ದೆಹಲಿಯಲ್ಲಿ ಆಪ್ ಧೂಳಿಪಟ : ಗುಪ್ತಚರ ಇಲಾಖೆ ಸ್ಫೋಟಕ ವರದಿ
ನವದೆಹಲಿ, ಜ. 27 : ಫೈರ್ ಬ್ರಾಂಡ್ ನಾಯಕಿ ಶಾಜಿಯಾ ಇಲ್ಮಿ ಸೇರಿದಂತೆ ಹಲವು ನಾಯಕರು ಪಕ್ಷ ತೊರೆದಿದ್ದರಿಂದ ಮತ್ತು ಕೆಲವರು ಬಿಜೆಪಿ ಪಕ್ಷವನ್ನು ಹಾಡಿಹೊಗಳುತ್ತಿರುವುದರಿಂದ ಸಣ್ಣ ಆಘಾತಕ್ಕೆ ಒಳಗಾಗಿರುವ ಆಮ್ ಆದ್ಮಿ ಪಕ್ಷಕ್ಕೆ ಗುಪ್ತಚರ ಇಲಾಖೆ ಇದೀಗ ನೀಡಿರುವ ವರದಿ ದೊಡ್ಡ ಮಟ್ಟದ ಆಘಾತವನ್ನೇ ನೀಡಲಿದೆ.
ವರದಿ ಏನೆಂದರೆ, 70 ಸೀಟುಗಳಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 14ರಿಂದ 16 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ದೆಹಲಿ ಮಟ್ಟಿಗೆ ಕಾಂಗ್ರೆಸ್ ಹೋಳು ಉಪ್ಪಿನಕಾಯಿ ಆಗಿರುವುದರಿಂದ ಕಾದಾಟ ಬಿಜೆಪಿ ಮತ್ತು ಆಪ್ ನಡುವೆ ಇದೆ ಎಂದೇ ಬಿಂಬಿತವಾಗಿತ್ತು. ಆದರೆ, ಈ ವರದಿಯ ಪ್ರಕಾರ, ಹೋರಾಟವೂ ಏಕಪಕ್ಷೀಯವಾಗಿರಲಿದೆ.
ಇದರ ಜೊತೆಗೆ ಮತ್ತೊಂದು ಶಾಕಿಂಗ್ ಸುದ್ದಿ ಈ ವರದಿಯಿಂದ ಹೊರಬಿದ್ದಿದೆ. ಕೇವಲ 49 ದಿನ ಮಾತ್ರ ಆಡಳಿತ ನಡೆಸಿ ಹಿಂದೆ ಸರಿದ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಆ ದಿನದಿಂದಲೇ ಕುಂಠಿತವಾಗುತ್ತ ಬಂದಿದೆ. ಅಲ್ಲದೆ, ಈ ಬಾರಿ ಆಪ್ ಘಟಾನುಘಟಿಗಳಿಗೆ ಮತದಾರ ಮಣ್ಣುಮುಕ್ಕಿಸಲಿದ್ದಾನೆ. ಈ ಸ್ಫೋಟಕ ವರದಿಯಲ್ಲಿ ಇನ್ನೂ ಏನೇನಿದೆ? [ದೆಹಲಿ : ಸಿಎಂ ಹುದ್ದೆಗೆ ಯಾರು ಬೆಸ್ಟ್?]
ಅಧಿಕಾರ ತ್ಯಜಿಸುವುದು ಸಮಸ್ಯೆಗೆ ಪರಿಹಾರವೆ?
ಗುಪ್ತಚರ ಇಲಾಖೆ ವರದಿಯ ಪ್ರಕಾರ, ಕಳೆದ ಕೆಲ ತಿಂಗಳಿನಿಂದ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಜಾರುಬಂಡಿಯಾಗಿದೆ. ಇಲ್ಲಿ ಪ್ರಮುಖ ಅಂಶ, ಕೇವಲ 49 ದಿನಗಳ ಕಾಲ ರಾಜ್ಯಭಾರ ನಡೆಸಿದ್ದು ಪಕ್ಷಕ್ಕೆ ಮುಳುವಾಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಸವಾಲುಗಳು ಎದುರಾಗುವುದು ಸಾಮಾನ್ಯವೇ. ಅಧಿಕಾರ ತ್ಯಜಿಸುವುದು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದಲ್ಲಿರುವ ಸರಕಾರವೇ ದೆಹಲಿಯಲ್ಲಿದ್ದರೆ ಚೆನ್ನ
ಕೇಂದ್ರದಲ್ಲಿ ಸರಕಾರ ಬದಲಾಗಿರುವುದು ಆಮ್ ಆದ್ಮಿ ಪಕ್ಷಕ್ಕೆ ಕಂಟಕವಾಗಲಿದೆ. ಕೇಂದ್ರದಲ್ಲಿರುವ ಸರಕಾರವೇ ದೆಹಲಿಯಲ್ಲಿಯೂ ಇದ್ದರೆ ಸಾಕಷ್ಟು ಅನುಕೂಲವಾಗಲಿದೆ. ಆಪ್ ಅಧಿಕಾರ ತ್ಯಜಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಆಪ್ ಬಗ್ಗೆ ಮತದಾರನಲ್ಲಿ ಇನ್ನೂ ಕಹಿ ಭಾವನೆ ಇರುವುದು ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎನ್ನುತ್ತದೆ ವರದಿ.
