ದೆಹಲಿ ವಿಧಾನಸಭೆ ಚುನಾವಣೆ: ಬಿಜೆಪಿಗೆ ಕುಮಾರ್ ವಿಶ್ವಾಸ್ ಸೇರ್ಪಡೆ?
ನವದೆಹಲಿ, ಜನವರಿ 15: ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಹೊಸ ಶಕ್ತಿ ಬಂದಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಬಲವನ್ನು ಎದುರಿಸಲು ಅದೇ ಪಕ್ಷದ ಮಾಜಿ ಮುಖಂಡರೊಬ್ಬರ ಬಲ ಸಿಗುವ ಸೂಚನೆ ಸಿಕ್ಕಿದೆ.
ಎಎಪಿಯಲ್ಲಿನ ಬಂಡಾಯವೆದ್ದು ಪಕ್ಷದಿಂದ ಹೊರಗೆ ಬಂದಿದ್ದ ಪ್ರಭಾವಿ ನಾಯಕ ಕುಮಾರ್ ವಿಶ್ವಾಸ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಕುಮಾರ್ ವಿಶ್ವಾಸ್ ಆಗಮನ ಬಿಜೆಪಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದರೆ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಗಳ ಸಾಲಿನಲ್ಲಿ ಮುಂಚೂಣಿಗೆ ಬರಲಿದ್ದಾರೆ. ಎಎಪಿಯನ್ನು ಎದುರಿಸಲು ಸೂಕ್ತ ಅಭ್ಯರ್ಥಿ ಆಯ್ಕೆಯ ಹುಡುಕಾಟದಲ್ಲಿರುವ ಬಿಜೆಪಿ ಕುಮಾರ್ ವಿಶ್ವಾಸ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲತಃ ಕವಿ ಮತ್ತು ಅಧ್ಯಾಪಕರಾಗಿರುವ ಕುಮಾರ್ ವಿಶ್ವಾಸ್, 2005ರಿಂದಲೂ ಅರವಿಂದ್ ಕೇಜ್ರಿವಾಲ್ ಜತೆಗಿದ್ದರು. ಅಣ್ಣಾ ಹಜಾರೆ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಪಕ್ಷ ಸೇರ್ಪಡೆ ಸುದ್ದಿ
ಕುಮಾರ್ ವಿಶ್ವಾಸ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಹರಡಿತ್ತು. ಲೋಕಸಭೆ ಚುನಾವಣೆಯಲ್ಲಿ ಎಎಪಿಯ ಆತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರದಿಂದ ವಿಶ್ವಾಸ್ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಣಕ್ಕಿಳಿದು ಜಯಗಳಿಸಿದ್ದರು. ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂಬ ವದಂತಿ ಹರಡಿದ್ದರೂ, ವಿಶ್ವಾಸ್ ರಾಜಕೀಯ ಕಣದಲ್ಲಿ ಕಾಣಿಸಿರಲಿಲ್ಲ.
ದೆಹಲಿ ಚುನಾವಣೆ: ಬಿಜೆಪಿ ಮಿತ್ರಪಕ್ಷ ಎಲ್ ಜೆಪಿ ಕೂಡಾ ಕಣಕ್ಕೆ
ಅಮೇಥಿಯಿಂದ ಸ್ಪರ್ಧೆ
2014ರ ಲೋಕಸಭೆ ಚುನಾವಣೆಯಲ್ಲಿ ಕುಮಾರ್ ವಿಶ್ವಾಸ್ ಅಮೇಥಿ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 2019ರಲ್ಲಿ ಅವರು ರಾಯ್ ಬರೇಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಸಹ ಹೇಳಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ.
ದೆಹಲಿ ವಿಧಾನಸಭೆ ಚುನಾವಣೆ; ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಶ್ವಾಸ್ ವಿರುದ್ಧ ವಿವಿಧ ಆರೋಪ
2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕುಮಾರ್ ವಿಶ್ವಾಸ್ ಮತ್ತು ಶಾಜಿಯಾ ಇಲ್ಮಿ ಸೇರಿದಂತೆ ಎಎಪಿಯ ಕೆಲವು ಸದಸ್ಯರು ಅಕ್ರಮವಾಗಿ ಹಣ ದೇಣಿಗೆ ಸಂಗ್ರಹಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. 2016ರಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಸಹ ಕೇಳಿಬಂದಿತ್ತು.
ದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಕೇಜ್ರಿವಾಲ್ ವಿರುದ್ಧ ಮುನಿಸು
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವೇಳೆ ತಮ್ಮನ್ನು ಕಡೆಗಣಿಸಿದ್ದಕ್ಕೆ ಅರವಿಂದ್ ಕೇಜ್ರಿವಾಲ್ ವಿರುದ್ಧ ವಿಶ್ವಾಸ್ ಮುನಿಸಿಕೊಂಡಿದ್ದರು. ಬಳಿಕ ಇಬ್ಬರ ನಡುವಿನ ಕಲಹ ತೀವ್ರಗೊಂಡಿತ್ತು. ಕುಮಾರ್ ವಿಶ್ವಾಸ್ ಅವರಿಗೆ ಆರೆಸ್ಸೆಸ್ ಜತೆ ನಂಟು ಇದೆ ಎಂದು ಎಎಪಿ ಶಾಸಕರು ಆರೋಪಿಸಿದ್ದರು.