ಆಕ್ಸಿಜನ್ ಹೆಚ್ಚಳ ವರದಿ: ಆಪ್ vs ಕೇಂದ್ರ ಸರ್ಕಾರ
ನವದೆಹಲಿ, ಜೂ.26: ಕೋವಿಡ್ -19 ರ ಕೊನೆಯ ಅಲೆಯ ಸಂದರ್ಭದಲ್ಲಿ ದೆಹಲಿಯ ಆಮ್ಲಜನಕದ ಪರಿಸ್ಥಿತಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ಇಬ್ಬರು ಸದಸ್ಯರು ಮಧ್ಯಂತರ ವರದಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ದೆಹಲಿ ಸರ್ಕಾರವು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿತ್ತು ಎಂದು ಸುಪ್ರೀಂ ಕೋರ್ಟ್ ಸಮಿತಿ ವರದಿಯಲ್ಲಿ ತಿಳಿಸಿತ್ತು.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ನ ಈ ಸಮಿತಿಯ ನೇತೃತ್ವ ವಹಿಸಿದ್ದ ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ, ''ದೆಹಲಿ ಆಮ್ಲಜನಕ ಆಡಿಟ್ ಸಮಿಯ ಮಧ್ಯಂತರ ವರದಿಯಾಗಿದೆ. ನಾವು ದೆಹಲಿಯಲ್ಲಿ ನಾಲ್ಕು ಮಟ್ಟು ಹೆಚ್ಚು ಆಕ್ಸಿಜನ್ ಬೇಡಿಕೆ ಇರಿಸಲಾಗಿದೆ ಎಂದು ಹೇಳಲಾಗದು,'' ಎಂದು ಹೇಳುವ ಮೂಲಕ ಗೊಂದಲ ಉಂಟು ಮಾಡಿದ್ದಾರೆ.
ಕೋವಿಡ್: ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಆಕ್ಸಿಜನ್ ಕೇಳಿದ್ದ ದೆಹಲಿ ಸರ್ಕಾರ- ಸುಪ್ರೀಂ ಕೋರ್ಟ್ ಸಮಿತಿ
ಸುಪ್ರೀಂ ಕೋರ್ಟ್ನ ಈ ಸಮಿತಿಯು ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ ನೇತೃತ್ವದ್ದಾಗಿದ್ದು, ಈ ಸಮಿತಿಯಲ್ಲಿ ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮ್ಯಾಕ್ಸ್ ಹೆಲ್ತ್ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್ ಇದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ಇಬ್ಬರು ಸದಸ್ಯರು ಮಧ್ಯಂತರ ವರದಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಮ್ಯಾಕ್ಸ್ ಹೆಲ್ತ್ಕೇರ್ನ ಕ್ಲಿನಿಕಲ್ ನಿರ್ದೇಶಕ ಡಾ. ಸಂದೀಪ್ ಬುಧಿರಾಜ ಹಾಗೂ ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದವರು.
ನಾವು ಈ ವರದಿಯನ್ನು ಒಪ್ಪುವುದಿಲ್ಲ ಎಂದು ಹೇಳಿರುವ ಇಬ್ಬರು, ಆಮ್ಲಜನಕದ ಅವಶ್ಯಕತೆ ಅತಿಯಾಗಿ ಇದ್ದದ್ದು ನಿಜ ಎಂದಿದ್ದಾರೆ. ಈ ಗುಂಪಿನ ಓರ್ವರಾದ ಭಲ್ಲಾ, ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ''ಈ ವರದಿಯಲ್ಲಿ ಆಕ್ಷೇಪಣೆಗಳು ಮತ್ತು ತಿದ್ದುಪಡಿಗಳನ್ನು ಸೇರಿಸಲಾಗಿಲ್ಲ. ಈ ವರದಿಗೆ ಉಪಗುಂಪಿನ ಎಲ್ಲಾ ಸದಸ್ಯರು ಅನುಮೋದನೆ ನೀಡಿಲ್ಲ,'' ಎಂದು ಹೇಳಿದ್ದಾರೆ. ಇದು ಪೂರ್ವ ನಿರ್ಧರಿತ ತೀರ್ಮಾನ ಎಂದು ದೂರಿದ್ದಾರೆ.