ಕಿರಣ್ ಬೇಡಿ ಅಂಶದಿಂದ ಎಲ್ಲವೂ ಉಲ್ಟಾಪುಲ್ಟಾ
ದೆಹಲಿಯ ಮಾಜಿ ಪೊಲೀಸ್ ನಿರ್ದೇಶಕಿ ಕಿರಣ್ ಬೇಡಿ ಬಿಜೆಪಿಯನ್ನು ಸೇರಿಕೊಂಡಿರುವುದು ಆಮ್ ಆದ್ಮಿ ಪಕ್ಷದ ನಿರೀಕ್ಷೆಗಳನ್ನೆಲ್ಲಾ ಉಲ್ಟಾಪುಲ್ಟಾ ಮಾಡಲಿದೆ. ಕಿರಣ್ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಮುನ್ನ ಮಿಶ್ರ ಭಾವನೆಯಿತ್ತು. ಮುಖ್ಯಮಂತ್ರಿ ಪಟ್ಟಕ್ಕೆ ಅರವಿಂದ್ ಕೇಜ್ರಿವಾಲ್ ಮಾತ್ರ ಇದ್ದಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತು. ಆದರೆ, ಕಿರಣ್ ಬೇಡಿ ಬಿಜೆಪಿಯ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದು ಇಡೀ ಸಮೀಕರಣವನ್ನೇ ಏರುಪೇರು ಮಾಡಲಿದೆ.
ನಾಯಕರು ಪಕ್ಷ ಬಿಟ್ಟಿರುವುದು ಆಪ್ಗೆ ಮರ್ಮಾಘಾತ
ಶಾಜಿಯಾ ಇಲ್ಮಿ ಮತ್ತಿತರರು ಪಕ್ಷ ಬಿಟ್ಟು ಬಿಜೆಪಿ ಸೇರಿರುವುದು ಆಮ್ ಆದ್ಮಿ ಪಕ್ಷಕ್ಕೆ ಮರ್ಮಾಘಾತವಾದಂತಾಗಿದೆ. ಅಲ್ಲದೆ, ಕೆಲವರು ಪಕ್ಷದಲ್ಲಿದ್ದುಕೊಂಡೇ ಬಿಜೆಪಿಯನ್ನು ಹೊಗಳುತ್ತಿರುವುದು ಮತ್ತು ಕೇಜ್ರಿವಾಲ್ ಡಿಕ್ಟೇಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಈ ಬದಲಾವಣೆಗಳು ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರಿರುವುದಂತೂ ಸತ್ಯ.
ರಾಜಕೀಯ ಪಂಡಿತರ ಅಭಿಪ್ರಾಯ
ಖ್ಯಾತ ರಾಜಕೀಯ ಪಂಡಿತ ಡಾ. ಸಂದೀಪ್ ಶಾಸ್ತ್ರೀಯವರ ಪ್ರಕಾರ, 49 ದಿನಗಳ ಆಡಳಿತ ನಡೆಸಿ ಹಿಂದೆ ಸರಿದಿದ್ದರ ಪರಿಣಾಮ ಆಮ್ ಆದ್ಮಿ ಪಕ್ಷಕ್ಕೆ ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಸಿಕ್ಕಿದೆ. ಇದು ಮಾಡಿದ್ದು ತಪ್ಪು ಅಂತ ಕೇಜ್ರಿವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದರೂ, ಮುಂದಿನ ವಿಧಾನಸಭೆಯಲ್ಲಿ ಇದರಿಂದ ಪಕ್ಷಕ್ಕೆ ಹೆಚ್ಚಿನ ಲಾಭವೇನೂ ಆಗಲಾರದು.
ಕಾಂಗ್ರೆಸ್ ಈ ಚುನಾವಣೆಯಲ್ಲಿ ನಿರ್ನಾಮ
ಶಾಸ್ತ್ರೀಯವರು ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರ ಕನಸಿನ ಕೂಸು ಒಂದಲ್ಲ ನಾಲ್ಕು ಹೆಜ್ಜೆ ಹಿಂದಿಟ್ಟಾಗಿದೆ. ಹೀಗಾಗಿ ಫೆಬ್ರವರಿ 7ರಂದು ನಡೆಯುವ ಮತದಾನ ಮತ್ತು ಫೆ.10ರಂದು ಸಿಗಲಿರುವ ಫಲಿತಾಂಶ ಭಾರತೀಯ ಜನತಾ ಪಕ್ಷದ ಪರವಾಗಿರಲಿದೆ. ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ. ಅಲ್ಲದೆ, ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನೂ ಕಿತ್ತುಕೊಳ್ಳುವುದರಿಂದ ಕಾಂಗ್ರೆಸ್ ಹೇಳಹೆಸರಿಲ್ಲದಂತೆ ದೆಹಲಿಯಲ್ಲಿ ನಿರ್ನಾಮವಾಗಲಿದೆ.