ಕೇಜ್ರಿವಾಲ್ ಸರ್ಕಾರದ ನಿರ್ಲಕ್ಷ್ಯದಿಂದ ನಿರ್ಭಯಾ ಅಪರಾಧಿಗಳ ಗಲ್ಲು ವಿಳಂಬ: ಜಾವಡೇಕರ್
ನವದೆಹಲಿ, ಜನವರಿ 16: ನಿರ್ಭಯಾ ಪ್ರಕರಣದ ಅಪರಾಧಿಗಳ ಮರಣದಂಡನೆ ವಿಳಂಬವಾಗಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಆರೋಪಿಸಿದರು.
ಸುಪ್ರೀಂಕೋರ್ಟ್ 2017ರಲ್ಲಿಯೇ ಮರಣದಂಡನೆ ವಿರುದ್ಧ ಅಪರಾಧಿಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಆದರೆ ಕೇಜ್ರಿವಾಲ್ ಸರ್ಕಾರವು ಅಪರಾಧಿಗಳಿಗೆ ಡೆತ್ ನೋಟಿಸ್ ನೀಡಲು ಎರಡೂವರೆ ವರ್ಷ ತೆಗೆದುಕೊಂಡಿತು ಎಂದು ಅವರು ಹೇಳಿದರು.
ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬ ಏಕೆ?
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾವಡೇಕರ್, ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ವಾರದೊಳಗೇ ನೋಟಿಸ್ ಹೊರಡಿಸಿದ್ದರೆ ಈ ವೇಳೆಗೆ ಅವರನ್ನು ನೇಣಿಗೇರಿಸಲಾಗಿರುತ್ತಿತ್ತು. ದೇಶಕ್ಕೆ ನ್ಯಾಯ ಸಿಗುತ್ತಿತ್ತು ಎಂದು ಹೇಳಿದರು.
ನ್ಯಾಯಾಲಯದ ಆದೇಶದಂತೆ ನಾಲ್ವರು ಅಪರಾಧಿಗಳನ್ನು ಜ.22ರಂದು ಗಲ್ಲುಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಏಕೆಂದರೆ ಅಪರಾಧಿಗಳಲ್ಲಿ ಒಬ್ಬಾತ ಮುಕೇಶ್ ಸಿಂಗ್ ಸಲ್ಲಿಸಿರುವ ಕ್ಷಮಾದಾನದ ಅರ್ಜಿ ಬಾಕಿ ಇದೆ. ಅದು ಇತ್ಯರ್ಥವಾಗುವವರೆಗೂ ಮರಣದಂಡನೆ ಜಾರಿ ಮಾಡಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಹೈಕೋರ್ಟ್ಗೆ ತಿಳಿಸಿತ್ತು.
ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ದೆಹಲಿ ಸರ್ಕಾರ ಗುರುವಾರ ತಿರಸ್ಕರಿಸಿದೆ. ಬಳಿಕ ಕ್ಷಮಾದಾನದ ಅರ್ಜಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ರವಾನಿಸಲಾಗಿದ್ದು, ಅವರು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ.
ನಿರ್ಭಯಾ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತ
ಈ ಅರ್ಜಿ ರಾಷ್ಟ್ರಪತಿಯವರ ಬಳಿ ಹೋಗಿ ಅಲ್ಲಿ ತಿರಸ್ಕೃತವಾದರೆ ಬಳಿಕವೇ ಗಲ್ಲುಶಿಕ್ಷೆ ಜಾರಿಯಾಗಲಿದೆ. ಆ ನಡುವೆ ಇತರೆ ಅಪರಾಧಿಗಳಲ್ಲಿ ಒಬ್ಬರು ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಪ್ರಕ್ರಿಯೆ ಮತ್ತೆ ವಿಳಂಬವಾಗಲಿದೆ.