ಇವರೇನೂ ಶ್ರೀಮಂತರಲ್ಲ, ಆದರೂ ಕೊರಳಿಗೆ ಈರುಳ್ಳಿ ಮಾಲೆ!
ದೆಹಲಿ, ಡಿಸೆಂಬರ್.03: ಈರುಳ್ಳಿ, ಈರುಳ್ಳಿ, ಈರುಳ್ಳಿ, ಎಲ್ಲೆಲ್ಲೂ ಈರುಳ್ಳಿಯದ್ದೇ ಸದ್ದು. ದೇಶದಲ್ಲಿ ಇದೀಗ ಈರುಳ್ಳಿ ಖರೀದಿಸುವವರೇ ಶ್ರೀಮಂತ ಎನ್ನುವಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಏಕೆಂದರೆ ಈರುಳ್ಳಿಯ ಬೆಲೆ ಅಷ್ಟರ ಮಟ್ಟಿಗೆ ಗಗನಕ್ಕೇರಿದೆ.
ಒಂದು ಕೆ.ಜಿ ಈರುಳ್ಳಿ ಬೆಲೆ ನೂರು ರೂಪಾಯಿ ಗಡಿ ದಾಟಿ ಹೋಗಿದೆ. ದೇಶದಲ್ಲಿ ಈರುಳ್ಳಿ ಕತ್ತರಿಸುವಾಗಲ್ಲ, ಅದನ್ನು ಖರೀದಿಸುವಾಗಲೇ ಬಡವರ ಕಣ್ಣಲ್ಲಿ ನೀರು ಬರುತ್ತಿದೆ. ಇದಕ್ಕೆಲ್ಲ ಏನು ಕಾರಣ ಎಂಬುದನ್ನು ಇಲ್ಲೊಬ್ಬ ಸಂಸದರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಳಿಕೆಯಾದ ಈರುಳ್ಳಿ ಬೆಲೆ, ಗ್ರಾಹಕನ ನಿಟ್ಟುಸಿರು, ಸದ್ಯದ ದರವೆಷ್ಟು?
ದೆಹಲಿಯ ಸಂಸತ್ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಸುಶೀಲ್ ಗುಪ್ತಾ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈರುಳ್ಳಿಯ ಮಾಲೆ ಧರಿಸಿ ಬಂದ ಇಬ್ಬರು ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಈರುಳ್ಳಿ ಮಾಲೆ ಧರಿಸಿ ಬಂದ ಸಂಸದರು!
ಹೌದು, ಈರುಳ್ಳಿ ಮಾಲೆ ಹಾಕಿಕೊಂಡು ಬಂದ ಆಪ್ ಸಂಸದ ಸಂಜಯ್ ಸಿಂಗ್ ಹಾಗೂ ಸುಶೀಲ್ ಗುಪ್ತಾ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ರೈತರು ಬೆಳೆದ ಈರುಳ್ಳಿಗೆ ಸರ್ಕಾರವು ಬೆಂಬಲ ಬೆಲೆ ನೀಡುತ್ತಿಲ್ಲ. ರೈತರಿಂದ ಈರುಳ್ಳಿಯನ್ನು ಸರ್ಕಾರ ಖರೀದಿಸುತ್ತಿಲ್ಲ.
ದೇಶದಲ್ಲಿ ರೈತರು ಬೆಳೆದಿದ್ದ 32 ಸಾವಿರ ಟನ್ ನಷ್ಚು ಈರುಳ್ಳಿ ಈಗಾಗಲೇ ಕೊಳೆತು ಹಾಳಾಗಿ ಹೋಗಿದೆ. ಹೀಗಿದ್ದರೂ ಕೂಡಾ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತ ಸಂಸದರು ಆಕ್ರೋಶ ವ್ಯಕ್ತಪಡಿಸಿದರು.