ಆಮ್ ಆದ್ಮಿ ಪಕ್ಷದ ಶಾಸಕ ಸಂದೀಪ್ ಕುಮಾರ್ ಅನರ್ಹ
ನವದೆಹಲಿ, ಆಗಸ್ಟ್ 21: ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕಪಿಲ್ ಮಿಶ್ರಾ ಅವರು ಬಿಜೆಪಿ ಸೇರಿದ ಬೆನ್ನಲ್ಲೇ ಎಎಪಿ ಶಾಸಕರನ್ನು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅನರ್ಹಗೊಳಿಸಿದ್ದಾರೆ.
ಕಪಿಲ್ ಅವರಲ್ಲದೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ರಿಚಾ ಸಿಂಗ್ ಕೂಡ ಬಿಜೆಪಿ ಸೇರಿದ್ದಾರೆ. ಇವರನ್ನು ಕೂಡಾ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಎಎಪಿ ವಿರುದ್ಧ ದೆಹಲಿ ಹೈಕೋರ್ಟಿನಲ್ಲಿ ಕಪಿಲ್ ಮಿಶ್ರಾ ಮೊಕದ್ದಮೆ ಹೂಡಿದ್ದಾರೆ.
ಎಎಪಿಗೆ ರಾಜೀನಾಮೆ ಸಲ್ಲಿಸಿ, ಪಕ್ಷ ತೊರೆದ ಶಾಸಕಿ ಅಲ್ಕಾ ಲಂಬಾ
ಈಗ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೊಯೆಲ್ ಅವರು ಮಂಗಳವಾರ(ಆಗಸ್ಟ್ 20)ದಂದು ಪಕ್ಷಾಂತರ ನಿಷೇಧ ಕಾಯ್ದೆ ಆರೋಪದ ಮೇಲೆ ಶಾಸಕ ಸಂದೀಪ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದಾರೆ. ಕುಮಾರ್ ಅವರು ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದ್ದರು.
ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ಖಾತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವರಾಗಿ ಕುಮಾರ್ ಕಾರ್ಯ ನಿರ್ವಹಿಸಿದ್ದರು.
ಸುಲ್ತಾನ್ ಪುರ್ ಮಾಜ್ರಾ ಕ್ಷೇತ್ರದ ಎಎಪಿ ಶಾಸಕರಾಗಿರುವ ಸಂದೀಪ್ ಅವರು ಬಿಎಸ್ಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯುಳ್ಳ ವಿಡಿಯೋಗಳನ್ನು ಗ್ರೇಟರ್ ಕೈಲಾಶ್ ಶಾಸಕ, ವಕ್ತಾರ ಸೌರಭ್ ಭಾರದ್ವಾಜ್ ಅವರು ಸಾಕ್ಷಿಯಾಗಿ ನೀಡಿದ್ದರು.
"ಸೌರಭ್ ಅವರು ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆ, ವಿಡಿಯೋ ಎಲ್ಲವೂ ನಕಲಿ" ಎಂದು ಕುಮಾರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರುವುದಾಗಿ ಹೇಳಿದ್ದ ಎಎಪಿ ಶಾಸಕರಾದ ದೇವೇಂದ್ರ ಶೆರಾವತ್ ಹಾಗೂ ಅನಿಲ್ ಬಾಜ್ಪೇಯಿ ಅವರ ಮೇಲೂ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಕ್ರಮಕ್ಕೆ ಎಎಪಿ ಮುಂದಾಗಿದೆ. ಈ ಇಬ್ಬರು ಶಾಸಕರು ಇನ್ನೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿಲ್ಲ ಎನ್ನಲಾಗಿದೆ.