವು ನನ್ನ 65 ವರ್ಷದ ಗೆಳೆಯ' ಎಂದು ಅಡ್ವಾಣಿ ಅವರು ಅಗಲಿದ ಅಟಲ್ ಜೀ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.
ಇಬ್ಬರೂ ಆರ್ಎಸ್ಎಸ್ನಿಂದ ಪಯಣ ಪ್ರಾರಂಭಿಸಿದ್ದರು
ಇಬ್ಬರೂ ಆರ್ಎಸ್ಎಸ್ನ ಸ್ವಯಂ ಸೇವಕರಾಗಿ ರಾಜಕೀಯ ಜೀವನ ಪ್ರಾರಂಭಿಸಿದವರು, ಅದನ್ನೂ ನೆನೆಸಿಕೊಂಡಿರುವ ಅಡ್ವಾಣಿ ಅವರು, ನಾನು ಮತ್ತು ಅವರು ಆರ್ಎಸ್ಎಸ್ ಸ್ವಯಂ ಸೇಕವರಾಗಿ ಪ್ರಾರಂಭಿಸಿ ಭಾರತೀಯ ಜನಸಂಘ ಸೇರ್ಪಡೆ, ಆ ನಂತರ ಕಷ್ಟದ ದಿನಗಳು, ತುರ್ತು ಪರಿಸ್ಥಿತಿ, ಆ ನಂತರದ ಜನತಾ ಪಾರ್ಟಿ ಸ್ಥಾಪನೆ, ಬಿಜೆಪಿ ಸ್ಥಾಪನೆ ಎಲ್ಲ ಕಾಲದಲ್ಲೂ ನಾವಿಬ್ಬರೂ ಜೊತೆಗಿದ್ದೆವು ಎಂದು ನೆನೆಸಿಕೊಂಡಿದ್ದಾರೆ.
ಮೊದಲ ಕಾಂಗ್ರೆಸ್ ಏತರ ಸರ್ಕಾರ ರಚಿಸಿದ್ದು ಅಟಲ್ ಜೀ
ಅಟಲ್ ಬಿಹಾರಿ ವಾಜಪೇಯಿ ಅವರು, ಮೊದಲ ಕಾಂಗ್ರೆಸ್ ಏತರ ಸರ್ಕಾರ ರಚಿಸಿದ ವ್ಯಕ್ತಿ ಎಂಬುದನ್ನೂ ಇತಿಹಾಸ ನೆನಪಿಸಿಕೊಳ್ಳುತ್ತದೆ ಎಂದಿರುವ ಅಡ್ವಾಣಿ ಅವರು, ಅವರಿಗೆ ಸಹಾಯಕನಾಗಿ ನನಗೆ ಸಿಕ್ಕ ಆರು ವರ್ಷ ನನ್ನ ಪುಣ್ಯದ ವರ್ಷಗಳು ನನ್ನ ಹಿರಿಯರಾಗಿ ಅವರು ನನ್ನನ್ನು ಸದಾ ಮಾರ್ಗದರ್ಶಿಸಿದ್ದಾರೆ, ಮುನ್ನಡೆಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಟಲ್ ಕಳೆದುಕೊಂಡ ಭಾರತ ಶೋಕ ಸಾಗರದಲ್ಲಿ ಮುಳುಗಿದೆ
ಎದುರಾಳಿಗಳನ್ನು ನಗುವಿನಿಂದ ಗೆಲ್ಲುವ ಚತುರತೆ
ಅವರ ನಾಯಕತ್ವ ಗುಣಗಳು, ಸಮ್ಮೋಹನ ಗೊಳಿಸುವ ಭಾಷಣ, ಅವರ ದೇಶಭಕ್ತಿ ಮತ್ತು ಎಲ್ಲದಕ್ಕಿಂತಲೂ ಹೆಚ್ಚಾಗಿ ಅವರ ಸಹಾನುಭೂತಿ, ನಮ್ರತೆ, ಮಾನವೀಯತೆ ಅವರನ್ನು ಒಬ್ಬ ನಿಶ್ಕಲ್ಮಶ ರಾಜಕಾರಣಿಯಾಗಿಸಿತ್ತು. ಭಿನ್ನಾಭಿಪ್ರಾಯಗಳ ನಡುವೆಯೂ ಅವರು ಎದುರಾಳಿಯ ಮನಸ್ಸನ್ನು ಗೆಲ್ಲುವ ಚತುರರಾಗಿದ್ದರು ಎಂದು ಅಡ್ವಾಣಿ ಅವರು, ಅಟಲ್ ಜೀ ಅವರ ವ್ಯಕ್ತಿತ್ವವನ್ನು ಹೊಗಳಿಸಿದ್ದಾರೆ.
ಬಿಜೆಪಿಯ ಹಕ್ಕ ಬುಕ್ಕರು
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಹಕ್ಕ-ಬುಕ್ಕರಂತೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಕ್ಕ-ಬುಕ್ಕರೆಂದೇ ಅಟಲ್ ಜೀ ಮತ್ತು ಅಡ್ವಾಣಿ ಅವರು ಖ್ಯಾತರು. ಬಿಜೆಪಿಯ ಎಡಗೈ-ಬಲಗೈ ಎಂತಲೂ ಅವರಿಬ್ಬರನ್ನೂ ಕರೆಯಲಾಗುತ್ತಿತ್ತು. ಅಟಲ್ ಜೀ ಬಿಜೆಪಿಯ ಮೆದುಳು ಮತ್ತು ಬಾಯಾದರೆ, ಅಡ್ವಾಣಿ ಜೀ ಬಿಜೆಪಿಯ ದುಡಿಯುವ ಬಾಹುಗಳು ಎಂದು ರೂಪಕ ಹೆಣೆಯಾಗಿತ್ತು. ಅವರಿಬ್ಬರದ್ದೂ ಅಪರೂಪದಲ್ಲಿ ಅಪರೂಪ ಎಂಬ ಸ್ನೇಹ.