ರಿಂಕು ಶರ್ಮಾ ಹತ್ಯೆಗೆ ಅಮಿತ್ ಶಾ ಹೊಣೆ: ಎಎಪಿ ಆರೋಪ
ನವದೆಹಲಿ, ಫೆಬ್ರವರಿ 13: ದೆಹಲಿ ಮಂಗೊಲ್ಪುರಿ ಪ್ರದೇಶದಲ್ಲಿ ಶುಕ್ರವಾರ ನಡೆದ 25 ವರ್ಷದ ಬಿಜೆಪಿ ಕಾರ್ಯಕರ್ತನ ರಿಂಕು ಶರ್ಮಾ ಹತ್ಯೆಗೆ ಗೃಹ ಸಚಿವ ಅಮಿತ್ ಶಾ ಅವರೇ ಜವಾಬ್ದಾರರು ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ.
'ದೆಹಲಿಯಲ್ಲಿ ಕೊಲೆ ಪ್ರಕರಣಗಳು ಈಗ ಸಾಮಾನ್ಯವಾಗಿಬಿಟ್ಟಿದೆ. ಈ ಕೊಲೆಗಳಿಗೆ ಗೃಹ ಸಚಿವರು ಹೊಣೆಗಾರರು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ' ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಕಾರ್ಯಕರ್ತನ ಹತ್ಯೆ: ಕುಟುಂಬದಿಂದ ಕೋಮು ದ್ವೇಷದ ಆರೋಪ
ದೆಹಲಿಯಲ್ಲಿನ ಅಹಿತಕರ ಘಟನೆಗಳಿಗೆ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
'ದೆಹಲಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕೇಂದ್ರ ಗೃಹ ಸಚಿವಾಲಯ ವಿಫಲವಾಗಿರುವುದನ್ನು ಇಂತಹ ಅನೇಕ ಘಟನೆಗಳು ತೋರಿಸುತ್ತವೆ. ಇಂತಹ ಕ್ರೂರ ಕೊಲೆಗಳನ್ನು ನಾವು ಖಂಡಿಸುತ್ತೇವೆ ಮತ್ತು ದೆಹಲಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ನಂಬಿಕೆಯನ್ನು ಜನರಲ್ಲಿ ಮರಳಿ ತರುವಂತೆ ಮಾಡಲು ಸೂಕ್ತ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಲು ಆಗ್ರಹಿಸುತ್ತೇವೆ' ಎಂದರು.
ಬರ್ಥಡೇ ಪಾರ್ಟಿ ವೇಳೆ ವಾಗ್ದಾದ ನಡೆದಿದ್ದು, ಅಲ್ಲಿಂದ ಮನೆಗೆ ಮರಳುತ್ತಿದ್ದ ರಿಂಕು ಶರ್ಮಾ ಅವರನ್ನು ಜನರ ಗುಂಪೊಂದು ಚಾಕುವಿನಿಂದ ಇರಿದು ಕೊಲೆ ಮಾಡಿತ್ತು. ಇದು ಕೋಮು ದ್ವೇಷದ ಕಾರಣ ನಡೆದ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದರು. ಇದನ್ನು ದೆಹಲಿ ಪೊಲೀಸರು ನಿರಾಕರಿಸಿದ್ದರು. ಐವರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿದೆ.