ಬಿಜೆಪಿ ಸೇರ್ಪಡೆಯಾದ ಎಎಪಿಯಿಂದ ಅನರ್ಹಗೊಂಡ ಶಾಸಕ ಮಿಶ್ರಾ
ನವದೆಹಲಿ, ಆಗಸ್ಟ್ 18: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಕಪಿಲ್ ಮಿಶ್ರಾ ಅವರು ಎಎಪಿ ತೊರೆದು, ಭಾರತೀಯ ಜನತಾ ಪಕ್ಷ ಸೇರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದ ಮಿಶ್ರಾರನ್ನು ಕಳೆದ ತಿಂಗಳು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ದೆಹೆಲಿ ಅಸೆಂಬ್ಲಿ ಸ್ಪೀಕರ್ ರಾಮ್ ನಿವಾಸ್ ಗೊಯೆಲ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು.
ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕಪಿಲ್ ಮಿಶ್ರಾ ಅವರು ಶನಿವಾರದಂದು ಬಿಜೆಪಿ ಸೇರಿದ್ದಾರೆ. ಕಪಿಲ್ ಅವರಲ್ಲದೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ರಿಚಾ ಸಿಂಗ್ ಕೂಡ ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ತಿಳಿಸಿದ್ದಾರೆ.
ಎಎಪಿಗೆ ರಾಜೀನಾಮೆ ಸಲ್ಲಿಸಿ, ಪಕ್ಷ ತೊರೆದ ಶಾಸಕಿ ಅಲ್ಕಾ ಲಂಬಾ
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಎಎಪಿ ವಿರುದ್ಧ ದೆಹಲಿ ಹೈಕೋರ್ಟಿನಲ್ಲಿ ಕಪಿಲ್ ಮಿಶ್ರಾ ಮೊಕದ್ದಮೆ ಹೂಡಿದ್ದಾರೆ. ಕರವಾಲ್ನಗರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ಮಿಶ್ರಾ ಅವರು 2017ರಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರುವುದಾಗಿ ಹೇಳಿದ್ದ ಎಎಪಿ ಶಾಸಕರಾದ ದೇವೇಂದ್ರ ಶೆರಾವತ್ ಹಾಗೂ ಅನಿಲ್ ಬಾಜ್ಪೇಯಿ ಅವರ ಮೇಲೂ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಕ್ರಮಕ್ಕೆ ಎಎಪಿ ಮುಂದಾಗಿದೆ. ಈ ಇಬ್ಬರು ಶಾಸಕರು ಇನ್ನೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿಲ್ಲ ಎನ್ನಲಾಗಿದೆ.(ಪಿಟಿಐ)