ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ
ನವದೆಹಲಿ, ಸೆಪ್ಟೆಂಬರ್ 11: ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ (80) ಶುಕ್ರವಾರ ನಿಧನರಾದರು. ಯಕೃತ್ತಿನ ಸಿರೋಸಿಸ್ನಿಂದ ಬಳಲುತ್ತಿದ್ದ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರದಿಂದಲೂ ಅವರು ಬಹುಅಂಗಾಂಗ ವೈಫಲ್ಯದ ಕಾರಣ ವೆಂಟಿಲೇಟರ್ ಸಪೋರ್ಟ್ನಲ್ಲಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಸೆ. 11ರಂದು ತೀವ್ರ ಹದಗೆಟ್ಟಿತ್ತು. ಸಂಜೆ 6 ಗಂಟೆಯ ವೇಳೆಗೆ ಹೃದಯಾಘಾತಕ್ಕೆ ಒಳಗಾದರು. ಅವರ ಹೃದಯ ಬಡಿತವನ್ನು ಮರುಸ್ಥಾಪಿಸುವ ಪ್ರಯತ್ನಗಳು ನಡೆದರೂ ಸಂಜೆ 6.30ರ ವೇಳೆಗೆ ಅವರು ಕೊನೆಯುಸಿರೆಳೆದರು. ತಮ್ಮ ನೆಚ್ಚಿನ ನಾಯಕ ನಿಧನದಿಂದ ಶೋಕಿಸುತ್ತಿರುವ ದೇಶದ ಜನತೆಯ ಜತೆಗೆ ಐಎಲ್ಬಿಎಸ್ ಕೂಡ ಸೇರಿಕೊಂಡಿದೆ ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.
ಹರಿಯಾಣದ ಮಾಜಿ ಶಾಸಕರಾಗಿದ್ದ ಅಗ್ನಿವೇಶ್, 1970ರಲ್ಲಿ ಆರ್ಯ ಸಮಾಜದ ತತ್ವಗಳ ಆಧಾರದಲ್ಲಿ ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದರು. ಧರ್ಮಗಳ ನಡುವಿನ ಮಾತುಕತೆ ವ್ಯವಹಾರಗಳಲ್ಲಿ ಅವರು ಮಧ್ಯಸ್ಥಿಕೆ ವಹಿಸುತ್ತಿದ್ದರು.
ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಹಾಗೂ ಮಹಿಳಾ ವಿಮೋಚನೆಯ ಪರವಾದ ಆಂದೋಲನಗಳು ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.