ಇನ್ನು ಇನ್ನೋರ್ವ ಸದಸ್ಯ ಡಾ. ಬುಧಿರಾಜ, ಮಧ್ಯಂತರ ಕರಡು ವರದಿಯಲ್ಲಿ ಬದಲಾವಣೆಗಳನ್ನು ಮತ್ತು ಸೇರ್ಪಡೆಗಳನ್ನು ಕೋರಿದ್ದರು. ಆದರೆ ಇದನ್ನು ಸೇರ್ಪಡೆ ಮಾಡಿಲ್ಲ ಎಂದು ಹೇಳಲಾಗಿದೆ.
ಪ್ರತಿ ಬೆಡ್ಗೆ ಆಮ್ಲಜನಕ ಬಳಕೆ 289 ಮೆಟ್ರಿಕ್ ಟನ್ ಆಗಿದೆ. ಆದರೆ ದೆಹಲಿ ಸರ್ಕಾರವು ಇದರ ನಾಲ್ಕು ಪಟ್ಟು ಆಮ್ಲಜನಕವನ್ನು ಕೇಳಿತ್ತು. ಅಂದರೆ 1,140 ಮೆಟ್ರಿಕ್ ಟನ್ ಅಗತ್ಯವಿದೆ ಎಂದು ದೆಹಲಿ ಸರ್ಕಾರ ಹೇಳಿತ್ತು ಎಂದು ಸುಪ್ರೀಂಕೋರ್ಟ್ ನಿಯುಕ್ತ ಆಕ್ಸಿಜನ್ ಲೆಕ್ಕ ಪರಿಶೋಧನಾ ಸಮಿತಿ ಶುಕ್ರವಾರ ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.
ಈ ಸಮಿತಿಯು ತನ್ನ ವರದಿಯಲ್ಲಿ, ''ದೆಹಲಿಯಲ್ಲಿ ಆಮ್ಲಜನಕದ ಸರಾಸರಿ ಬಳಕೆ 284 ರಿಂದ 372 ಮೆ.ಟನ್ ಆಗಿದೆ. ಆದರೆ ಸರ್ಕಾರ 1,140 ಮೆಟ್ರಿಕ್ ಟನ್ ಆಮ್ಲಜನಕ ಕೋರಿತ್ತು. ದೆಹಲಿಗೆ ಆಮ್ಲಜನಕದ ಹೆಚ್ಚುವರಿ ಪೂರೈಕೆಯು ಆಮ್ಲಜನಕದ ಅಗತ್ಯವಿರುವ ಇತರ ರಾಜ್ಯಗಳ ಮೇಲೆ ಪರಿಣಾಮ ಬೀರಿತ್ತು,'' ಎಂದು ಕೂಡಾ ಉಲ್ಲೇಖಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, "ನಾವು ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಅಂತಹ ಯಾವುದೇ ವರದಿಗೆ ಸದಸ್ಯರು ಸಹಿ ಮಾಡಿಲ್ಲ ಅಥವಾ ಅಂಗೀಕರಿಸಿಲ್ಲ ಎಂದು ತಿಳಿಸಿದ್ದಾರೆ. ಇದು ಬಿಜೆಪಿ ಮಾಡಿದ ಒಂದು ಚೇಷ್ಟೆಯ ಕೃತ್ಯ. ಇದು ಸಂಪೂರ್ಣ ಸುಳ್ಳು. ಬಿಜೆಪಿಗೆ ನಾಚಿಕೆಯಾಗಬೇಕು," ಎಂದು ಟೀಕಿಸಿದ್ದಾರೆ.
Recommended Video
ಈ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಸುಪ್ರೀಂ ಕೋರ್ಟ್ನ ಈ ಸಮಿತಿಯ ನೇತೃತ್ವ ವಹಿಸಿದ್ದ ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ ಹೇಳಿಕೆ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿಕೆಗಳನ್ನು ಉಲ್ಲೇಖಿಸಿ #BJPExposedAgain ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದೆ.
(ಒನ್ಇಂಡಿಯಾ ಸುದ್ದಿ)