ಉಪ ಮುಖ್ಯಮಂತ್ರಿ ಸಿಸೋಡಿಯಾ ಮನೆ ಮೇಲೆ ಬಿಜೆಪಿ ಗೂಂಡಾಗಳ ದಾಳಿ: ಎಎಪಿ ಆರೋಪ
ನವದೆಹಲಿ, ಡಿಸೆಂಬರ್ 10: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ಬಿಜೆಪಿಯ ಗೂಂಡಾಗಳು ದಾಳಿ ಮಾಡಿದ್ದಾರೆ ಎಂದು ಎಎಪಿ ಗುರುವಾರ ಆರೋಪಿಸಿದೆ. ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ, ತಾವು ನಡೆಸಿದ ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಹೇಳಿದೆ.
ಬಿಜೆಪಿ ಆಡಳಿತವಿರುವ ಮಹಾನಗರ ಪಾಲಿಕೆಯ ಮೇಯರ್ಗಳು ಮತ್ತು ಮುಖಂಡರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಸಮೀಪ ಪ್ರತಿಭಟನೆ ನಡೆಸಿದ್ದರು. ಜತೆಗೆ ಕೇಜ್ರಿವಾಲ್ ಸರ್ಕಾರ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದರು.
ರೈತರ ಭೇಟಿ: ಅರವಿಂದ್ ಕೇಜ್ರಿವಾಲ್ಗೆ ಗೃಹ ಬಂಧನ
ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಅರವಿಂದ್ ಕೇಜ್ರಿವಾಲ್ ಕೂಡ ಆರೋಪಿಸಿದ್ದಾರೆ. 'ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ನಡೆದ ವ್ಯವಸ್ಥಿತ, ಸಂಘಟಿತ ಮತ್ತು ಹಿಂಸಾತ್ಮಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಮನೆಯಿಂದ ಹೊರಹೋಗಿದ್ದಾಗ ಗೂಂಡಾಗಳು ಪೊಲೀಸರ ಸಮ್ಮುಖದಲ್ಲಿಯೇ ಮನೆಗೆ ನುಗ್ಗಿದ್ದಾರೆ. ಬಿಜೆಪಿಯು ದೆಹಲಿಯಲ್ಲಿ ದಿನದಿಂದ ದಿನಕ್ಕೆ ಏಕೆ ಇಷ್ಟು ಹತಾಶೆಗೊಳ್ಳುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
आज बीजेपी के गुंडे मेरी ग़ैरमौजूदगी में मेरे घर के दरवाज़े तोड़कर अंदर घुस गए और मेरे बीवी बच्चों पर हमला करने की कोशिश की. @AmitShah जी आज आप दिल्ली में राजनीति में हार गए तो अब इस तरह से हमें निपटाएँगे? pic.twitter.com/aDwjz6DR3B
— Manish Sisodia (@msisodia) December 10, 2020
ಸಿಸೋಡಿಯಾ ಅವರ ಮನೆಯೊಳಗೆ ನುಗ್ಗುವ ಗೂಂಡಾಗಳನ್ನು ತಡೆಯುವ ಗೋಜಿಗೆ ಕೂಡ ಪೊಲೀಸರು ಹೋಗಲಿಲ್ಲ. ಬದಲಾಗಿ ಮನೆಯ ಸುತ್ತ ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದರು ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸಿಸೋಡಿಯಾ ನಿವಾಸದ ಹೊರಭಾಗದ ಘಟನೆಯ ವಿಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಗುಂಪೊಂದು ಮನೆಯ ಒಳಗೆ ಬಲವಂತವಾಗಿ ನುಗ್ಗುವುದು ದಾಖಲಾಗಿದೆ. 'ಉಪ ಮುಖ್ಯಮಂತ್ರಿ ಅವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಗೂಂಡಾಗಳು ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ಗೂಂಡಾಗಳಿಗೆ ಈ ಕೃತ್ಯ ಎಸಗಲು ದೆಹಲಿ ಪೊಲೀಸರು ಸಹಾಯ ಮಾಡಿದ್ದಾರೆ' ಎಂದು ಭಾರದ್ವಾಜ್ ಹೇಳಿದ್ದಾರೆ.