ಬಾಬ್ರಿ ಪ್ರಕರಣ: ಆರೋಪ ಸಾಬೀತಾದಲ್ಲಿ ಅಡ್ವಾಣಿ ಮತ್ತಿತರರಿಗೆ ಐದು ವರ್ಷ ಜೈಲು
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತೊಮ್ಮೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಬಿಜೆಪಿಯ ಪ್ರಮುಖ ನಾಯಕ ಎಲ್ ಕೆ ಅಡ್ವಾಣಿ ಮತ್ತಿತರರಿಗೆ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ
ನವದೆಹಲಿ, ಏಪ್ರಿಲ್ 20: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಪ್ರಮುಖರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಉಮಾಭಾರತಿಗೆ ಐದು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ವಿಚಾರಣೆ ಕೋರ್ಟ್ ನಿಂದ ಇವರೆಲ್ಲರ ಮೇಲಿರುವ ಆರೋಪಕ್ಕೆ ಶಿಕ್ಷೆಯಾದರೆ ಎರಡರಿಂದ ಐದು ವರ್ಷದವರೆಗೆ ಜೈಲಾಗಬಹುದು.
ಇವರೆಲ್ಲರ ಮೇಲಿನ ಕ್ರಿಮಿನಲ್ ಸಂಚು ಆರೋಪದ ವಿಚಾರಣೆಯನ್ನು ಮತ್ತೆ ಮಾಡುವಂತೆ ಬುಧವಾರ ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ನಿತ್ಯವೂ ನಡೆಸಿ, ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬೇಡಿ ಎಂದು ಕೂಡ ತಿಳಿಸಿದೆ. ಎರಡು ಕೋಮುಗಳ ಮಧ್ಯೆ ಸಾಮರಸ್ಯ ಹಾಳು ಮಾಡಿದ ಆರೋಪ ಸೇರಿದಂತೆ ಇತರ ಐಪಿಸಿ ಸೆಕ್ಷನ್ ಗಳಡಿ ವಿಚಾರಣೆ ನಡೆಯಲಿದ್ದು, ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯಾಗಲಿದೆ.[ಬಾಬ್ರಿ ಮಸೀದಿ ಧ್ವಂಸ ಕೇಸ್: ಅಡ್ವಾಣಿ ವಿರುದ್ಧ ವಿಚಾರಣೆಗೆ ಸುಪ್ರೀಂ ಅಸ್ತು]
ಧಾರ್ಮಿಕ ಭಾವನೆ, ನಂಬಿಕೆಗಳಿಗೆ ಘಾಸಿ ಮಾಡುವ ಉದ್ದೇಶದಿಂದ ಶ್ರದ್ಧಾ ಕೇಂದ್ರಕ್ಕೆ ಹಾನಿ ಮಾಡಿದ ಆರೋಪಕ್ಕೆ ಗರಿಷ್ಠ ಎರಡು ವರ್ಷ, ಉದ್ದೇಶಪೂರ್ವಕವಾಗಿ ಯಾವುದೇ ಧರ್ಮ ಹಾಗೂ ಧಾರ್ಮಿಕ ನಂಬಿಕೆ ವಿರುದ್ಧ ನಡೆಸಿದ ದುಷ್ಕೃತ್ಯದ ಆರೋಪಕ್ಕೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೂವರನ್ನು ಹೊರತುಪಡಿಸಿದರೆ ಚಂಪತ್ ರಾಯ್ ಬನ್ಸಲ್, ಸತೀಶ್ ಪ್ರಧಾನ್, ಧರಂ ದಾಸ್, ಮಹಂತ್ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಹಲವರು ವಿಚಾರಣೆ ಎದುರಿಸಲಿದ್ದಾರೆ.