ರಾಜ್ಯಸಭಾ ಉಪಸಭಾಪತಿ ಚುನಾವಣೆಯನ್ನು ಬಹಿಷ್ಕರಿಸಲು AAP ನಿರ್ಧಾರ
ನವದೆಹಲಿ, ಆಗಸ್ಟ್ 09: ರಾಜ್ಯಸಭಾ ಉಪಸಭಾಪತಿ ಆಯ್ಕೆಗೆ ಇಂದು ನಡೆಯಲಿರುವ ಚುನಾವಣೆಯನ್ನು 'ಬಹಿಷ್ಕರಿಸಲು' ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.
ರಾಜ್ಯಸಭೆ ಉಪಸಭಾಪತಿಯಾಗಿದ್ದ ಪಿ ಜೆ ಕುರಿಯನ್ ಅವರ ಅಧಿಕಾರಾವಧಿ ಜು. 1 ರಂದು ಮುಕ್ತಾಯವಾಗಿದ್ದು, ಆ ಸ್ಥಾನಕ್ಕಾಗಿ ಚುನಾವಣೆ ನಡೆಯುತ್ತಿದೆ.
LIVE: ರಾಜ್ಯಸಭೆ ಉಪಸಭಾಪತಿ ಚುನಾವಣೆಗೆ ಕ್ಷಣಗಣನೆ
"ರಾಹುಲ್ ಗಾಂಧಿ ಅವರಿಗೆ ನರೇಂದ್ರ ಮೋದಿಯವರನ್ನು ತಬ್ಬಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದಾದರೆ, ನಮ್ಮ(ಎಎಪಿ) ಬಳಿ ಬೆಂಬಲ ಕೇಳುವುದಕ್ಕೂ ಸಾಧ್ಯವಿತ್ತು. ಆದರೆ ಅವರು ನಮ್ಮ ಬೆಂಬಲ ಕೇಳಲಿಲ್ಲ. ಆದ್ದರಿಂದ ಈ ಚುನಾವಣೆಯನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ" ಕೇಜ್ರಿವಾಲ್ ಹೇಳಿದ್ದಾರೆ.
ಇದಕ್ಕೂ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎನ್ ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರಿಗೆ ಬೆಂಬಲ ನೀಡುವಂತೆ ಎಎಪಿಯನ್ನು ಮನವಿ ಮಾಡಿದ್ದರಾದರೂ ಈ ಮನವಿಯನ್ನು ಕೇಜ್ರಿವಾಲ್ ತಿರಸ್ಕರಿಸಿದ್ದರು.
ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್, ಎನ್ ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್, ಎನ್ ಸಿಪಿ ಸಂಸದೆ ವಂದನಾ ಚವಾನ್ ಸ್ಪರ್ಧೆಯಲ್ಲಿದ್ದಾರೆ.
245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗಿತ್ತು ಇಂದು ಸಂಜೆಯ ಹೊತ್ತಿಗೆ ಫಲಿತಾಂಶ ತಿಳಿಯಲಿದೆ.