ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ?
ನವದೆಹಲಿ, ಫೆಬ್ರವರಿ 12: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಫೆ,16ರಂದು ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇಜ್ರಿವಾಲ್ ಜೊತೆಗೆ ಸಂಪುಟ ದರ್ಜೆಯ ಎಲ್ಲಾ ಸಚಿವರು ಅಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೇಜ್ರಿ 3.0 ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸ ಮುಖಗಳಿಗೆ ಆದ್ಯತೆ ಸಿಗುವುದು ಬಹುತೇಕ ಕಡಿಮೆ ಎಂಬ ಸುದ್ದಿ ಬಂದಿದೆ.
ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ!
ಹೀಗಾಗಿ, ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿರುವ ಆತಿಶಿ ಮಾರ್ಲೆನ ಹಾಗೂ ರಾಘವ್ ಛಡ್ಡಾಗೆ ಅವಕಾಶ ಸಿಗುತ್ತಿಲ್ಲ. ಬಹುತೇಕ ಈ ಹಿಂದಿನ ಸಂಪುಟ ದರ್ಜೆ ಸಚಿವರು ಮುಂದುವರೆಯುವ ಲಕ್ಷಣಗಳು ಕಂಡು ಬಂದಿವೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ನಂತರದ ಸ್ಥಾನದಲ್ಲಿ ಗೋಪಾಲ್ ರಾಯ್, ಸತ್ಯೇಂದ್ರ ಜೈನ್ ಇರಲಿದ್ದಾರೆ. 7ಕ್ಕಿಂತ ಅಧಿಕ ಸಚಿವರನ್ನು ಹೊಂದುವುದು ಕಷ್ಟವಾಗಲಿದ್ದು, 3 ಸ್ಥಾನಗಳನ್ನು ಮಾತ್ರ ತುಂಬಲು ಕೇಜ್ರಿವಾಲ್ ಧೈರ್ಯ ಮಾಡಬಹುದು.
ಅತಿಶಿಗೆ ಅವಕಾಶ ನೀಡಿದರೆ ಶಿಕ್ಷಣ ಖಾತೆ
ಅತಿಶಿಗೆ ಅವಕಾಶ ನೀಡಿದರೆ ಶಿಕ್ಷಣ ಖಾತೆ, ರಾಘವ್ ಛಡ್ಡಾಗೆ ಹಣಕಾಸು ಖಾತೆ ಸಿಗಬಹುದು. ಈ ಎರಡು ಖಾತೆಗಳನ್ನು ಉಪ ಮುಖ್ಯಮಂತ್ರಿಯಾಗಿ ಸಿಸೋಡಿಯಾ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಭಾಯಿಸಿದ್ದರು. ಮಿಕ್ಕಂತೆ ಸಚಿವರಾದ ರಾಜೇಂದ್ರ ಪಾಲ್ ಗೌತಮ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಕೂಡಾ ಈ ಬಾರಿ ಕ್ಯಾಬಿನೆಟ್ ನಲ್ಲಿ ಮುಂದುವರೆಯುವಾಸೆ ಇರಿಸಿಕೊಂಡಿದ್ದಾರೆ. ಎಲ್ಲಕ್ಕೂ ಫೆ.16ರಂದು ಉತ್ತರ ಸಿಗಲಿದೆ.
ಆತಿಶಿ ಪಡೆದ ಸಂಭಾವನೆ ಒಂದು ರುಪಾಯಿ ಮಾತ್ರ
ಈ ಹಿಂದಿನ ಎಎಪಿ ಸರ್ಕಾರದಲ್ಲಿ ಮನೀಶ್ ಸಿಸೋಡಿಯಾ ಶಿಕ್ಷಣ ಸಚಿವರಾಗಿದ್ದಾಗ ಆತಿಶಿ ಅವರು ಶೈಕ್ಷಣಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ದೆಹಲಿಯ ಸರ್ಕಾರಿ ಶಾಲೆಗಳ ಸ್ವರೂಪ ಬದಲಾಯಿಸಿದ ಆತಿಶಿ, ಎರಡು ವರ್ಷಗಳ ಅವಧಿಯಲ್ಲಿ ಭಾರಿ ಬದಲಾವಣೆ ತಂದವರು. ಆತಿಶಿ ಹುದ್ದೆ ಬಗ್ಗೆ ಕೂಡಾ ತಗಾದೆ ತೆಗೆಯಲಾಯಿತು. ಹುದ್ದೆಗೆ ಮಾನ್ಯತೆ ಇಲ್ಲ ಎನ್ನಲಾಯಿತು. ಆದರೆ, ಸುಧಾರಣೆಗಾಗಿ ಶ್ರಮಿಸಿದ ಆತಿಶಿ ಪಡೆದ ಸಂಭಾವನೆ ಒಂದು ರುಪಾಯಿ ಮಾತ್ರ.
ಮೊಹಲ್ಲಾ ಸಭೆ ನಡೆಸಿದ್ದ ಆತಿಶಿ
ಇದಲ್ಲದೆ ಕೇಜ್ರಿವಾಲ್ ಸರ್ಕಾರದ ಪ್ರಮುಖ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಕನಸು ಹೊತ್ತು ಮೊಹಲ್ಲಾ ಸಭೆಗಳನ್ನು ಆಯೋಜಿಸಿದ್ದ ಆತಿಶಿ ಕನಸಿಗೆ ರಾಜ್ಯಪಾಲರು ಬ್ರೇಕ್ ಹಾಕಿದ್ದರು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆತಿಶಿ ವಿರುದ್ಧ ಅಶ್ಲೀಲ ಕರಪತ್ರ ಹಂಚಿ ತೇಜೋವಧೆ ಮಾಡಲು ಯತ್ನಿಸಲಾಯಿತು. ಕ್ರಿಕೆಟರ್ ಕಮ್ ರಾಜಕಾರಣಿ ಗೌತಮ್ ಗಂಭೀರ್ ವಿರುದ್ಧ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆತಿಶಿಗೆ ಗೆಲುವು ಸಿಗಲಿಲ್ಲ. ಆದರೆ ಈ ಬಾರಿ ವಿಧಾನಸಭೆಗೆ ಪ್ರವೇಶ ಬಯಸಿ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಧರ್ಮಭೀರ್ ಸಿಂಗ್ ವಿರುದ್ಧ 11,393 ಮತಗಳ ಅಂತರದಿಂದ ಗೆಲುವು ದಾಖಲಿಸಿ ಶಾಸಕಿಯಾಗಿದ್ದಾರೆ.
ರಾಘವ್ ಛಡ್ಡಾ ಮೊದಲ ಬಾರಿಗೆ ಗೆಲುವಿನ ರುಚಿ
ರಾಜೀಂದ್ರ ನಗರದಿಂದ ಸ್ಪರ್ಧಿಸಿದ್ದ ರಾಘವ್ ಛಡ್ಡಾ ಮೊದಲ ಬಾರಿಗೆ ಗೆಲುವಿನ ರುಚಿ ಕಂಡಿದ್ದು, ಬಿಜೆಪಿ ಸ್ಪರ್ಧಿ ಸರ್ದಾರ್ ಆರ್ ಪಿ ಸಿಂಗ್ ವಿರುದ್ಧ 20,058 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆತಿಶಿಯಂತೆ ರಾಘವ್ ಕೂಡಾ ಕಳೆದ ಲೋಕಸಭೆಯಲ್ಲಿ ಸ್ಪರ್ಧಿಸಿ, ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋಲು ಕಂಡಿದ್ದರು.