ಮುಂದುವರಿದ ಕೇಜ್ರಿವಾಲ್ ಧರಣಿ: ಪ್ರಧಾನಿ ಮೋದಿ ಕೊಂಚ ಓಗೊಡಬಾರದೇ?
ನವದೆಹಲಿ, ಜೂ 16: ದೆಹಲಿಯನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಿ ಕೇಂದ್ರ ಸರಕಾರ ಅನುಮೋದನೆ ನೀಡಿದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ 'ಮುಕ್ತ ಪ್ರಚಾರ' ಮಾಡುವುದಾಗಿ ಹೇಳಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದ್ಯ ಧರಣಿ ಕೂತಿದ್ದು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.
ಐಎಎಸ್ ಅಧಿಕಾರಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಸತತ ಆರು ದಿನಗಳಿಂದ ಧರಣಿ ಕೂತಿರುವ ಕೇಜ್ರಿವಾಲ್, ಶುಕ್ರವಾರ (ಜೂ 15) ಬಿಜೆಪಿ ವಿರುದ್ದ ಕಿಡಿಕಾರಿದ್ದರು. ಅದರ ಬೆನ್ನಲ್ಲೇ, ಪ್ರಧಾನಮಂತ್ರಿ ಮಧ್ಯಪ್ರವೇಶಿಸಬೇಕೆಂದು ಮೋದಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.
ಕೇಜ್ರಿವಾಲ್ ಧರಣಿಯನ್ನು ಗೇಲಿ ಮಾಡಿದ ಬಿಜೆಪಿ
ತಮ್ಮ ಕ್ಯಾಬಿನೆಟ್ ಸಹದ್ಯೋಗಿಗಳಾದ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ ಜೊತೆ ದೆಹಲಿ ಲೆ.ಗ ಅನಿಲ್ ಬೈಜಾಲ್ ಕಚೇರಿಯಲ್ಲಿ ಸಿಎಂ ಧರಣಿ ಕೂತಿದ್ದು, ನಾಲ್ಕು ತಿಂಗಳಿಂದ ಕೆಲಸ ಮಾಡದೆ ಪ್ರತಿಭಟನೆಯಲ್ಲಿ ತೊಡಗಿರುವ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಪ್ರಧಾನಮಂತ್ರಿ ಕಚೇರಿಯಲ್ಲಿ ಪ್ರಮುಖ ಅಧಿಕಾರಿಗಳು ಇಲ್ಲದೇ ಇದ್ದಲ್ಲಿ ನಿಮಗೆ ಆಡಳಿತ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ತಮ್ಮ ನಿರಸನವನ್ನು ಮುಕ್ತಾಯಗೊಳಿಸುವಂತೆ ನೀವು ಸೂಚಿಸಬೇಕು.
ನಾನು ಧರಣಿ ಕೂತಿರುವುದು ನನಗಾಗಿ ಅಥವಾ ನಮ್ಮ ಪಕ್ಷಕ್ಕಾಗಿ ಅಲ್ಲ, ದೆಹಲಿಯ ಜನತೆಗಾಗಿ. ಐಎಎಸ್ ಅಧಿಕಾರಿಗಳು ಧರಣಿ ಹಿಂದಕ್ಕೆ ಪಡೆದುಕೊಂಡರೆ, ಭಾನುವಾರದ ನಿತಿ ಆಯೋಗದ ಮುಖ್ಯಮಂತ್ರಿಗಳ ಸಭೆಯಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಕೇಜ್ರಿವಾಲ್, ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕೇಜ್ರಿವಾಲ್ ಬಿಜೆಪಿ ಬೆಂಬಲಿಸುತ್ತಾರಂತೆ, ಆದರೆ ಷರತ್ತುಗಳು ಅನ್ವಯ
ಸೋಮವಾರ ಸಂಜೆಯಿಂದ ನಾವು ಧರಣಿ ಕೂತಿದ್ದರೂ, ಲೆ.ಗ ಬೈಜಾಲ್, ಐಎಎಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವ ಯಾವ ಪ್ರಯತ್ನಕ್ಕೂ ಮುಂದಾಗಿಲ್ಲ. ಇವರ ಕಾರ್ಯವೈಖರಿ ನೋಡಿದರೆ, ಅಧಿಕಾರಿಗಳ ಮನವೊಲಿಸುವ ಕೆಲಸವನ್ನು ಅವರು ಮಾಡುವುದೂ ಇಲ್ಲ ಎಂದು ಕೇಜ್ರಿವಾಲ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ಸಮಸ್ಯೆ: 19.02.2018ರಂದು ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಇಬ್ಬರು ಎಎಪಿ ಶಾಸಕರು ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ್ದರು. ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸರಕಾರದ ಯೋಜನೆಯ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಶಾಸಕರ ನಡುವೆ ಕಾವೇರಿದ ವಾಗ್ವಾದ ನಡೆದು ಹಲ್ಲೆಯಲ್ಲಿ ಅಂತ್ಯವಾಗಿತ್ತು. ಆದರೆ, ಈ ಎಲ್ಲಾ ಘಟನೆಗಳನ್ನು ಕೇಜ್ರಿವಾಲ್ ತಳ್ಳಿ ಹಾಕಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ತುರ್ತು ಸಭೆ ಕರೆದ ಐಎಎಸ್ ಅಧಿಕಾರಿಗಳ ಒಕ್ಕೂಟ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಶಾಸಕರ ವಿರುದ್ಧ ಪೊಲೀಸ್ ಕೇಸ್ ದಾಖಲಿಸುವಂತೆ ಒತ್ತಾಯಿಸಿತ್ತು. ಜೊತೆಗೆ, ನಾವು ತಕ್ಷಣದಿಂದಲೇ ಪ್ರತಿಭಟನೆ ನಡೆಸಲಿದ್ದೇವೆ. ನಾವು ನಮ್ಮ ಮುಖ್ಯ ಕಾರ್ಯದರ್ಶಿ ಜತೆಗೆ ನಿಲ್ಲಲಿದ್ದೇವೆ. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ನಾವು ಹಿಂಜರಿಯುವುದಿಲ್ಲ, ಎಂದು ಅಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.