ಕಾರ್ಯಕರ್ತರು ಜೈಲಿನಲ್ಲಿದ್ದಾರೆ, ಭಯೋತ್ಪಾದಕರು ಹೊರಗಿದ್ದಾರೆ; ಶಶಿ ತರೂರ್
ನವದೆಹಲಿ, ಫೆಬ್ರುವರಿ 15: ರೈತರ ಪ್ರತಿಭಟನೆ ಸಂಬಂಧ ಗ್ರೆಟಾ ಥನ್ಬರ್ಗ್ 'ಟೂಲ್ಕಿಟ್' ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಪರ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾತನಾಡಿದ್ದು, ಆಕೆಯ ಬಂಧನವನ್ನು ಖಂಡಿಸಿದ್ದಾರೆ.
"ಕಾರ್ಯಕರ್ತರು ಜೈಲಿನಲ್ಲಿದ್ದಾರೆ. ಆದರೆ ಭಯೋತ್ಪಾದನೆ ಆರೋಪ ಹೊತ್ತವರು ಜಾಮೀನಿನ ಮೇಲೆ ಹೊರಗಿದ್ದಾರೆ. ಪುಲ್ವಾಮಾ ದಾಳಿಯ ವಾರ್ಷಿಕ ಸ್ಮರಣೆಯನ್ನು ನಮ್ಮ ಆಡಳಿತ ಹೇಗೆ ಮಾಡುತ್ತಿದೆ ಎಂಬುದನ್ನು ಕಂಡು ಆಶ್ಚರ್ಯವಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ
ದಿಶಾ ರವಿ "ಫ್ರೈಡೇ ಫಾರ್ ಫ್ಯೂಚರ್" ಸಂಸ್ಥಾಪಕರಲ್ಲೊಬ್ಬರು. ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ್ದ ಟೂಲ್ ಕಿಟ್ ಸಂಪಾದನೆ ಮಾಡಿದ ಆರೋಪದಲ್ಲಿ ಶನಿವಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಟೂಲ್ಕಿಟ್ ವಿಚಾರವಾಗಿ ದೆಹಲಿ ಪೊಲೀಸರ ವಿಶೇಷ ಸೈಬರ್ ಕ್ರೈಂ ಘಟಕ ಫೆಬ್ರವರಿ 4ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಶನಿವಾರ ಬೆಂಗಳೂರಿನಲ್ಲಿರುವ ದಿಶಾ ನಿವಾಸಕ್ಕೆ ಬಂದಿದ್ದ ಪೊಲೀಸರು, ಅವರನ್ನು ಬಂಧಿಸಿ ದೆಹಲಿಗೆ ಕರೆದೊಯ್ದು, ಭಾನುವಾರ ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ದಿಶಾಗೆ ಖಲಿಸ್ತಾನ ಪರ ಚಳವಳಿಯೊಂದಿಗೆ ಇದೆ ಎನ್ನಲಾದ ನಂಟನ್ನು ಖಾತರಿಪಡಿಸಿಕೊಳ್ಳಲು ಆಕೆಯ ವಿಚಾರಣೆ ನಡೆಸುವುದು ಅಗತ್ಯವಿದೆ ಎಂದು ತಿಳಿಸಿ ಪೊಲೀಸರು ಬಂಧಿಸಿದ್ದರು. ದಿಶಾ ರವಿ ಬಂಧನವನ್ನು ವಿರೋಧ ಪಕ್ಷಗಳು ಖಂಡಿಸಿವೆ.