ಶಾಸಕರ ಅನರ್ಹತೆ : ಮಂಗಳವಾರ ಆಪ್ ನಿಂದ ಮತ್ತೊಂದು ಅರ್ಜಿ!
ನವದೆಹಲಿ, ಜನವರಿ 22 : ಸಂಸದೀಯ ಕಾರ್ಯದರ್ಶಿ ಹುದ್ದೆ ಹೊಂದಿದ್ದಾರೆಂದು ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಿ ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ಮಂಗಳವಾರ ಮತ್ತೊಂದು ಅರ್ಜಿ ಹೂಡಲು ಪಕ್ಷ ನಿರ್ಧರಿಸಿದೆ.
ಚುನಾವಣಾ ಆಯೋಗ ಈ 20 ಶಾಸಕರನ್ನು ಅನರ್ಹಗೊಳಿಸಿ ಹೊರಡಿಸಿದ ಆದೇಶಕ್ಕೆ ತಡೆಯೊಡ್ಡಬೇಕೆಂದು ಕೋರಿದ್ದ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಚುನಾವಣಾ ಆಯೋಗದ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿರುವುದರಿಂದ ಈಗ ಹೂಡಲಾಗಿರುವ ಅರ್ಜಿ ಅನೂರ್ಜಿತಗೊಂಡಿದೆ.
ಎಎಪಿ ಶಾಸಕರ ಅನರ್ಹತೆ 'ತುಘ್ಲಕ್ ಶಾಹಿ' ಕ್ರಮ: ಯಶವಂತ್ ಸಿನ್ಹಾ ಗರಂ
ಒಂದು ವೇಳೆ, ದೆಹಲಿ ಹೈಕೋರ್ಟ್ ಕೂಡ ಆಮ್ ಆದ್ಮಿ ಪಕ್ಷದ ಮನವಿಯನ್ನು ತಿರಸ್ಕರಿಸಿದರೆ, ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಲು ಪಕ್ಷ ನಿರ್ಧರಿಸಿದೆ. ಶಾಸಕರ ಅನರ್ಹತೆ ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆಪ್ ಬಣ್ಣಿಸಿದ್ದು, ಕೇಂದ್ರ ಸರಕಾರ ಆಪ್ ಅನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದೆ ಎಂದು ದೂರಿದೆ.
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ಮೇಲೆ ಕೆಂಡ ಕಾರಿದ್ದು, ಶಾಸಕರನ್ನು ಅನರ್ಹಗೊಳಿಸಿದ್ದು ಅನೈತಿಕವಾಗಿದೆ ಮತ್ತು ಪಕ್ಷಪಾತದಿಂದ ಕೂಡಿದೆ. ಪಕ್ಷದ ಶಾಸಕರನ್ನು ಗೋಳುಹೊಯ್ಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದಿದ್ದಾರೆ. ಹಿಂದೆ ನನ್ನ ಮೇಲೆ ಸಿಬಿಐ ದಾಳಿ ನಡೆಸಿದ್ದರೂ ಏನೂ ಸಿಕ್ಕಿರಲಿಲ್ಲ. ಈಗ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
20 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿಗಳಿಂದ ಅಂಕಿತ
ಅನರ್ಹಗೊಂಡವರು, ಅಲ್ಕಾ ಲಾಂಬಾ, ಆದರ್ಶ್ ಶಾಸ್ತ್ರೀ, ಸಂಜೀವ್ ಝಾ, ರಾಜೇಶ್ ಗುಪ್ತಾ, ಕೈಲಾಶ್ ಗೆಹ್ಲೋಟ್, ವಿಜೇಂದ್ರ ಗರ್ಗ್, ಪ್ರವೀಣ್ ಕುಮಾರ್, ಶರದ್ ಕುಮಾರ್, ಮದನ್ ಲಾಲ್ ಖುಫಿಯಾ, ಶಿವ್ ಚರಣ್ ಗೋಯಲ್, ಸರಿತಾ ಸಿಂಗ್, ನರೇಶ್ ಯಾದವ್, ರಾಜೇಶ್ ರಿಷಿ, ಅನಿಲ್ ಕುಮಾರ್, ಸೋಮ್ ದತ್, ಅವ್ತಾರ್ ಸಿಂಗ್, ಸುಖವೀರ್ ಸಿಂಗ್ ದಾಲಾ, ಮನೋಜ್ ಕುಮಾರ್ ಮತ್ತು ನಿತಿನ್ ತ್ಯಾಗಿ.